ಹಲ್ಲೆ ಆರೋಪ: ಮಂಡ್ಯ ಸಂಸದ ಪುಟ್ಟರಾಜು ವಿರುದ್ಧ ಎಫ್ಐಆರ್
ಮಂಡ್ಯ, ಮೇ 14: ರೈತ ಸಂಘದ ಕಾರ್ಯಕರ್ತನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ ಆರೋಪದಲ್ಲಿ ಸಂಸದ ಸಿ.ಎನ್. ಪುಟ್ಟರಾಜು ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮತದಾನದ ನಡೆದ ಮೇ 12ರಂದು ಸಿ.ಎನ್. ಪುಟ್ಟರಾಜು ಮತ್ತು ಅವರ ಬೆಂಬಲಿಗರು ಚಿನಕುರುಳಿ ಗ್ರಾಮದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ರೈತ ಸಂಘದ ಕಾರ್ಯಕರ್ತ ಕೆ.ಎಸ್. ದೀಕ್ಷಿತ್ ಎಂಬುವವರು ದೂರು ನೀಡಿದ್ದಾರೆ. ಅಲ್ಲದೆ, ತಮ್ಮನ್ನು ಅವಾಚ್ಯ ಪದಗಳಿಂದ ನಿಂದನೆ ಮಾಡಿ, ಬೆದರಿಕೆ ಹಾಕಿದ್ದರು ಎಂದು ಸಹ ಆರೋಪಿಸಿದ್ದಾರೆ.
'ಸಿದ್ದರಾಮಯ್ಯ ಅವರಿಂದ ಮಂಡ್ಯ ಕಾಂಗ್ರೆಸ್ ಮುಕ್ತ'
ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಐಪಿಎಸ್ ಸೆಕ್ಷನ್ 323, 341 ಮತ್ತು 504 ಅಡಿ ಪ್ರಕರಣ ದಾಖಲಿಸಲಾಗಿದೆ.
ಸಂಸದ ಪುಟ್ಟರಾಜು ಅವರು ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಘಟನೆ ಸಂಬಂಧ ಪುಟ್ಟರಾಜು ಅವರ ಗನ್ಮ್ಯಾನ್ ರಮೇಶ್ ಅವರು ದೀಕ್ಷಿತ್ ವಿರುದ್ಧ ಪ್ರತಿ ದೂರು ನೀಡಿದ್ದಾರೆ. ದೀಕ್ಷಿತ್ ಅವರು ಸಂಸದರ ಕಾರನ್ನು ಅಡ್ಡಗಟ್ಟಲು ಪ್ರಯತ್ನಿಸಿದರು. ಅವರನ್ನು ತಡೆಯಲು ಹೋದ ತಮ್ಮ ಮೇಲೆ ದೀಕ್ಷಿತ್ ಹಲ್ಲೆ ನಡೆಸಿದರು ಎಂದು ರಮೇಶ್ ದೂರು ನೀಡಿದ್ದಾರೆ. ದೀಕ್ಷಿತ್ ಮೇಲೆಯೂ ಎಫ್ಐಆರ್ ದಾಖಲಿಸಲಾಗಿದೆ.