ಹೈಕೋರ್ಟ್ನಿಂದ ಎಸಿಬಿ ರಚನೆ ರದ್ದು: ಸಿಎಂ ಹೇಳಿದ್ದೇನು?
ಮಂಡ್ಯ, ಆಗಸ್ಟ್, 11: ಕರ್ನಾಟಕ ಹೈಕೋರ್ಟ್ ಎಸಿಬಿ ರಚನೆ ರದ್ದು ಮಾಡಿ ಆದೇಶ ಹೊರಡಿಸಿದೆ. ಇದಕ್ಕೆ ಮಂಡ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. "ಉಚ್ಛ ನ್ಯಾಯಾಲಯ ಎಸಿಬಿಯನ್ನು ರದ್ದುಪಡಿಸಿದ ಮಾಹಿತಿ ಸಿಕ್ಕಿದೆ. ತೀರ್ಪಿನ ಸಮಗ್ರ ಅಂಶದ ಬಗ್ಗೆ ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಜೊತೆ ಚರ್ಚೆ ನಡೆಸುತ್ತೇವೆ. ಬಳಿಕ ಪ್ರತಿಕ್ರಿಯೆ ನೀಡುತ್ತೇನೆ" ಎಂದು ತಿಳಿಸಿದರು.
"ಬೆಂಗಳೂರಿಗೆ ಹಿಂತಿರುಗಿದ ನಂತರ ಎಜಿ ಅವರೊಂದಿಗೆ ಚರ್ಚೆ ಮಾಡುತ್ತೇನೆ. ನಂತರ ಮುಂದೇನು? ಎಂಬ ತೀರ್ಮಾನದ ಬಗ್ಗೆ ಯೋಚಿಸುತ್ತೇವೆ. ತೀರ್ಪಿನ ವಿವರಗಳನ್ನು ತಿಳಿದುಕೊಳ್ಳದೇ ಪ್ರತಿಕ್ರಿಯೆ ನೀಡುವುದು ಸರಿಯಲ್ಲ" ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಸಿದ್ದರಾಮಯ್ಯ ಪ್ರತಿಕ್ರಿಯೆ: "ಸ್ವತಂತ್ರ ತನಿಖಾ ಸಂಸ್ಥೆಯಾದ ಎಸಿಬಿ ದೇಶದ ಅನೇಕ ರಾಜ್ಯಗಳಲ್ಲೂ ಇತ್ತು. ಅದರಂತೆ ನಮ್ಮ ರಾಜ್ಯದಲ್ಲೂ ಸ್ಥಾಪಿಸಲಾಗಿತ್ತು. ಇಂದು ಕರ್ನಾಟಕ ಉಚ್ಚ ನ್ಯಾಯಾಲಯವು ಎಸಿಬಿಯನ್ನು ರದ್ದುಪಡಿಸಿ ಆದೇಶ ನೀಡಿದೆ. ನ್ಯಾಯಾಲಯದ ಈ ಆದೇಶವನ್ನು ನಾನು ಗೌರವಿಸುತ್ತೇನೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸಂತೋಷ್ ಹೆಗ್ಡೆ ಪ್ರತಿಕ್ರಿಯೆ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, "ಎಸಿಬಿ ರದ್ದು ಮಾಡಿದ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಕೇವಲ ಎಸಿಬಿ ರದ್ದು ಮಾಡಿದರೆ ಸಾಲದು ಲೋಕಾಯುಕ್ತಕ್ಕೆ ಅಧಿಕಾರ ಕೊಡಿ" ಎಂದು ಅಭಿಪ್ರಾಯಪಟ್ಟಿದ್ದಾರೆ.
"ಇದೊಂದು ಉತ್ತಮವಾದ ಆದೇಶವಾಗಿದೆ. ಸಾರ್ವಜನಿಕರ ಬೇಡಿಕೆಯೂ ಇದೇ ಆಗಿತ್ತು. ಎಲ್ಲಾ ರಾಜಕೀಯ ಪಕ್ಷಗಳು ಈ ಬಗ್ಗೆ ಸುಳ್ಳು ಭರವಸೆ ಕೊಟ್ಟಿದ್ದವು. ಆದರೆ ಯಾರೂ ಸ್ಪಂದಿಸಿರಲಿಲ್ಲ. ಇದೀಗ ಹೈಕೋರ್ಟ್ ಇಂತಹದೊಂದು ಮಹತ್ವದ ತೀರ್ಪು ನೀಡಿದ್ದು, ತುಂಬಾ ಸಂತೋಷವಾಗುತ್ತಿದೆ. ಈ ತೀರ್ಪನ್ನು ಜಾರಿಗೆ ತಂದರೆ ಸಮಾಜಕ್ಕೆ ಸಾಕಷ್ಟು ಅನುಕೂಲವಾಗಲಿದೆ" ಎಂದರು.
"ಲೋಕಾಯುಕ್ತಕ್ಕೆ ಪರ್ಯಾಯವಾಗಿ ಎಸಿಬಿ ಹುಟ್ಟುಹಾಕುವ ಅವಶ್ಯಕತೆ ಇರಲಿಲ್ಲ. ಆದರೆ ಅದೊಂದು ನಾಟಕವಾಗಿತ್ತು. ಕಾಂಗ್ರೆಸ್ನವರು ತಮ್ಮ ಕಾಲದಲ್ಲಿ ಎಸಿಬಿ ಸೃಷ್ಟಿ ಮಾಡಿ ಅವರಿಗೆ ಅಧಿಕಾರ ಕೊಡುತ್ತಾರೆ. ವಿರೋಧ ಪಕ್ಷದಲ್ಲಿ ಇದ್ದ ಬಿಜೆಪಿ ಎಸಿಬಿ ರದ್ದು ಮಾಡುವ ಭರವಸೆ ಕೊಡುತ್ತಾರೆ. ಆದರೆ ಅವರು ಅಧಿಕಾರಕ್ಕೆ ಬಂದ ಬಳಿಕ ಅದನ್ನು ಮಾಡಿಲ್ಲ. ಎಸಿಬಿ ಯಾವುದೇ ರಾಜಕಾರಣಿಗಳು ಹಾಗೂ ಐಎಎಸ್, ಐಪಿಎಸ್ ಅಧಿಕಾರಿಗಳ ವಿರುದ್ಧ ಜಾರ್ಜ್ಶೀಟ್ ಹಾಕಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಯಾವ ರಾಜಕೀಯ ಸಂಸ್ಥೆಗೆ ಬಲಿಷ್ಠ ಲೋಕಾಯಯಕ್ತ ಬೇಡ. ಅದನ್ನು ನಿರ್ಬಲಗೊಳಿಸುವ ಪ್ರಯತ್ನ ಇದಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಒಂದೇ ಶಾಲೆಯಿಂದ ಬಂದವರು. ಹೈಕೋರ್ಟ್ನ ತೀರ್ಪಿನ ಆಧಾರದಲ್ಲಿ ಅಧಿಕಾರ ಕೊಟ್ಟರೆ ಲೋಕಾಯುಕ್ತ ಜವಾಬ್ದಾರಿ ಹೆಚ್ಚಾಗುತ್ತದೆ. ಅಧಿಕಾರ ಬಂದ ಬಳಿಕ ಕೆಲಸ ಮಾಡಿ ತೋರಿಸಿದರೆ ನಾನು ಸಲಾಮ್ ಹಾಕುತ್ತೇನೆ. ಇಲ್ಲದಿದ್ದರೆ ಪ್ರತಿಭಟನೆ ಮಾಡುತ್ತೇವೆ" ಎಂದು ಸಂತೋಷ್ ಹೆಗ್ಡೆ ಎಚ್ಚರಿಕೆ ನೀಡಿದರು.
Recommended Video