ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದು ಜೆಡಿಎಸ್ ಗೆ ಮರಳಿದ ಕಲ್ಪನಾ ಸಿದ್ದರಾಜು
ಮದ್ದೂರು, ಏಪ್ರಿಲ್ 25 : ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಕಾಂಗ್ರೆಸ್ ತೊರೆದು ಮತ್ತೆ ಮಾತೃಪಕ್ಷ ಜೆಡಿಎಸ್ ಸೇರಿದ್ದಾರೆ.
ಮದ್ದೂರು ಪಟ್ಟಣಕ್ಕೆ ಭೇಟಿ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಜೆಡಿಎಸ್ ಗೆ ಸೇರ್ಪಡೆಗೊಂಡರು. ಈ ಹಿಂದೆ ಜೆಡಿಎಸ್ ನಲ್ಲಿ ಅನ್ಯಾಯವಾಯಿತು ಎಂದು ಕಾಂಗ್ರೆಸ್ ಗೆ ಸೇರಿದ್ದರಲ್ಲದೆ, ಟಿಕೆಟ್ ಆಕಾಂಕ್ಷೆಯಲ್ಲಿದ್ದರು. ಆದರೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಇದೀಗ ಜೆಡಿಎಸ್ ನತ್ತ ಮುಖ ಮಾಡಿದ್ದಾರೆ.
ಜಮೀರ್ ಗೆ ಟಾಂಗ್ ಕೊಟ್ಟು, ಅಂಬಿ ನನ್ನ ದೊಡ್ಡ ಅಣ್ಣ ಎಂದ ಕುಮಾರಸ್ವಾಮಿ
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಕೆಲವು ಅನಿರೀಕ್ಷಿತ ಘಟನೆಗಳಿಂದಾಗಿ ಕಲ್ಪನಾ ಅವರು ನಮ್ಮಿಂದ ಕೆಲ ಕಾಲ ದೂರವಾಗಿದ್ದರು. ಈಗ ನಾನು ಮುಖ್ಯಮಂತ್ರಿಯಾಗಲಿ ಎಂಬ ಒಂದೇ ಉದ್ದೇಶದಿಂದ ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಅವರನ್ನು ಬೆಂಬಲಿಸಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಜತೆಗೆ ಅವರೊಂದಿಗೆ ಸಾವಿರಾರು ಬೆಂಬಲಿಗರು, ಕಾರ್ಯಕರ್ತರನ್ನು ಕರೆ ತಂದಿದ್ದಾರೆ ಎಂದರು.
ಕಲ್ಪನಾ ಅವರಿಗೆ ಗೌರವನ್ವಿತ ಸ್ಥಾನ ಕೊಟ್ಟು, ಅವರ ರಾಜಕೀಯ ಬೆಳವಣಿಗೆಗೆ ಸಹಕಾರ ನೀಡುತ್ತೇನೆ. ಅವರು ಮರಳಿ ಪಕ್ಷಕ್ಕೆ ಬಂದಿರುವುದರಿಂದ ಮದ್ದೂರು ಕ್ಷೇತ್ರದಲ್ಲಿ ನಮ್ಮ ಗೆಲುವು ಇನ್ನಷ್ಟು ಸುಲಭವಾಗಲಿದೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದ ಎಂದಿಗೂ ಸಾಧ್ಯವಿಲ್ಲ. ಬೇಕಾದರೆ ಬಿಜೆಪಿ ಮತ್ತು ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಹೇಳಿದ ಅವರು, ಜಮೀರ್ ಖಾನ್ ಒಬ್ಬ ಅನಾಗರಿಕ ವ್ಯಕ್ತಿ. ಅವರ ಬಗೆಗೆ ಮಾತನಾಡಲು ನನಗೆ ಇಷ್ಟವಿಲ್ಲ ಎಂದು ಪರೋಕ್ಷ ಟಾಂಗ್ ನೀಡಿದರು.
ಶಾಸಕಿ ಕಲ್ಪನಾ ಸಿದ್ದರಾಜು ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೆಟ್ ತಪ್ಪಲು ಕಾಣದ ಕೈಗಳ ಕುತಂತ್ರವೇ ಕಾರಣ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಕಡೆ ಕ್ಷಣದವರೆಗೂ ಟಿಕೆಟ್ ದೊರಕುವ ಭರವಸೆ ನನಗೆ ಇತ್ತು. ಆದರೆ ಪಕ್ಷದಲ್ಲಿದ್ದ ಕೆಲವು ಕುತಂತ್ರಿಗಳು ನನಗೆ ಟಿಕೆಟ್ ತಪ್ಪಿಸಿದರು ಎಂದರು.
ಈ ಹಿಂದೆ ನನ್ನ ಪತಿಗೆ ಡಬಲ್ ಬಿ ಫಾರಂ ನೀಡಿ, ವಂಚಿಸಲು ಅವರೇ ಕಾರಣರಾಗಿದ್ದರು ಎಂದು ಪರೋಕ್ಷವಾಗಿ ಮಾಜಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದರು.