ಫಲಿಸೀತೆ ಚೆಲುವರಾಯಸ್ವಾಮಿ ಸೋಲಿಗೆ ಜೆಡಿಎಸ್ ಹೆಣೆದ ರಣತಂತ್ರ?
ಮಂಡ್ಯ, ಮೇ 14: ಈ ಬಾರಿ ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರ ಎಲ್ಲರ ಗಮನಸೆಳೆಯಲು ಮುಖ್ಯ ಕಾರಣ ಈ ಹಿಂದೆ ಜೆಡಿಎಸ್ ನಿಂದ ಗೆದ್ದು ಇದೀಗ ಕಾಂಗ್ರೆಸ್ ಪಾಳಯದಲ್ಲಿರುವ ಎನ್.ಚೆಲುವರಾಯಸ್ವಾಮಿ.
ಆದರೆ ಇಲ್ಲೊಂದು ಕೌತುಕ ನಡೆದಿದೆ. ಕಳೆದ ಬಾರಿ ಎನ್.ಚೆಲುವರಾಯಸ್ವಾಮಿ ಜೆಡಿಎಸ್ ನಲ್ಲಿದ್ದರು. ಈಗ ಕಾಂಗ್ರೆಸ್ನಲ್ಲಿದ್ದಾರೆ. ಈ ಬಾರಿ ಜೆಡಿಎಸ್ ನಲ್ಲಿದ್ದ ಕೆ.ಸುರೇಶ್ ಗೌಡ ಕಳೆದ ಬಾರಿ ಕಾಂಗ್ರೆಸ್ನಲ್ಲಿದ್ದಾರೆ. ಚೆಲುವರಾಯಸ್ವಾಮಿ ಅವರು ಗೆದ್ದು ಸುರೇಶಗೌಡರು ಸೋಲು ಕಂಡಿದ್ದರು.
ಗುಪ್ತಚರ ಇಲಾಖೆ ವರದಿ: ಕಾಂಗ್ರೆಸಿಗೆ 90 ಸ್ಥಾನ, ಸಿಎಂಗೆ ಎರಡೂ ಕಡೆ ಸೋಲಿನ ಭೀತಿ?
ಯಾವಾಗ ಚೆಲುವರಾಯಸ್ವಾಮಿ ಬಂಡಾಯ ಎದ್ದು ಕಾಂಗ್ರೆಸ್ ಸೇರಿದರೋ ಕಾಂಗ್ರೆಸ್ ನಲ್ಲಿದ್ದ ಸುರೇಶ್ಗೌಡರಿಗೆ ಇನ್ನು ಉಳಿಗಾಲವಿಲ್ಲ ಎಂದು ತಿಳಿದು ಜೆಡಿಎಸ್ ನತ್ತ ಮುಖ ಮಾಡಿದರು. ಈಗ ಇಬ್ಬರೂ ರಾಜಕೀಯ ಎದುರಾಳಿಗಳಾಗಿ ಸ್ಪರ್ಧಿಸಿ, ಚುನಾವಣೆ ಎದುರಿಸಿದ್ದಾರೆ.
ಫಲಿಸೀತೆ ರಣತಂತ್ರ?
ಮೇ 12 ರಂದು ಮತದಾನ ನಡೆದಿದ್ದು, ಇಲ್ಲಿ ಗೆಲುವು ಯಾರಿಗೆ ಎಂಬ ಕುತೂಹಲ ಆರಂಭವಾಗಿದೆ. ಮೇ 15 ರಂದು ಹೊರಬೀಳಲಿರುವ ಫಲಿತಾಂಶದಲ್ಲಿ ಚೆಲುವರಾಯಸ್ವಾಮಿಯನ್ನು ಸೋಲಿಸುವ ಜೆಡಿಎಸ್ ರಣತಂತ್ರ ಫಲ ನೀಡುತ್ತದೆಯೇ ಎಂಬುದು ತಿಳಿಯಲಿದೆ.
ಜೆಡಿಎಸ್ ನಿಂದ ಹೊರ ಹೋದ ಚೆಲುವರಾಯಸ್ವಾಮಿ ಅವರನ್ನು ಸೋಲಿಸಲೇ ಬೇಕೆಂಬ ಹಠಕ್ಕೆ ದೇವೇಗೌಡರು ಮತ್ತು ಕುಮಾರಸ್ವಾಮಿ ಪಣತೊಟ್ಟಂತೆ ಕಂಡುಬರುತ್ತಿದೆ. ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಚುನಾವಣಾ ಪೈಪೋಟಿ ತುಸು ಹೆಚ್ಚು ಎಂಬಂತೆ ಕಾಣುತ್ತಿದೆ.
ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಆಪ್ತನ ಮನೆ ಮೇಲೆ ಐಟಿ ರೇಡ್
ಸೋಲಿಸಲು ಸಾಲುಗಟ್ಟಿನಿಂತವರು!
ಜೆಡಿಎಸ್ ನಾಯಕರ ವಿರುದ್ಧವೇ ಎನ್.ಚೆಲುವರಾಯಸ್ವಾಮಿ ಅವರು ಟೀಕಾಪ್ರಹಾರ ಮಾಡುತ್ತಿದ್ದು, ಅವರನ್ನು ಹೆಡೆಮುರಿಕಟ್ಟಲು ಎಚ್.ಡಿ.ದೇವೇಗೌಡರ ಸಾರಥ್ಯದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಎಲ್.ಆರ್.ಶಿವರಾಮೇಗೌಡ, ಕೆ.ಸುರೇಶ್ಗೌಡರ ಜತೆಗೆ ಐಆರ್ಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಬಂದಿರುವ ಡಾ. ಲಕ್ಷ್ಮೀ ಅಶ್ವಿನ್ಗೌಡ, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಡಿ.ಸಿ.ತಮ್ಮಣ್ಣ ಮೊದಲಾದವರು ಟೊಂಕ ಕಟ್ಟಿ ನಿಂತಿದ್ದಾರೆ.
ಚೆಲುವರಾಯಸ್ವಾಮಿಗೆ ಈ ಚುನಾವಣೆ ಪ್ರತಿಷ್ಠೆಯ ಕಣ
ಬಂಡಾಯ ಶಾಸಕರ ಮೇಲೇ ಟಾರ್ಗೆಟ್
ಬಂಡಾಯ ಶಾಸಕರನ್ನೇ ಟಾರ್ಗೆಟ್ ಮಾಡಿರುವ ದೇವೇಗೌಡರು ಮತ್ತು ತಂಡ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಿಸಲು ಹೋರಾಡುತ್ತಿದ್ದು ಬಂಡಾಯ ಶಾಸಕರನ್ನು ಯಾವುದೇ ಕಾರಣಕ್ಕೂ ಗೆಲ್ಲಿಸಲು ಬಿಡಬಾರದೆಂಬ ತೀರ್ಮಾನಕ್ಕೆ ಬಂದಂತೆ ಕಂಡುಬರುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಚೆಲುವರಾಯಸ್ವಾಮಿ ಅವರಿಗೆ ಹೆಚ್ಚಿನ ಬಲ ಸಿಕ್ಕಿದೆ. ಆಡಳಿತ ಬಲ, ಹಣ ಬಲ ಎಲ್ಲವೂ ಇರುವುದರಿಂದ ಗೆಲುವು ನಮ್ಮದೇ ಎಂಬ ಧೈರ್ಯ ಬಂದಿದೆ.
ಗೆಲ್ಲುವ ವಿಶ್ವಾಸದಲ್ಲಿ ಚೆಲುವರಾಯಸ್ವಾಮಿ
ಸ್ತ್ರೀ ಶಕ್ತಿ ಸಂಘಗಳು, ಗುತ್ತಿಗೆದಾರರು, ಮುಖಂಡರು ಎಲ್ಲರನ್ನು ತಮ್ಮತ್ತ ಸೆಳೆಯಲು ಏನು ಬೇಕೋ ಅದನ್ನು ಮಾಡಿಯಾಗಿದೆ. ಹೀಗಾಗಿ ಚೆಲುವರಾಯ ಸ್ವಾಮಿ ಅವರು ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಇರುವುದರಿಂದ ಉಳಿದಂತೆ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಇಲ್ಲಿ ಗೌಣವಾಗಿದ್ದಾರೆ. ಒಟ್ಟಾರೆ ಕ್ಷೇತ್ರದಲ್ಲಿ ಏನಾಗುತ್ತದೆ ಎಂಬ ಕುತೂಹಲ ಮಾತ್ರ ಎಲ್ಲರನ್ನು ಕಾಡುತ್ತಲೇ ಇದೆ.