ಮಂಡ್ಯ; ರೈತರಿಗೆ ಬೆಳೆ ನಷ್ಟದ ಪರಿಹಾರ ನೀಡಲು ಕಾರ್ಖಾನೆಗೆ ಆದೇಶ
ಮಂಡ್ಯ, ಜೂನ್, 28 : ತಾಲೂಕಿನ ಬಸರಾಳು ಹೋಬಳಿ ಕಾರೆಕಟ್ಟೆ ಗ್ರಾಮದ ಕೀರ್ತಿ ರಾಸಾಯನಿಕ ಸಲ್ಪೂರಿಕ್ ಆಸಿಡ್ ತಯಾರಿಕಾ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಿಂದ ಬೆಳೆ ನಷ್ಟವಾಗಿರುವ 12 ಮಂದಿ ರೈತರಿಗೆ 6.89 ಲಕ್ಷ ರು. ಪರಿಹಾರ ವಿತರಿಸುವಂತೆ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಕಂದಾಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿ ಗಮನಸೆಳೆದಿದ್ದರು. ಅದರಂತೆ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ಮತ್ತು ಸೇವೆಗಳು) ಸರ್ಕಾರದ ಅಧೀನ ಕಾರ್ಯದರ್ಶಿ ಜಿ. ಎನ್. ಸುಶೀಲ ಬೆಳೆಹಾನಿಯಾಗಿರುವ ಸಂತ್ರಸ್ತ ರೈತರಿಗೆ ಕಂಪನಿಯವರಿಂದ ಪರಿಹಾರ ಪಾವತಿಸುವಂತೆ ಆದೇಶಿಸಿದ್ದಾರೆ. ಈ ಆದೇಶದನ್ವಯ ಮಂಡ್ಯ ತಹಶೀಲ್ದಾರ್ಗೆ ಪತ್ರ ಬರೆದಿರುವ ಜಿಲ್ಲಾಧಿಕಾರಿಗಳು ರೈತರಿಗೆ ಪರಿಹಾರ ಪಾವತಿಸುವ ಸಂಬಂಧ ಕ್ರಮವಹಿಸಿ, ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಬಂಡೂರು ಕುರಿಗೆ ಬಂಪರ್ ರೇಟ್, 1.5 ಲಕ್ಷ ರೂ.ಗೆ ಖರೀದಿ
ಇದೇ ಜನವರಿಯಲ್ಲಿ ರಾಸಾಯನಿಕ ಸೋರಿಕೆಯಿಂದ ಕಾರ್ಖಾನೆ ಸುತ್ತಮುತ್ತಲಿನ 20 ಎಕರೆಗೂ ಹೆಚ್ಚು ಬೆಳೆ ನಾಶವಾಗಿತ್ತು. ಹಲವು ಜಾನುವಾರುಗಳ ಮೇಲೆ ಪರಿಣಾಮ ಬೀರಿತ್ತು. ಹಾಗಾಗಿ ಆ ಘಟಕವನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿತ್ತು. ವಿಷಾನಿಲ ಸೋರಿಕೆಯಿಂದ ರಾಗಿ, ಭತ್ತ, ಕಬ್ಬಿನ ಬೆಳೆಗಳು ಸಂಪೂರ್ಣ ಒಣಗಿ ಹೋಗಿತ್ತು. ಕೆಲವೊಂದು ಕಡೆ ತೆಂಗಿನ ಮರಗಳಿಗೂ ಕೂಡ ಹಾನಿಯಾಗಿತ್ತು.
ಹಲವರಾರು ಬೆಳೆಗಳು ಒಣಗಿ ರೈತರಿಗೆ ನಷ್ಟ
ಕೀರ್ತಿ ರಾಸಾಯನಿಕ ತಯಾರಿಕಾ ಕಾರ್ಖಾನೆಯಿಂದ ಜ.15ರಂದು ವಿಷಾನಿಲ ಸೋರಿಕೆಯಾಗಿತ್ತು. ಸೋರಿಕೆಯಾದ ವಿಷಾನಿಲದಿಂದ ರೈತರಿಗೆ ಸೇರಿದ 15 ಎಕರೆ ಜಮೀನು ಹಾಗೂ ಸುಮಾರು 20 ಎಕರೆಗೂ ಮೇಲ್ಪಟ್ಟು ಅರಣ್ಯ ಇಲಾಖೆಗೆ ಸೇರಿದ ಪ್ರದೇಶ ಹಾನಿಗೊಳಗಾಗಿತ್ತು. ಇದರಲ್ಲಿ ರೈತರು ಬೆಳೆದ ನೂರಾರು ತೆಂಗಿನಗಿಡ, ಟೊಮ್ಯಾಟೋ ಬೆಳೆ, ರಾಗಿ ಮತ್ತು ಹುರುಳಿ ಬೆಳೆ ನಷ್ಟವಾಗಿದ್ದಲ್ಲದೆ, ನೀಲಗಿರಿ ಮರಗಳು ನಾಶವಾಗಿದ್ದವು.
ವಿಷಾನಿಲ ಸೋರಿಕೆಯಿಂದ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಲು ಸೂಕ್ತ ಆದೇಶ ನೀಡುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ ಮಂಡ್ಯ ಉಪವಿಭಾಗಾಕಾರಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ತೋಟಗಾರಿಕೆ ಇಲಾಖೆ, ವಲಯ ಅರಣ್ಯಯಾಧಿಕಾರಿ ಅವರನ್ನೊಳಗೊಂಡ ತಂಡ ರಚಿಸಿ ಬೆಳೆ ನಷ್ಟ ಕುರಿತಂತೆ ಜಂಟಿ ಸಮೀಕ್ಷಾ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.
ಮಗನನ್ನು ಪಿಎಸ್ಐ ಮಾಡುವ ಆಸೆ: 38 ಲಕ್ಷ ಕಳೆದುಕೊಂಡ ಮಂಡ್ಯದ ರೈತ
ಒಟ್ಟು 6,89,283 ರು. ಪರಿಹಾರ
ಈ ಸಂಬಂಧ ಬೆಳೆ ಹಾನಿಯಾದ ರೈತರು, ಕಾರ್ಖಾನೆ ಪ್ರತಿನಿಧಿಗಳು ಹಾಗೂ ಸಮೀಕ್ಷಾ ತಂಡದ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಗಿದ್ದು, ಅಧಿಕಾರಿಗಳು ನಿಗದಿಪಡಿಸಿದ ಪರಿಹಾರ ಮೊತ್ತ ಪಡೆಯಲು ರೈತರು, ಕಂಪನಿ ಅಧಿಕಾರಿಗಳು ಒಪ್ಪಿದ್ದರು. ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಬೆಳೆನಷ್ಟಕ್ಕೊಳಗಾದ 5 ಮಂದಿ ರೈತರಿಗೆ 2,29,603 ರು. ಹಾಗೂ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ 7 ಮಂದಿ ಲಾನುಭವಿಗಳಿಗೆ 4,49,680 ರು. ಸೇರಿ 6,89,283 ರು. ಪರಿಹಾರ ಪಾವತಿಸಲು ನಿರ್ಧರಿಸಲಾಗಿತ್ತು.
ಜೆಎಂಎಂಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ
ಮೈಸೂರಿನ ಕಾರ್ಖಾನೆಗಳು, ಬಾಯ್ಲರ್ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಸಹಾಯಕ ನಿರ್ದೇಶಕರಿಂದ ಪೂರ್ಣ ತನಿಖೆ ನಡೆಸಿ ಕಾರ್ಖಾನೆಗಳ ಕಾಯ್ದೆ 1948 ಮತ್ತು ಕರ್ನಾಟಕ ಕಾರ್ಖಾನೆಗಳ ನಿಯಮಗಳು 1969ರಲ್ಲಿನ ಉಲ್ಲಂಘನೆಗಳ ಬಗ್ಗೆ ಕಾರ್ಖಾನೆಯ ಅನುಭವದಾರರು ಮತ್ತು ವ್ಯವಸ್ಥಾಪಕರ ವಿರುದ್ಧ ಎರಡನೇ ಜೆಎಂಎಂಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಯಾರಿಗೆ ಎಷ್ಟು ಪರಿಹಾರ
ಫಲಾನುಭವಿ | ಬೆಳೆ ನಷ್ಟ | ಪರಿಹಾರ |
ಮನುಕುಮಾರ್ | 2.29 ಎಕರೆ | 67,617 ರು. |
ಬಿ.ಮುದ್ದೇಗೌಡ | 2 ಎಕರೆ | 16,162 ರು. |
ನಿಂಗರಾಜೇಗೌಡ | 2.26 ಎಕರೆ | 66,695 ರು. |
ಚಿಕ್ಕ ಸುಬ್ಬಮ್ಮ | 2 ಎಕರೆ | 43,605 ರು. |
ಪ್ರಕಾಶ್ | 1 ಎಕರೆ | 35,524 ರು. |
ಚಿಕ್ಕಸುಬ್ಬಮ್ಮ | 0.8 ಹೆಕ್ಟೇರ್ | 58,363 ರು. |
ಬುಸೀಗೌಡ | 0.4 ಹೆಕ್ಟೇರ್ | 60,000 ರು. |
ಅಶೋಕ | 0.4 ಹೆಕ್ಟೇರ್ | 60,000 ರು. |
ಎಂ.ಕೆ.ಅಶೋಕ | 0.8 ಹೆಕ್ಟೇರ್ | 1,20,000 ರು. |
ಕೃಷ್ಣೇಗೌಡ | 0.4 ಹೆಕ್ಟೇರ್ | 30,000 ರು. |
ಮಧುಕುಮಾರ್ | 1 ಹೆಕ್ಟೇರ್ | 72,954 ರು. |
ಅನಿಲ್ಕುಮಾರ್ | 0.8 ಹೆಕ್ಟೇರ್ | 58,363 ರು. |