ಮೇ 31, ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಪ್ರತಿಭಟನೆ: ಬಿ.ಟಿ. ಲಲಿತಾ ನಾಯಕ್
ಮಂಡ್ಯ, ಮೇ 27: ಪಠ್ಯ ಪರಿಷ್ಕರಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಧೋರಣೆ ಖಂಡಿಸಿ ಮೇ 31ರಂದು ಬೆಂಗಳೂರಿನಲ್ಲಿ ಜನತಾ ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಂಡಿರುವುದಾಗಿ ಮಾಜಿ ಸಚಿವೆ, ಜನತಾ ಪಕ್ಷದ ರಾಜ್ಯಾಧ್ಯಕ್ಷೆ ಬಿ.ಟಿ. ಲಲಿತಾ ನಾಯಕ್ ತಿಳಿಸಿದರು.
ಮಂಡ್ಯದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ಬೇಕಾಗಿರಲಿಲ್ಲ. ಒಂದು ಪಕ್ಷದ ಸಂಸ್ಥಾಪಕನಾದ ಹೆಡ್ಗೆವಾರ್ ಅವರ ಭಾಷಣವನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಉತ್ತಮ ಲೇಖಕರನ್ನು ತೆಗೆದು ಕೆಲಸಕ್ಕೆ ಬಾರದವರ ಲೇಖನಗಳನ್ನು ಸೇರಿಸಲಾಗಿದೆ. ಇದರಿಂದ ಪಠ್ಯ ಹೀನಾಯ ಸ್ಥಿತಿಗೆ ತಲುಪುತ್ತಿದೆ. ಪ್ರಗತಿಪರ, ಜೀವಪರ ಬರಹಗಾರರ ಬರಹಗಳನ್ನು ತೆಗೆದು ಕೋಮುವಾದಿ ಹೆಡ್ಗೆವಾರ್ ಇನ್ನು ಮುಂತಾದವರ ಬರಹಗಳನ್ನು ಸೇರಿಸಿ ಇಡೀ ಪಠ್ಯಪುಸ್ತಕಗಳನ್ನು 'ಮನುಸ್ಮತಿ' ಮಾಡಲು ಹೊರಟಿದ್ದಾರೆ ಎಂದು ಖಂಡಿಸಿದರು.
ರೋಹಿತ್ ಚಕ್ರತೀರ್ಥ ವಿರುದ್ದ ದೂರು: ಸಮಾಜಘಾತಕರನ್ನು ಬಂಧಿಸುವಂತೆ ಮನವಿ
ರಾಜಕಾರಣಿ, ಮಠಾಧೀಶರಿಂದ ಕೆರೆ-ಕಾಲುವೆ ಹಂಚಿಕೆ
ಕೆರೆ-ಕಾಲುವೆಗಳನ್ನು ರಾಜಕಾರಣಿಗಳು ಮತ್ತು ಮಠಾಧೀಶರು ಹಂಚಿಕೆ ಮಾಡಿಕೊಳ್ಳುವುದರ ಮೂಲಕ ಬಡವರು, ರೈತರು ಮತ್ತು ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವೆ, ಜನತಾ ಪಕ್ಷದ ರಾಜ್ಯಾಧ್ಯಕ್ಷೆ ಬಿ.ಟಿ. ಲಲಿತಾ ನಾಯಕ್ ಆರೋಪಿಸಿದರು. ಅರ್ಜಿ ಸಲ್ಲಿಸಿದ 72 ಗಂಟೆಗಳಲ್ಲಿ ಭೂಮಿ ಕೊಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳುವ ಮೂಲಕ ಉದ್ಯಮಿಗಳಿಗೆ ಕೊಡಲು ಹೊರಟಿದೆಯೇ ವಿನಃ ಬಡವರು ಮತ್ತು ರೈತರನ್ನು ಉದ್ಧಾರ ಮಾಡಲಲ್ಲ ಎಂದು ಹೇಳಿದರು. ಗೋಹತ್ಯೆ ಮಸೂದೆಯನ್ನು ಜಾರಿಗೆ ತರುವ ಮೂಲಕ ಎಲ್ಲ ಜನರನ್ನು ಬಡತನಕ್ಕೆ ದೂಡುತ್ತಿದೆ. ಕೂಡಲೇ ಎಲ್ಲ ವರ್ಗದವರಿಗೆ ಮಾರಕವಾಗಿರುವ ಗೋಹತ್ಯೆ ಮಸೂದೆಯನ್ನು ವಾಪಸ್ ಪಡೆಯಬೇಕು. ಉಚಿತ ಶಿಕ್ಷಣ ಮತ್ತು ಆರೋಗ್ಯವನ್ನು ನೀಡುವ ಮೂಲಕ ಖಾಸಗೀಕರಣಕ್ಕೆ ಕಡಿವಾಣ ಹಾಕಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಜನರಿಂದ ಅಕ್ರಮವಾಗಿ ಹಣ ವಸೂಲಿ
ಸರ್ಕಾರ ಅಕ್ರಮ ಗಣಿಗಾರಿಕೆಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಂಡು ಆಗುತ್ತಿರುವ ನಷ್ಟವನ್ನು ತಪ್ಪಿಸಿ ನಿಯಮಿತ ಕೃಷಿ ಮಾಡಲು ರೈತ ಸಮುದಾಯಕ್ಕೆ ಅನುವು ಮಾಡಿಕೊಡಬೇಕು. ಎಲ್ಲ ಕಡೆ ಟೋಲ್ ಗೇಟ್ ಸ್ಥಾಪಿಸಿ ಜನರಿಂದ ಅಕ್ರಮವಾಗಿ ಹಣ ವಸೂಲಿ ಮಾಡುವ ಮೂಲಕ ಕೊಲ್ಲಲಾಗುತ್ತಿದೆ. ಆದ್ದರಿಂದ ಟೋಲ್ ಗೇಟ್ಗಳನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಭಾರತದ ಶೇ. 75ರಷ್ಟಿರುವ ರೈತರು ದೇಶದ ಬೆನ್ನೆಲುಬು. ಆದರೆ, ಇದೇ ರೈತರು ಕೃಷಿಯಿಂದ ವಿಮುಖರಾಗುತ್ತಿರುವುದು ದೇಶದ ಆಹಾರ ಭದ್ರತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಕೃಷಿಯಲ್ಲಿ ರೈತರನ್ನು ಉಳಿಸುವ ಅಗತ್ಯವಿದ್ದು, ಉಚಿತ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳನ್ನು ರೈತರಿಗೆ ಪೂರೈಸಬೇಕೆಂದರು. ಸರ್ಕಾರದ ವತಿಯಿಂದ ಗುಣಮಟ್ಟದ ಶಾಲೆಗಳನ್ನು ಪ್ರಾರಂಭಿಸಿ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಬೇಕು. ನಿರಂತರವಾಗಿ ರಾಗಿ, ಭತ್ತ ಹಾಗೂ ಇನ್ನಿತರೆ ರೈತರ ಉತ್ಪನ್ನಗಳನ್ನು ಎಂಎಸ್ಪಿ ದರದಲ್ಲಿ ಖರೀದಿಸಿ ರೈತರಿಗೆ ಒಳಿತು ಮಾಡಬೇಕು. ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಸರ್ಕಾರ ನೇರವಾಗಿ ಖರೀದಿಸಬೇಕೆಂದು ಒತ್ತಾಯಿಸಿದರು.
ಜನತಾ ಪಕ್ಷವು ರಾಜಕೀಯದ ಜತೆಗೆ ಸಾಂಸ್ಕೃತಿಕವಾಗಿ ಮತ್ತು ನೈತಿಕತೆಯಿಂದ ನಡೆದುಕೊಳ್ಳುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ರೈತರ ಹಿತ ಕಾಯಲು ಬದ್ಧವಾಗಿದೆ ಎಂದರು.
ಜನತಾ ಪಕ್ಷ ರೈತರ ಹಿತ ಕಾಯಲು ಬದ್ಧ: ಭೈರೇಗೌಡ
ಪಕ್ಷದ ರೈತ ವಿಭಾಗದ ರಾಜ್ಯಾಧ್ಯಕ್ಷ ಭೈರೇಗೌಡ ಮಾತನಾಡಿ, ಕೇಂದ್ರ ಸರ್ಕಾರವು ತಾವು ಮಾಡಿದ ತಪ್ಪಿನ ಅರಿವಾಗಿ ರೈತರಿಗೆ ಮಾರಕವಾಗಿದ್ದ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದು, ಅದೇ ರೀತಿ ಕರ್ನಾಟಕ ಸರ್ಕಾರ ಕರಾಳ ಕಾಯ್ದೆಗಳನ್ನು ಹಿಂಪಡೆಯಬೇಕು. ಸಾಗುವಳಿ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಕೂಡಲೇ ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿದರು.
1978ರ ಹಿಂದಿನ ಅರಣ್ಯ ಅತಿಕ್ರಮಣಕಾರರನ್ನು ನ್ಯಾಯಾಲಯದ ಆದೇಶದ ಅನ್ವಯ ಖಾಯಂಗೊಳಿಸಬೇಕು. ಸಕಾರಿ ನೇಮಕಾತಿಯಲ್ಲಿ ರೈತರ ಮಕ್ಕಳಿಗೆ ಶೇ. 10ರಷ್ಟು ಮೀಸಲಾತಿ ಕಲ್ಪಿಸಬೇಕು, ರೈತರ ಮನೆಗಳಿಗೆ ಕನಿಷ್ಠ 100 ಯೂನಿಟ್ ಉಚಿತ ವಿದ್ಯುತ್ ಪೂರಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್, ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷ ಅಬ್ದುಲ್ ಗೌರ್, ಮಂಡ್ಯ ಜಿಲ್ಲಾಧ್ಯಕ್ಷ ಹರಳಹಳ್ಳಿ ಮಹದೇವಸ್ವಾಮಿ, ರಾಮನಗರ ಜಿಲ್ಲಾಧ್ಯಕ್ಷ ಡಿ.ಎಂ. ಮಾದೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಪಿ. ರಾಜೇಂದ್ರ ಹಾಜರಿದ್ದರು.
(ಒನ್ಇಂಡಿಯಾ ಸುದ್ದಿ)