ರೋಹಿತ್ ಚಕ್ರತೀರ್ಥ ಬಂಧನಕ್ಕೆ ಆಗ್ರಹಿಸಿ ಸಮಾನ ಮನಸ್ಕರ ವೇದಿಕೆ ಕಾಯಕರ್ತರ ಪ್ರತಿಭಟನೆ
ಮಂಡ್ಯ, ಮೇ 26: ಪಠ್ಯ ಪುಸ್ತಕಗಳನ್ನು ಮನುಸ್ಮೃತಿ ಮಾಡಲು ಹೊರಟಿರುವ ಪಠ್ಯ ಪುಸ್ತಕ ಪರಿಷ್ಕರಣೆ ಕೈಬಿಡಬೇಕು, ಕುವೆಂಪು ಮತ್ತು ನಾಡಗೀತೆಗೆ ಅಪಮಾನ ಮಾಡಿದ ರೋಹಿತ್ ಚಕ್ರತೀರ್ಥನನ್ನು ಬಂಧಿಸುವಂತೆ ಒತ್ತಾಯಿಸಿ ಸಮಾನ ಮನಸ್ಕರ ವೇದಿಕೆ ಕಾಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜೆ.ಸಿ. ವೃತ್ತದಲ್ಲಿ ಜಮಾಯಿಸಿದ ಸಮಾನ ಮನಸ್ಕರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡುವ ಹೆಸರಿನಲ್ಲಿ ಸನಾತನ, ಪುರೋಹಿತಶಾಹಿ, ಮಹಿಳಾ ಮತ್ತು ದಲಿತ ವಿರೋಧಿ ಪಾಠಗಳನ್ನು ತುರುಕಿ ಪಠ್ಯ ಪುಸ್ತಕಗಳನ್ನು ಮನುಸ್ಮತಿ ಮಾಡಲು ಹೊರಟಿರುವ ಪರಿಷ್ಕರಣೆಯನ್ನು ಕೈಬಿಡಬೇಕು. ನಾಡಕವಿ, ಶೂದ್ರತಪಸ್ವಿ ಕುವೆಂಪು ಮತ್ತು ನಾಡಗೀತೆಗೆ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರಕವಿಗೆ ಅವಮಾನ ಮಾಡಿದ್ದು ಬಿಜೆಪಿನಾ? ಕಾಂಗ್ರೆಸ್ಸಾ?
ಪಠ್ಯ ಪುಸ್ತಕಗಳನ್ನೇ ಮುಂದುವರಿಸಿ ಮಕ್ಕಳ ಕಲಿಕೆಗೆ ಒತ್ತು ನೀಡಬೇಕು
ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದ ಎಲ್ಲಾ ಶಿಫಾರಸ್ಸುಗಳನ್ನು ಕೈಬಿಡಬೇಕು. ಚಕ್ರತೀರ್ಥರವರ ಸಮಿತಿಯನ್ನು ಕೂಡಲೇ ವಜಾ ಮಾಡಬೇಕು. ಹಳೆಯ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕು ಮತ್ತು ಕೋವಿಡ್ ಹಿನ್ನೆಲೆಯಲ್ಲಿ ಈಗಾಗಲೇ ಕಲಿಕೆ ನಷ್ಟವಾಗಿರುವುದರಿಂದ ಯಾವುದೇ ಪ್ರಯೋಗಗಳಿಗೆ ಕೈ ಹಾಕದೆ ಹಳೆಯ ಪಠ್ಯ ಪುಸ್ತಕಗಳನ್ನೇ ಮುಂದುವರಿಸಿ ಮಕ್ಕಳ ಕಲಿಕೆಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಸಚಿವ ನಾಗೇಶ್ರನ್ನು ವಜಾಗೊಳಿಸಿ
ಸ್ಯಾತಂತ್ರ್ಯ ಹೋರಾಟದ ಹುತಾತ್ಮ ಭಗತ್ಸಿಂಗ್, ಸಮಾಜಸುಧಾಕರ ನಾರಾಯಣ ಗುರುಗಳು, ಟಿಪ್ಪು ಕುರಿತ ಪಾಠಗಳು, ಸಾರಾ ಅಬೂಬೂಕರ್, ಲಂಕೇಶ್, ನೀಲಾ ಮುಂತಾದ ಪ್ರಗತಿಪರರ ಜೀವಪರ ಬರಹಗಾರರ ಬರಹಗಳನ್ನು ತೆಗೆದು ಅಲ್ಲಿ ಕೋಮುವಾದಿ ಸನಾತನಿ ಕೇಶವ ಬಲಿರಾಂ ಹೆಡ್ಗೇವಾರ್, ಬನ್ನಂಜೆ ಗೋವಿಂದಾಚಾರ್ಯ, ಗಣೇಶ್ ಮತ್ತು ದ್ವೇಷ ಪ್ರಚಾರಕ ಸೂಲಿಬೆಲೆಯಂತಹವರ ಬರಹಗಳನ್ನು ಸೇರಿಸಿ ಇಡೀ ಪಠ್ಯಪುಸ್ತಕಗಳನ್ನು ಮನುಸ್ಮೃತಿ ಮಾಡಲು ಹೊರಟಿರುವ ಪರಿಷ್ಕರಣಾ ಸಮಿತಿಯನ್ನು ಕೂಡಲೇ ವಜಾ ಮಾಡಬೇಕು. ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಸಚಿವ ನಾಗೇಶ್ ಅವರನ್ನೂ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಶಿಕ್ಷಣದಲ್ಲಿ ಕೇಸರೀಕಣ: ಮೇ 31 ರಂದು ಬೃಹತ್ ಪ್ರತಿಭಟನೆಗೆ ಕರೆ
ಹಿಂದೆ ಪಠ್ಯಪುಸ್ತಕ ರಚಿಸಿದವರು ದೇಶದ್ರೋಹಿಗಳು ಈಗಿನವರು ದೇಶಪ್ರೇಮಿಗಳು ಎಂದು ಬಿಂಬಿಸಿ ಶಿಕ್ಷಣ ಕ್ಷೇತ್ರದ ಯಾವುದೇ ಅನುಭವವಿಲ್ಲದೆ, ತಜ್ಞರಲ್ಲದ ಒಂದೇ ಕೋಮಿನ ಒಂದೇ ಪ್ರದೇಶದ ವ್ಯಕ್ತಿಗಳನ್ನು ಸೇರಿಸಿಕೊಂಡು ರಚಿಸಿರುವ ಪರಿಷ್ಕರಣಾ ಸಮಿತಿಯ ಆಷಾಡಭೂತಿತನವನ್ನು ಕಪಟ ದೇಶಪ್ರೇಮದ ಸೋಗಿನಲ್ಲಿ ಮರೆಮಾಚಲಾಗಿದೆ ಎಂದು ಕಿಡಿಕಾರಿದರು.
ರೋಹಿತ್ ಚಕ್ರತೀರ್ಥ ಬಂಧನಕ್ಕೆ ಆಗ್ರಹ
ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸಿ ರಾಷ್ಟ್ರ ಕವಿ, ಕುವೆಂಪು ಮತ್ತು ಅವರು ಬರೆದಿರುವ ನಾಡಗೀತೆಯಾಗಿರುವ ಪದ್ಯವನ್ನು ಅಣಕಿಸಿ ಟ್ರೋಲ್ ಮಾಡಿ ಇಡೀ ನಾಡಿಗೇ ಕನ್ನಡ ಶೂದ್ರ ಮನಸ್ಸುಗಳಿಗೆ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಪ್ರೊ| ಜಿ.ಟಿ.ವೀರಪ್ಪ, ಟಿ. ಯಶ್ವಂತ, ಸುನಂದಾ ಜಯರಾಂ, ರಾಜೇಂದ್ರಪ್ರಸಾದ್, ಕೃಷ್ಣೇಗೌಡ, ಟಿ.ಡಿ. ನಾಗರಾಜು, ಭರತ್ರಾಜ್, ಎಂ.ಎಲ್.ಯೋಗಾನಂದ, ಬೋರಪ್ಪ, ಮಂಜುನಾಥ್, ಸಂಜು, ಎಲ್.ಸಂದೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
(ಒನ್ಇಂಡಿಯಾ ಸುದ್ದಿ)