ಮಂಡ್ಯ ವಿಶೇಷ; ಸಂಗಮದ ದೃಶ್ಯ ಕಣ್ತುಂಬಿಕೊಳ್ಳಲು ಇದು ಸಕಾಲ!
ಮಂಡ್ಯ, ನವೆಂಬರ್ 09; ಮಂಡ್ಯದ ಕೃಷ್ಣರಾಜಸಾಗರ ಜಲಾಶಯವು ಭರ್ತಿಯಾಗಿದ್ದು, ಹಿನ್ನೀರಿನ ನೋಟ ರಮಣೀಯವಾಗಿದ್ದು ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲೆಂದೇ ಪ್ರವಾಸಿಗರ ದಂಡು ಇತ್ತ ಸುಳಿಯುತ್ತಿದೆ.
ಆದರೆ ಹೆಚ್ಚಿನ ಪ್ರವಾಸಿಗರಿಗೆ ಕೃಷ್ಣರಾಜಪೇಟೆ ತಾಲೂಕಿನ ತ್ರಿವಳಿ ಗ್ರಾಮಗಳಾದ ಪುರ- ಅಂಬಿಗರಹಳ್ಳಿ-ಸಂಗಾಪುರ ಗ್ರಾಮಗಳ ಪಕ್ಕದಲ್ಲಿರುವ ಹೇಮಾವತಿ, ಕಾವೇರಿ, ಮತ್ತು ಲಕ್ಷ್ಮಣ ತೀರ್ಥ ನದಿಗಳ ಸಂಗಮ ಕ್ಷೇತ್ರದ ಸುಂದರ ನೋಟದ ಬಗ್ಗೆ ತಿಳಿದಿಲ್ಲ.
ಕೆಆರ್ಎಸ್ ಭರ್ತಿ; ನದಿ ಪಾತ್ರದ ಜನರಿಗೆ ಎಚ್ಚರಿಕೆ
ಒಮ್ಮೆ ಇಲ್ಲಿಗೆ ಬಂದು ಇದೀಗ ಇಲ್ಲಿ ಸೃಷ್ಠಿಯಾಗಿರುವ ಸುಂದರ ದೃಶ್ಯವನ್ನು ನೋಡಿದ್ದೇ ಆದರೆ ಆ ಸುಂದರ ಕ್ಷಣಗಳು ಮನಪಟಲದಲ್ಲಿ ಅಚ್ಚೊತ್ತಿದಂತೆ ಉಳಿದು ಬಿಡುವುದರಲ್ಲಿ ಎರಡು ಮಾತಿಲ್ಲ.
ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಟ್ಟ 'ಕಾವೇರಿ'
ಇಲ್ಲಿಗೆ ಭೇಟಿ ನೀಡಿದ ಪ್ರತಿಯೊಬ್ಬರಿಗೂ ಕಣ್ಣು ಹಾಯಿಸಿದಷ್ಟು ಅಲೆಯಾಡುವ ನೀರು, ಅದರ ನಡುವೆ ಮೀನು ಹಿಡಿಯುವ ಬೆಸ್ತರು, ಅದರಾಚೆಗೆ ಸುತ್ತಲೂ ಕಂಗೊಳಿಸುವ ಹಸಿರ ಚೆಲುವು, ತಟದಲ್ಲಿ ಎದ್ದು ಕಾಣುವ ಮಹದೇಶ್ವರ ದೇಗುಲ ಹೀಗೆ ಹತ್ತಾರು ನೋಟಗಳು ಕಾಣಸಿಗುತ್ತವೆ.
ಮೇಕೆದಾಟು ಯೋಜನೆ ಜಾರಿ, ಕಾಂಗ್ರೆಸ್ನಿಂದ ಪಾದಯಾತ್ರೆ
ಕೆಆರ್ಎಸ್ ಜಲಾಶಯ ಭರ್ತಿಯಾಗಿದೆ
ಸಾಮಾನ್ಯವಾಗಿ ಕೆಆರ್ಎಸ್ ಜಲಾಶಯ ಭರ್ತಿಯಾಗಿ ಹೇಮಾವತಿ, ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ತುಂಬಿ ಹರಿದಾಗ ಪುರ-ಅಂಬಿಗರಹಳ್ಳಿ-ಸಂಗಾಪುರ ಗ್ರಾಮಗಳ ಪಕ್ಕದ ತ್ರಿವೇಣಿ ಸಂಗಮದಲ್ಲಿ ಇಂತಹ ದೃಶ್ಯಗಳು ಸೃಷ್ಟಿಯಾಗುತ್ತವೆ. ಬೇಸಿಗೆಯಲ್ಲಿ ನೀರು ಕಡಿಮೆಯಾಗಿ ಮುಂಗಾರು ಬರುತ್ತಿದ್ದಂತೆಯೇ ಜಲರಾಶಿ ಹೆಚ್ಚುವುದು ಸಾಮಾನ್ಯ. ಆದರೆ ಈ ಬಾರಿ ಮುಂಗಾರಿನಲ್ಲಿ ಹೆಚ್ಚು ಮಳೆ ಬಾರದೆ ಕೆಆರ್ಎಸ್ ಜಲಾಶಯ ಭರ್ತಿಯಾಗುವುದಿಲ್ಲವೇನೋ ಎಂಬ ದುಗುಡ ಎಲ್ಲರನ್ನು ಕಾಡಿತ್ತು. ಆದರೆ ಹಿಂಗಾರು ಮಳೆ ಆ ಕೊರತೆಯನ್ನು ನೀಗಿಸಿರುವುದು ದೇವರ ಕೃಪೆ ಎಂದರೆ ತಪ್ಪಾಗಲಾರದು.
ಈ ಹಿಂದೆ ಕುಂಭಮೇಳ ನಡೆದಿತ್ತು
ಇನ್ನು ಪವಿತ್ರ ತ್ರಿವೇಣಿ ಸಂಗಮದ ಬಗ್ಗೆ ಹೇಳುವುದಾದರೆ ಇದೊಂದು ಪವಿತ್ರ ತಾಣ ಎಂದರೂ ತಪ್ಪಾಗಲಾರದು. ಕಳೆದ 8 ವರ್ಷಗಳ ಹಿಂದೆ ಇಲ್ಲಿಯೇ ಮಹಾಕುಂಭ ಮೇಳ ನಡೆದಿತ್ತು. ಈ ವೇಳೆ ಲಕ್ಷಾಂತರ ಮಂದಿ ಇಲ್ಲಿ ಪುಣ್ಯಸ್ನಾನ ಮಾಡಿದ್ದರು.
ಹತ್ತಾರು ಕಿ.ಮೀ. ತನಕ ಜಲರಾಶಿಯನ್ನು ಹೊಂದಿರುವ ಸಂಗಮ ಕ್ಷೇತ್ರವು ಪರಮ ಪುಣ್ಯ ಕ್ಷೇತ್ರ ಮಾತ್ರವಲ್ಲದೆ ಮಹದೇಶ್ವರರು ಪವಾಡ ಮೆರೆದ ಸ್ಥಳವೂ ಆಗಿದೆ. ಆ ಬಗ್ಗೆ ಜನವಲಯದಲ್ಲಿರುವ ಕಥೆಯಂತೆ ಹೇಳುವುದಾದರೆ, ಹಿಂದೆ ಬಾಲಕ ಮಹದೇಶ್ವರರು ಇಲ್ಲಿಗೆ ಆಗಮಿಸಿ ಸಂಗಮದ ಕಾವೇರಿ ನದಿಯನ್ನು ದಾಟಿ ಕಪ್ಪಡಿ ಕ್ಷೇತ್ರಕ್ಕೆ ತೆರಳಲು ಅಂಬಿಗರನ್ನು ಹರಿಗೋಲಿನಲ್ಲಿ ನದಿ ದಾಟಿಸಲು ಕೋರುತ್ತಾರೆ.
ಪವಾಡ ಸೃಷ್ಟಿಸಿದ್ದ ಮಹದೇಶ್ವರರು
ಆಗ ಅಂಬಿಗರು ಹಣ ನೀಡದಿದ್ದರೆ ಹರಿಗೋಲಿನಲ್ಲಿ ನದಿ ದಾಟಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಆಗ ಅಂಬಿಗರಿಗೆ ಶಾಪ ನೀಡಿದ ಬಾಲಕ ಮಹದೇಶ್ವರರು ತಾವು ಹೊದ್ದಿದ್ದ ಕೆಂಪು ವಸ್ತ್ರವನ್ನೇ ನೀರ ಮೇಲೆ ಹಾಸಿ ತೆಪ್ಪ ಮಾಡಿಕೊಂಡು ನದಿ ದಾಟಿದರು ಎಂದು ಹೇಳಲಾಗಿದೆ. ಅವರ ಪವಾಡ ಕಂಡ ಅಂಬಿಗರಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮಿಸುವಂತೆ ಕೋರಿದಾಗ ಮಹದೇಶ್ವರರು ತೆಪ್ಪವನ್ನು ಪುನರ್ ಸೃಷ್ಠಿಸಿಕೊಟ್ಟು ತಪ್ಪನ್ನು ಕ್ಷಮಿಸಿದರು ಎಂದು ಹೇಳಲಾಗುತ್ತಿದೆ.
ಇನ್ನು ಬಾಲಕ ಮಹದೇಶ್ವರರು ಪವಾಡ ಮಾಡಿದ ಸವಿನೆನಪಿಗಾಗಿ ದೇವಾಲಯ ನಿರ್ಮಿಸಲಾಗುತ್ತಿದ್ದು, ದೇಗುಲದ ಕಾಮಗಾರಿಯು ಭರದಿಂದ ಸಾಗುತ್ತಿದೆ. ದೇವಾಲಯದ ಗೋಪುರದ ಕಾಮಗಾರಿಯನ್ನು ತಮಿಳುನಾಡಿನ ಮಧುರೈನ ಶಿಲ್ಪಿಗಳು ನೆವೇರಿಸುತ್ತಿದ್ದಾರೆ.
Recommended Video
ಪ್ರವಾಸಿಗರಿಂದ ದೂರವುಳಿದ ಕ್ಷೇತ್ರ
ಪ್ರಾಕೃತಿಕವಾಗಿ, ಸುಂದರ ತಾಣವಾಗಿಯೂ, ದೈವಿಕವಾಗಿ ಪುಣ್ಯ ಕ್ಷೇತ್ರವಾಗಿಯೂ ಗಮನಸೆಳೆಯುವ ಸಂಗಮಕ್ಷೇತ್ರ ಮೂಲಸೌಕರ್ಯಗಳ ಕೊರತೆಯಿಂದಾಗಿ ಪ್ರವಾಸಿಗರಿಂದ ದೂರವಾಗಿಯೇ ಉಳಿದಿದೆ ಎಂದರೆ ತಪ್ಪಾಗಲಾರದು.
ರಸ್ತೆ, ಕುಡಿಯುವ ನೀರು, ಸಾರಿಗೆ ಸೌಲಭ್ಯ, ಯಾತ್ರಿಭವನ ಸೇರಿದಂತೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಿದ್ದೇ ಆದರೆ ಜಿಲ್ಲೆಯಲ್ಲಿಯೇ ಪ್ರಮುಖ ಪ್ರವಾಸಿ ತಾಣವಾಗಿ ಸಂಗಮಕ್ಷೇತ್ರ ಗಮನಸೆಳೆಯುವುದರಲ್ಲಿ ಎರಡು ಮಾತಿಲ್ಲ.