ಮಂಡ್ಯ; ಹೊಯ್ಸಳರ ಕಾಲದ ದೇಗುಲಕ್ಕೆ ಕಾಯಕಲ್ಪ ಎಂದು?
ಮಂಡ್ಯ, ಏಪ್ರಿಲ್ 11; ಭವ್ಯ ಇತಿಹಾಸ ಹೊಂದಿರುವ ನಮ್ಮ ದೇಶದಲ್ಲಿ ಸಾವಿರಾರು ರಾಜವಂಶಗಳು ರಾಜ್ಯಭಾರ ನಡೆಸಿವೆ. ಹೆಚ್ಚಿನ ರಾಜರು ತಮ್ಮ ಆಡಳಿತದ ಕುರುವಾಗಿ ದೇಗುಲಗಳನ್ನು ನಿರ್ಮಿಸಿ ಇಂದಿಗೂ ಅವರ ವಂಶದ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ.
Recommended Video
ರಾಜರು ಕಲೆಯ ಪೋಷಕರಾಗಿದ್ದರು ಜತೆಗೆ ದೈವಭಕ್ತರಾಗಿದ್ದರು ಎಂಬುದಕ್ಕೆ ಸುಂದರ ಶಿಲ್ಪ ಕಲೆಗಳಿಂದ ನಿರ್ಮಾಣಗೊಂಡ ಸಾವಿರಾರು ವರ್ಷಗಳ ಹಿಂದಿನ ದೇಗುಲಗಳೇ ಸಾಕ್ಷಿಯಾಗಿವೆ. ನಗರ, ಪಟ್ಟಣಗಳಲ್ಲಿರುವ ದೇಗುಲಗಳನ್ನು ಜೀರ್ಣೋದ್ಧಾರ ಮಾಡಿ ಸಂರಕ್ಷಿಸುವ ಕೆಲಸವಾಗಿದೆ.
ಹೆಲಿ ಟೂರಿಸಂಗೆ ಆಕ್ಷೇಪ: ಮರಗಳನ್ನು ಉಳಿಸಲು ಅಭಿಯಾನ
ಗ್ರಾಮೀಣ ಪ್ರದೇಶದಲ್ಲಿ ಅಪರೂಪದ ಕಲೆಗಳಿಂದ ನಿರ್ಮಾಣವಾಗಿರುವ ಐತಿಹಾಸಿಕ ದೇಗುಲಗಳಿದ್ದರೂ ಅವುಗಳ ಬಗ್ಗೆ ಗಮನಹರಿಸದೆ, ಅಭಿವೃದ್ಧಿ ಮಾಡದ ಕಾರಣಗಳಿಂದ ಅವು ಭೂ ಒಡಲು ಸೇರುವಂತಹ ಸ್ಥಿತಿಗೆ ಬಂದು ತಲುಪಿವೆ ಎಂದರೆ ತಪ್ಪಾಗಲಾರದು.
ಕೇಂದ್ರೀಕೃತ ಪ್ರವಾಸೋದ್ಯಮ ತಾಣವಾಗಿ ಮೈಸೂರು ಜಿಲ್ಲೆ!
ಇಂತಹ ದೇಗುಲಗಳ ಪೈಕಿ ಈ ದೇವಾಲಯಕ್ಕೊಮ್ಮೆ ಭೇಟಿ ನೀಡಿದರೆ ಇಂತಹ ಐತಿಹಾಸಿಕ ದೇವಾಲಯ ಶಿಥಿಲವಾಗಿ, ಸುತ್ತಮುತ್ತಲಿನ ಪ್ರದೇಶ ಕಾಡುಪಾಲಾಗಿ ದೇಗುಲದ ಒಂದೊಂದೇ ಭಾಗ ಮಣ್ಣು ಸೇರುತ್ತಿರುವುದು ಕಂಡು ಬರುತ್ತದೆ.
ಕಲಬುರಗಿ; ಚಂದ್ರಂಪಳ್ಳಿ ಜಲಾಶಯ ಪ್ರವಾಸಿ ತಾಣವಾಗಿ ಅಭಿವೃದ್ಧಿ
ನಿರ್ಲಕ್ಷ್ಯಕ್ಕೆ ಒಳಗಾದ ದೇವಾಲಯ
ಸಾವಿರಾರು ವರ್ಷಗಳ ಇತಿಹಾಸದ ಹೊಯ್ಸಳೇಶ್ವರ (ಈಶ್ವರ) ದೇವಾಲಯ ಹೀಗೆ ಅವನತಿ ಹಾದಿ ಹಿಡಿಯುವುದು ಬೇಸರದ ಸಂಗತಿಯೇ. ಇವುಗಳೆಲ್ಲವೂ ಮುಂದಿನ ಪೀಳಿಗೆ ಉಳಿಯಲೇ ಬೇಕಾಗಿದೆ. ಆದರೆ ಸಂಬಂಧಿಸಿದವರ ನಿರ್ಲಕ್ಷ್ಯ ಇವತ್ತು ಐತಿಹಾಸಿಕ ಹೊಯ್ಸಳೇಶ್ವರ ದೇಗುಲ ಇತಿಹಾಸದ ಪುಟಗಳಿಂದ ಕಣ್ಮರೆಯಾಗಲು ಸಿದ್ಧವಾದಂತೆ ಗೋಚರವಾಗುತ್ತಿದೆ.
ಹೊಯ್ಸಳರು ನಿರ್ಮಿಸಿದ ದೇಗುಲ
ಈ ದೇಗುಲದ ಕುರಿತಂತೆ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಇದು ಹೊಯ್ಸಳರ ಕಾಲದ್ದು ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ದೇಗುಲದಲ್ಲಿ ಬೇಲೂರು ಹಳೆಬೀಡು ಮಾದರಿಯ ಶಿಲ್ಪಕಲೆಗಳಿವೆ. ಹೊಯ್ಸಳ ದೊರೆ ವಿಷ್ಣುವರ್ಧನನ ಪುತ್ರ ನರಸಿಂಹನು ಯುವರಾಜನಾಗಿ ಮೇಲುಕೋಟೆಯ ಬಳಿಯ ಕೋಡಾಲದ ಬೀಡನ್ನು ಆಳುತ್ತಿದ್ದ ಕಾಲದಲ್ಲಿ ತೆಂಗಿನಘಟ್ಟದಲ್ಲಿ ಮಂಜಯ್ಯಹೆಗ್ಗಡೆ ಎಂಬ ಸೇನಾಧಿಪತಿ ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಈ ದೇಗುಲವನ್ನು ಕಟ್ಟಿಸಿದನೆಂಬುದು ಶಾಸನದಿಂದ ತಿಳಿದುಬಂದ ವಿಚಾರವಾಗಿದೆ.
ನಿರ್ವಹಣೆಯಿಲ್ಲದೆ ಶಿಥಿಲವಾದ ದೇಗುಲ
ಸುಂದರ ವಾಸ್ತುಶಿಲ್ಪ ಕಲೆಗಳಿಂದ ನಿರ್ಮಾಣವಾಗಿರುವ ಹೊಯ್ಸಳೇಶ್ವರ ದೇಗುಲದ ಇವತ್ತಿನ ಸ್ಥಿತಿ ಮಾತ್ರ ಶೋಚನೀಯವಾಗಿದೆ. ದೇಗುಲವು ಕೆರೆಯ ಪಕ್ಕದಲ್ಲಿಯೇ ಇದ್ದರೂ ನಿರ್ವಹಣೆಯಿಲ್ಲದ ಕಾರಣ ಅದರ ಸುತ್ತಲೂ ಕಾಡು ಬೆಳೆದಿವೆ. ಶಿಲೆಯಿಂದ ಕೂಡಿದ ಕಲಾಕೃತಿಗಳ ಗೋಡೆಗಳು ಕಳಾಹೀನವಾಗಿವೆ. ಒಂದೊಂದು ಭಾಗವೂ ಭಗ್ನವಾಗಿದ್ದು, ನೆಲಕ್ಕುರುಳುವ ಸ್ಥಿತಿಯಲ್ಲಿದೆ. ದೇಗುಲದ ನಂದಿ ಮಂಟಪವು ಸಂಪೂರ್ಣವಾಗಿ ಶಿಥಿಲವಾಗಿದ್ದು, ಯಾವಾಗ ಬೇಕಾದರೂ ಧರೆಗುರುಳುವಂತಿದೆ. ದೇವಾಲಯದಲ್ಲಿರುವ ಶಿಖರ, ಭಿತ್ತಿ, ಕಂಬ ಮತ್ತು ಮೇಲ್ಚಾವಣಿಯಲ್ಲಿ ಅಪರೂಪದ ಶಿಲ್ಪಕಲೆಗಳಿದ್ದು, ಇಲ್ಲಿರುವ ಭುವನೇಶ್ವರಿಗಳು ಒಂದಕ್ಕಿಂತ ಒಂದು ವಿಶಿಷ್ಟ, ವಿಭಿನ್ನವಾಗಿ ಅಪರೂಪದ ಕಮಲದ ಮೊಗ್ಗಿನಿಂದ ಆಕರ್ಷಿಸುತ್ತವೆ.
ಭೂಒಡಲು ಸೇರುತ್ತಿರುವ ದೇಗುಲ
ಗರ್ಭಗುಡಿಯಲ್ಲಿರುವ ಶಿವಲಿಂಗವು ನಯನ ಮನೋಹರವಾಗಿದ್ದು ಗರ್ಭಗುಡಿಯ ಬಾಗಿಲ ಮುಂದಿನ ಕೆತ್ತನೆಗಳು ಆಕರ್ಷಕವಾಗಿವೆ. ಇಲ್ಲಿ ಈಶ್ವರ ಲಿಂಗದ ಜೊತೆಗೆ ಸಪ್ತಮಾತೃಕೆಯರ ವಿಗ್ರಹ, ಉಮಾಮಹೇಶ್ವರ ಮತ್ತು ಭೈರವ ಶಿಲ್ಪಗಳಿದ್ದು, ಆಕರ್ಷಿಸುತ್ತವೆ. ಮೇಲ್ಚಾವಣಿಯ ಭುವನೇಶ್ವರಿಗಳಲ್ಲಿನ ಸುಂದರವಾದ ಕೆತ್ತನೆಯು ಗಮನ ಸೆಳೆಯುತ್ತದೆ.
ನವರಣಗದಲ್ಲಿರುವ ಬೃಹತ್ ಕಂಬಗಳು ಆಕರ್ಷಕವಾಗಿದ್ದು, ಭಿತ್ತಿಗೆ ಅಲಂಕಾರಿಕ ಕಂಬಗಳನ್ನು ಜೋಡಿಸಲಾಗಿದೆ. ವಿವಿಧ ಹಂತಗಳನ್ನೊಳಗೊಂಡ ಗೋಪುರದಲ್ಲಿಯೂ ಕಲಾ ನೈಪುಣ್ಯತೆಯನ್ನು ಮೆರೆಯಲಾಗಿದೆ. ಕ್ಷೇತ್ರಪಾಲಕನ ವಿಗ್ರಹವು ದೇಗುಲದ ಮುಂಭಾಗದ ಜಮೀನಿನಲ್ಲಿ ಹೂತು ಹೋದ ಸ್ಥಿತಿಯಲ್ಲಿದ್ದು, ಮಳೆ ಗಾಳಿಗೆ ಸಿಕ್ಕಿ ಕಳೆಗುಂದುತ್ತಿದೆ. ದೇವಾಲಯದ ದತ್ತಿ ಶಾಸನ ಕೂಡ ಭೂಒಡಲು ಸೇರುವಂತಾಗಿದೆ. ಹಲವು ಸಂದೇಶಗಳನ್ನು ಸಾರುವ ವೀರಗಲ್ಲುಗಳು ಕೂಡ ಅನಾಥವಾಗಿವೆ.
ಅಭಿವೃದ್ಧಿಗೊಳಿಸುತ್ತಾ ಪುರಾತತ್ವ ಇಲಾಖೆ
ಇತಿಹಾಸದ ಕಥೆಗಳನ್ನು ಹೇಳುತ್ತಾ ಇತಿಹಾಸಕ್ಕೊಂದು ಸಾಕ್ಷಿಯಾಗಬೇಕಾಗಿದ್ದ ದೇವಾಲಯವೊಂದು ಇತಿಹಾಸ ಪುಟಗಳಲ್ಲಿ ಲೀನವಾಗಿ ಹೋಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬುದು ಸ್ಥಳೀಯರ ಆಗ್ರಹವಾಗಿದ್ದು ಆದ್ದರಿಂದ ಕಲ್ಲುಗಳನ್ನು ಬಿಡಿಸಿ ಮತ್ತೆ ವಾಸ್ತುಬದ್ಧವಾಗಿ ಜೋಡಿಸಿ ದೇವಾಲಯಕ್ಕೆ ಕಾಯಕಲ್ಪ ನೀಡಬೇಕೆಂಬುದು ಅವರ ಬಯಕೆಯಾಗಿದೆ.
ಗ್ರಾಮಸ್ಥರು ಪ್ರಾಚ್ಯವಸ್ತು ಪುರಾತತ್ವ ಸಂರಕ್ಷಣಾ ಇಲಾಖೆ ಗಮನ ಸೆಳೆದಿರುವ ಹಿನ್ನಲೆಯಲ್ಲಿ ಪುರಾತತ್ವ ಇಲಾಖೆಯ ಮೈಸೂರು ವಿಭಾಗದ ಸಹಾಯಕ ನಿರ್ದೇಶಕಿ ಡಾ.ಮಂಜುಳಾ ಹಾಗೂ ಸಿಬ್ಬಂದಿ ಈಗಾಗಲೇ ತೆಂಗಿನಘಟ್ಟದ ಹೊಯ್ಸಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೇವಾಲಯದ ಜೀರ್ಣೋದ್ಧಾರದ ಕುರಿತಂತೆ ಇಲಾಖೆಗೆ ವರದಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.