ಕನ್ನಡ ಸೊಗಡು ಮರೆಯಾಗದಿರಲು ದುಬೈನಲ್ಲಿ ಕನ್ನಡ ಶಾಲೆ
ಮಂಡ್ಯ, ಆಗಸ್ಟ್ 20 : ಕನ್ನಡಿಗರು ವಿಶ್ವದ ಎಲ್ಲ ಮೂಲೆ ಮೂಲೆಗಳಲ್ಲೂ ನೆಲೆಸಿದ್ದಾರೆ. ಅನಿವಾಸಿ ಭಾರತೀಯರಿಗೆ ಕನ್ನಡ ನಾಡಿನಲ್ಲಿ ವಿಳಾಸ ಹುಡುಕುವುದು ಕಷ್ಟ. ಇದನ್ನು ಅರಿತ ನಾವು ದುಬೈ ಕನ್ನಡ ಶಾಲೆಯನ್ನು ಆರಂಭಿಸಿ ದುಬೈನಲ್ಲಿ ನೆಲೆಸಿರುವ ಎಲ್ಲ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸಿಕೊಡುವ ಕೆಲಸ ಮಾಡುತ್ತಿದ್ದೇವೆ ಎಂದು ಕನ್ನಡ ಮಿತ್ರರು ಯು.ಎ.ಇ ಸಂಘಟನೆ ದುಬೈ ಕನ್ನಡ ಪಾಠ ಶಾಲೆಯ ಮಾಧ್ಯಮ ಸಂಚಾಲಕ ಎ.ಎನ್. ಭಾನುಕುಮಾರ್ ತಿಳಿಸಿದರು.
ಮಗನೊಂದಿಗೆ ಶಾಲೆಗೆ ಸೇರಿದ ನೇಪಾಳಿ ಮಹಿಳೆ
ಮಳವಳ್ಳಿ ತಾಲ್ಲೂಕಿನ ಅಗಸನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 'ಕನ್ನಡ ಮಿತ್ರರು ಯು.ಎ.ಇ ಸಂಘಟನೆ' ದುಬೈ ಕನ್ನಡ ಪಾಠ ಶಾಲೆ ವತಿಯಿಂದ ಉಚಿತ ಲ್ಯಾಪ್ಟಾಪ್, ಪ್ರೊಜೆಕ್ಟರ್ ಮತ್ತು ಯು.ಪಿ.ಎಸ್. ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ವಿದೇಶದಲ್ಲಿ ನೆಲೆಸಿರುವ ಎಷ್ಟೋ ಮಂದಿ ತಮ್ಮ ಕುಟುಂಬದೊಂದಿಗೆ ತಾಯಿನಾಡಿಗೆ ಬಂದರೆ ಇಲ್ಲಿ ಕನ್ನಡ ಮಾತನಾಡಲು ಬರುವುದಿಲ್ಲ. ದೊಡ್ಡವರಾದ ನಾವು ಮಾತನಾಡುತ್ತೇವೆ. ನಮ್ಮ ಮಕ್ಕಳು ಮಾತನಾಡಲಾಗದು. ಇದರಿಂದಾಗಿ ಎಷ್ಟೋ ಬಾರಿ ಮಂಡ್ಯ ಸೇರಿದಂತೆ ಗ್ರಾಮೀಣ ಸೊಗಡಿನ ಜಿಲ್ಲೆಗಳಲ್ಲಿ ವಿಳಾಸ ಹುಡುಕುವುದು ಕಷ್ಟವಾಗುತ್ತದೆ.
ಕನಿಷ್ಠ ನಮ್ಮ ಮಕ್ಕಳು ಇಲ್ಲಿ ಬಂದು ವಿಳಾಸ ಕೇಳುವುದಕ್ಕಾದರೂ ಕನ್ನಡ ಕಲಿಯಬೇಕು ಎಂಬ ಉದ್ದೇಶದಿಂದ ಕನ್ನಡ ಶಾಲೆಯನ್ನು ದುಬೈನಲ್ಲಿ ಆರಂಭಿಸಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಕುಟುಂಬದ ಒಬ್ಬೊಬ್ಬರು ಸ್ವತಃ ಶಿಕ್ಷಕರಾಗಿ ಕನ್ನಡ ಕಲಿಸುತ್ತಿದ್ದಾರೆ. ಇದರಿಂದ ಪ್ರೇರಿತರಾದ ಬೇರೆ ಬೇರೆ ಕಡೆಗಳಲ್ಲೂ ಇದನ್ನು ಅನುಸರಿಸುತ್ತಿದ್ದಾರೆ. ತಾಯಿ ನಾಡನ್ನು ಯಾರೂ ಮರೆಯಬಾರದು. ಹಾಗಾಗಿ ನಾವು ನಮ್ಮ ಕನ್ನಡ ತಾಯಿ ನಾಡಿಗಾಗಿ ಒಂದಷ್ಟು ಸೇವೆ ಮಾಡುತ್ತಿದ್ದೇವೆ. ಎಲ್ಲ ಅನಿವಾಸಿ ಭಾರತೀಯರೂ ಇದನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
Recommended Video
ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ, "ದೂರದ ದೇಶದಲ್ಲಿ ನೆಲೆಸಿದ್ದರೂ , ಜನ್ಮ ಭೂಮಿಯ ಮೇಲಿನ ಕನ್ನಡ ಮಿತ್ರರ , ಭಾಷಾ ಪ್ರೇಮ ಮತ್ತು ಕಾಳಜಿಯನ್ನು ಶ್ಲಾಘಿಸುತ್ತ , ದುಬೈ ಕನ್ನಡ ಪಾಠ ಶಾಲೆಯ ಚಟುವಟಕೆಗಳನ್ನು ಪ್ರಶಂಸಿಸಿದರು. ದೂರದ ದುಬೈನಲ್ಲಿ ನೆಲೆಸಿದ್ದರೂ , ಮಾತೃಭಾಷೆ ಮೇಲೆ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿರುವ ಕನ್ನಡ ಮಿತ್ರರು ದುಬೈ ಸಂಘಟನೆ ಹಾಗೂ ಕನ್ನಡ ಪಾಠ ಶಾಲೆ ದುಬೈ ನಿಜಕ್ಕೂ ಎಲ್ಲರಿಗೂ ಮಾದರಿ. ಇಂದಿನ ಸ್ವರ್ಧಾತ್ಮಕ ಜಗತ್ತಿನಲ್ಲಿ ಡಿಜಿಟಲ್ ಶಿಕ್ಷಣದ ಅವಶ್ಯಕತೆ ಇದ್ದು , ಈ ಎಲ್ಲ ಪರಿಕರಗಳ ಉಪಯೋಗ ಪಡೆದುಕೊಳ್ಳಬೇಕು," ಎಂದು ಎಲ್ಲಾ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.