ಶ್ರೀರಂಗಪಟ್ಟಣ: ಕಾವೇರಿ ನದಿ ಪುಷ್ಕರ ಪುಣ್ಯ ಸ್ನಾನ ಆರಂಭ
ಐತಿಹಾಸಿಕ ನಗರ ಶ್ರೀರಂಗಪಟ್ಟಣದಲ್ಲಿ ಇಂದಿನಿಂದ ಮಹಾ ಪುಷ್ಕರ ಪವಿತ್ರ ಸ್ನಾನ ಕಾರ್ಯ ಆರಂಭವಾಗಿದೆ. 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಪುಷ್ಕರಣೆಗೆ ಈ ಬಾರಿ ಪವಿತ್ರ ನದಿ ಕಾವೇರಿ ಸಾಕ್ಷಿಯಾಗಲಿದ್ದಾಳೆ. ತಾಯಿ ಕಾವೇರಿಯ ಸನ್ನಿಧಿಯಲ್ಲಿ ಭಕ್ತರು ಮಿಂದೆದ್ದು, ವ್ರತ, ತಪ, ಜಪ, ಯೋಗ, ತರ್ಪಣಾದಿಗಳನ್ನು ನೀಡಲಿದ್ದಾರೆ.
ಕಳೆದ ವರ್ಷ ಕೃಷ್ಣಾ ನದಿಯಲ್ಲಿ ಮಹಾಪುಷ್ಕರಣೆ ನಡೆದಿತ್ತು. ಗುರು ಗ್ರಹವು ಸೆಪ್ಟೆಂಬರ್ 12ರಂದು ಬೆಳಗ್ಗೆ ತುಲಾ ರಾಶಿಗೆ ಪ್ರವೇಶವಾಗುತ್ತಿದ್ದಾನೆ. ಹೀಗಾಗಿ, ಕಾವೇರಿ ನದಿಯಲ್ಲಿ ಮಹಾ ಪುಷ್ಕರಣೆಗೊಳ್ಳಲಿದೆ.
ಸೆ.12 ತುಲಾ ರಾಶಿಗೆ ಗುರು ಪ್ರವೇಶ, ಹನ್ನೆರಡು ರಾಶಿಗೆ ಏನು ವಿಶೇಷ?
ಬೆಳಗ್ಗೆ6-45ರಿಂದ 7.20ರ ವೇಳೆಗೆ ಗುರು ತುಲಾ ರಾಶಿಗೆ ಪ್ರವೇಶ ಮಾಡಿದ್ದು, ಕಾವೇರಿ ನದಿ ಪುಷ್ಕರದ ಸಂದರ್ಭದಲ್ಲಿ ನದಿಯಲ್ಲಿ ಮಿಂದರೆ ಪುಣ್ಯ ಪ್ರಾಪ್ತಿ ಆಗಲಿದೆ ಎಂಬ ನಂಬಿಕೆ ಆಸ್ತಿಕರಲ್ಲಿದೆ.
ಕಾವೇರಿ ನದಿ ದಡದ ಸುಮಾರು 10 ಕಡೆಗಳಲ್ಲಿ ಭಕ್ತರ ಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳೆಯರು ಸ್ನಾನ ಮಾಡಿ ಬಟ್ಟೆ ಬದಲಾಯಿಸುಕೊಳ್ಳಲು ತಾತ್ಕಾಲಿಕ ಡೇರೆಗಳು, ಸಂಚಾರಿ ಬೂತ್ ಗಳನ್ನು ನಿರ್ಮಿಸಲಾಗಿದೆ. ಶುಚಿತ್ವಕ್ಕೆ ಮಹತ್ವ ನೀಡಲಾಗಿದ್ದು, ಪಟ್ಟಣ ಪಂಚಾಯಿತಿ ಈ ಬಗ್ಗೆ ನಿಗಾ ವಹಿಸಿದೆ. ಮೊಬೈಲ್ ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಆರಭವಾಗಿದೆ. ಇನ್ನಷ್ಟು ವಿವರ ಮುಂದಿದೆ...
ಈ ಬಾರಿ ಕಾವೇರಿ ನದಿ ಏಕೆ?
ಗುರು ಗ್ರಹವು ಯಾವ ರಾಶಿಗೆ ಪ್ರವೇಶಿಸುತ್ತಾನೆ ಎಂಬುದರ ಮೇಲೆ ಪವಿತ್ರ ನದಿಗಳ ತಟದಲ್ಲಿ ಪುಷ್ಕರ ಮೇಳ ನಡೆಯಲಿದೆ.
ಗುರುವು ಮೇಷ ರಾಶಿಗೆ ಪ್ರವೇಶ ಮಾಡಿದಾಗ ಗಂಗಾನದಿ, ವೃಷಭದಲ್ಲಿ ನರ್ಮದಾ, ಮಿಥುನದಲ್ಲಿ ಸರಸ್ವತಿ, ಕರ್ಕಾಟಕದಲ್ಲಿ ಯಮುನಾ, ಸಿಂಹಕ್ಕೆ ಗೋದಾವರಿ, ಕನ್ಯಾದಲ್ಲಿ ಕೃಷ್ಣಾ, ತುಲಾಕ್ಕೆ ಕಾವೇರಿ, ವೃಶ್ಚಿಕಕ್ಕೆ ಭೀಮಾ, ಧನುಸ್ಸುವಿನಲ್ಲಿ ತಪತಿ, ಮಕರದಲ್ಲಿ ತುಂಗಭದ್ರಾ ನದಿ, ಕುಂಭದಲ್ಲಿ ಸಿಂಧು, ಮೀನಾದಲ್ಲಿ ಪ್ರಣಹಿತ ನದಿ
ಏನಿದು ಪುಷ್ಕರ ಕಾಲ
ಮೇಷಾದಿ ದ್ವಾದಶ ರಾಶಿಗಳಿಗೆ ಗುರು ಪ್ರವೇಶಿಸುವ ಕಾಲ ಇದಾಗಿದೆ. ಇಂದು ತುಲಾ ರಾಶಿಯನ್ನು ಪ್ರವೇಶ ಮಾಡುವ ಪುಣ್ಯಕಾಲ. ಕಾವೇರಿ ನದಿ ತಟದಲ್ಲಿ ಈ ಬಾರಿ ಅವಕಾಶ ಸೆ. 12 ರಿಂದ 23 ರವರೆಗೆ ನಡೆಯಲಿರುವ ಪುಷ್ಕರ ಮೇಳಕ್ಕೆ ಈಗಾಗಲೇ ತಲಕಾವೇರಿ ಉಗಮ ಸ್ಥಾನದಿಂದ ತೀರ್ಥ ತಂದು ಪೂಜೆ ಆರಂಭಿಸಲಾಗಿದೆ.
ನಿತ್ಯ ಆರಾಧನೆ, ಹೋಮ, ಹವನಗಳು, ಮಠಾಧಿಪತಿಗಳು, ಸಂತರ ವಿಶೇಷ ಮೆರಣಿಗೆ ನಡೆಸಲಾಗುವುದು. 12 ದಿನಗಳ ಕಾಲ ಕಾವೇರಿ ನದಿಗೆ ವಿಶೇಷ ಆರತಿ ಹಾಗೂ ಬಾಗಿನ ಸಮರ್ಪಣೆ ಮಾಡಲಾಗುತ್ತದೆ.
ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮೇಳ
12 ದಿನಗಳು ಸಂಗೀತ, ನಾಟಕ, ನೃತ್ಯ ಜಾನಪದ ಉತ್ಸವ, ಹರಟೆ, ಹಾಸ್ಯೋತ್ಸವ, ವಿಚಾರ ಸಂಕಿರಣಗಳು, ಯುವಮೇಳ, ವಿದ್ಯಾರ್ಥಿ ಮೇಳಗಳು ನಡೆಯಲಿವೆ ಎಂದು ಡಾ. ವೇದಬ್ರಹ್ಮ ಭಾನು ಪ್ರಕಾಶ್ ಶರ್ಮ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉಚಿತ ಉಪಹಾರ ವ್ಯವಸ್ಥೆ
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಚಕ್ರವರ್ತಿ ಸೂಲಿಬೆಲೆ, ಪಾವಗಡ ಪ್ರಕಾಶ್ ರಾವ್ ಅವರು ಆಗಮಿಸಲಿದ್ದಾರೆ. ವಿವಿಧ ಸಂಘಟನೆಗಳಿಂದ 12 ದಿನಗಳ ಕಾಲ ಉಚಿತ ಉಪಹಾರ, ಮಧ್ಯಾಹ್ನ ಉಚಿತ ಭೋಜನ ವ್ಯವಸ್ಥೆ ಮಾಡಲಾಗಿದೆ. ಶ್ರೀರಂಗಪಟ್ಟಣದ ಗೋಸಾಯಿ ಘಾಟ್, ಪಶ್ಚಿಮ ವಾಹಿನಿಯಲ್ಲಿ ಸಕಲ ಸಿದ್ಧತೆಯಾಗಿದೆ.