ಮಂಡ್ಯ: ಪೌರ ಸಂಸ್ಥೆಗಳಿಗೆ ನಾಮನಿರ್ದೇಶಿತ ಸದಸ್ಯರನ್ನು ನೇಮಿಸದ ಸರ್ಕಾರ; ಕಾರ್ಯಕರ್ತರ ನಿರಾಸೆ
ಮಂಡ್ಯ, ಜೂನ್ 10: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಒಂದು ನಗರಸಭೆ, ಆರು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿಯ ಪೈಕಿ ಆಡಳಿತಾರೂಢ ಬಿಜೆಪಿ ಸರ್ಕಾರ ಎರಡು ಸ್ಥಳೀಯ ಸಂಸ್ಥೆಗಳಿಗೆ ನಾಮನಿರ್ದೇಶಿತ ಸದಸ್ಯರನ್ನು ಘೋಷಿಸಿದ್ದರೆ, ಉಳಿದ ಆರು ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರ ಹೆಸರನ್ನು ಪ್ರಕಟಿಸಿಲ್ಲ. ಇದರಿಂದಾಗಿ ಅಧಿಕಾರ ಪಡೆಯಬೇಕೆಂಬ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಕನಸು ನೆನೆಗುದಿಗೆ ಬಿದ್ದಿದೆ.
ಮಂಡ್ಯ ನಗರಸಭೆ, ಪಾಂಡವಪುರ, ನಾಗಮಂಗಲ, ಕೆ.ಆರ್ ಪೇಟೆ, ಮಳವಳ್ಳಿ, ಮದ್ದೂರು, ಶ್ರೀರಂಗಪಟ್ಟಣ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಗೊಂಡು ಸುಮಾರು ಒಂದು ವರ್ಷ ಕಳೆಯುತ್ತಾ ಬಂದರೂ, ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪ.ಪಂ ಹೊರತುಪಡಿಸಿದರೆ ಉಳಿದ ಯಾವ ಸ್ಥಳೀಯ ಸಂಸ್ಥೆಗಳಿಗೂ ನಾಮನಿರ್ದೇಶಿತ ಸದಸ್ಯರ ಹೆಸರುಗಳನ್ನು ಘೋಷಿಸಿಲ್ಲ.
ಮಂಡ್ಯ ಜೆಡಿಎಸ್ ಪಕ್ಷದ ಭದ್ರಕೋಟೆ
ಮೊದಲಿನಿಂದಲೂ ಜೆಡಿಎಸ್ ಪಕ್ಷದ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಮಂಡ್ಯ ಜಿಲ್ಲೆ ಕಳೆದ ಬಾರಿಯ ವಿಧಾನಸಭಾ ಉಪ ಚುನಾವಣೆಯಲ್ಲಿ ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದಿಂದ ನಾರಾಯಣ ಗೌಡರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಖಾತೆ ತೆರೆಯಿತು. ಇದು ಇತಿಹಾಸ ಸೃಷ್ಟಿಸಿದ್ದು ಬಿಟ್ಟರೆ, ಇತಿಹಾಸದ ಪುಟ ತಿರುಗಿ ನೋಡಿದಾಗ ಜಿಲ್ಲಾ ಪಂಚಾಯತಿಯಲ್ಲಿ ಬಿಜೆಪಿ ಇನ್ನೂ ಖಾತೆಯನ್ನು ತೆರೆದಿಲ್ಲ.
ಆದರೆ, ಬಿಜೆಪಿ ಬೆಂಬಲಿತ ಸುಮಲತಾ ಲೋಕಸಭೆ ಪ್ರವೇಶಿಸಿದರು. ನಂತರ ನಾರಾಯಣ ಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವರಾದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೊರಗಿದ್ದ ಬಿಜೆಪಿಗೆ ಕೆಲವೆಡೆ ಗೆಲುವು ಸಿಗುವಂತೆ ಮಾಡಿದರು.
ಸರ್ಕಾರಕ್ಕೆ ಆಕಾಂಕ್ಷಿಗಳ ಪಟ್ಟಿ ರವಾನೆ
ಆದರೆ, ಸ್ಥಳೀಯವಾಗಿ ಅಧಿಕಾರವೇ ಸಿಗದ ಅನೇಕ ಕಾರ್ಯಕರ್ತರು ಬಿಜೆಪಿ ಪಕ್ಷದಲ್ಲಿದ್ದು, ತಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ ಸ್ಥಳೀಯ ಸಂಸ್ಥೆಗಳಲ್ಲಿ ನಾಮನಿರ್ದೇಶನ ಸದಸ್ಯತ್ವವನ್ನು ಪಡೆದು ಅಧಿಕಾರಕ್ಕೇರಬಹುದು ಎಂಬ ಕನಸು ಹೊತ್ತಿದ್ದಾರೆ. ಅದರಂತೆ ಅನೇಕ ಬಿಜೆಪಿ ಕಾರ್ಯಕರ್ತರು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ನಾಮನಿರ್ದೇಶನ ಸದಸ್ಯತ್ವದ ಆಕಾಂಕ್ಷೆ ಹೊತ್ತು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದು, ಪಕ್ಷದ ತಾಲೂಕು ಹಾಗೂ ಜಿಲ್ಲಾ ಘಟಕ ಸರ್ಕಾರಕ್ಕೆ ಆಕಾಂಕ್ಷಿಗಳ ಪಟ್ಟಿ ರವಾನಿಸಿದೆ. ಆದರೆ ಯಾರನ್ನು ಸರ್ಕಾರ ಇದುವರೆಗೂ ನೇಮಿಸಿಲ್ಲ.
ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪ.ಪಂ ಮಾತ್ರ
ನಗರಸಭೆ, ಪುರಸಭೆಗಳಿಗೆ ತಲಾ ಐದು ಹಾಗೂ ಪಟ್ಟಣ ಪಂಚಾಯಿತಿಗಳಿಗೆ ತಲಾ 3 ನಾಮ ನಿರ್ದೇಶನ ಸದಸ್ಯರನ್ನು ಘೋಷಿಸಬಹುದಾಗಿದ್ದು, ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿ ಹೊರತುಪಡಿಸಿದರೆ ಉಳಿದ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರುಗಳ ಹೆಸರುಗಳು ಘೋಷಣೆಯಾಗಿಲ್ಲ.
Recommended Video
ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ
ಪ್ರಮುಖವಾಗಿ ಮಂಡ್ಯ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಐದು ನಾಮನಿರ್ದೇಶನ ಸ್ಥಾನಕ್ಕೆ ಸುಮಾರು 20 ಮಂದಿ ಬಿಜೆಪಿ ಕಾರ್ಯಕರ್ತರು ಹೆಸರು ನೋಂದಾಯಿಸಿದ್ದು, ಸರ್ಕಾರಕ್ಕೆ ಪಟ್ಟಿ ರವಾನೆಯಾಗಿದೆ. ಆದರೆ, ಇನ್ನು ಸಹ ಸದಸ್ಯರ ಆಯ್ಕೆ ಪಟ್ಟಿ ಅಧಿಕೃತ ಘೋಷಣೆಯಾಗಿಲ್ಲ. ಈ ನಿಟ್ಟಿನಲ್ಲಿ ಆಕಾಂಕ್ಷಿತ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ಮೂಲಕ ಲಾಬಿ ಮಾಡಿಸಲು ಮುಂದಾಗಿದ್ದಾರೆ. ಸರ್ಕಾರವು ಶೀಘ್ರವಾಗಿ ನಾಮ ನಿರ್ದೇಶಿತ ಸದಸ್ಯರುಗಳನ್ನು ನೇಮಿಸುವ ಮೂಲಕ ಚುನಾವಣೆಯಲ್ಲಿ ಬೆವರು ಹರಿಸಿ ದುಡಿದಿರುವ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಬೇಕು ಎಂಬುದು ಬಿಜೆಪಿ ಕಾರ್ಯಕರ್ತರ ಒತ್ತಾಯ.