ದರ್ಶನ್ ಪುಟ್ಟಣ್ಣಯ್ಯ ಪರ ಮತಯಾಚಿಸಿದ ಜಿಗ್ನೇಶ್ ಮೇವಾನಿ, ಸೆಂಚುರಿ ಗೌಡ
ಮೇಲುಕೋಟೆ (ಮಂಡ್ಯ), ಮೇ 2: ಮೇಲುಕೋಟೆಯಿಂದ ಸ್ವರಾಜ್ ಇಂಡಿಯಾದ ಅಭ್ಯರ್ಥಿಯಾಗಿ ದರ್ಶನ್ ಪುಟ್ಟಣ್ಣಯ್ಯ ಕಣಕ್ಕಿಳಿದಿದ್ದಾರೆ. ಇಂದು ದರ್ಶನ್ ಪುಟ್ಟಣ್ಣಯ್ಯ ಪರ ಗುಜರಾತ್ ನ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಮತ ಯಾಚಿಸಿದರು.
ಈ ಸಂಬಂಧ ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಗ್ನೇಶ್, "ನಿಜವಾದ ಕಾಳಜಿಯುಳ್ಳ ಮಣ್ಣಿನ ಮಗ ಪುಟ್ಟಣ್ಣಯ್ಯ. ಅಂತಹವರು ಇಂದು ನಮ್ಮ ನಡುವೆ ಇಲ್ಲ. ಅವರ ಮಗ ದರ್ಶನ್ ಗೆಲ್ಲಿಸುವ ಮೂಲಕ ನಿಜವಾದ ಕೃಷಿಕರಿಗೆ ಬೆಲೆ ಕೊಡಿ. ವಿಧಾನಸೌಧದ ಮೊಗಸಾಲೆಯಲ್ಲಿ ದರ್ಶನ್ ಕೂರುವುದನ್ನು ನೋಡುವ ಆಸೆ ನನಗಿದೆ. ಅವರು ಗೆದ್ದರೆ ಕೃಷಿ ಸಮೂಹಕ್ಕೆ ಹೆಚ್ಚು ಅನುಕೂಲವಾಗಲಿದೆ. ದರ್ಶನ್ ಪುಟ್ಟಣ್ಣಯ್ಯರನ್ನ ಗೆಲ್ಲಿಸಿ," ಎಂದು ಮನವಿ ಮಾಡಿದ್ದಾರೆ.
ಮೋದಿಗಿಂತ ಸಿದ್ದರಾಮಯ್ಯರಿಂದ ಅಭಿವೃದ್ಧಿಪರ ಕೆಲಸ: ಜಿಗ್ನೇಶ್
"ಪುಟ್ಟಣ್ಣಯ್ಯ ರೈತರ ಪರ ಹೋರಾಟ ಮಾಡಿದ ವ್ಯಕ್ತಿ. ಅವರ ಹೋರಾಟದ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಅವರೊಬ್ಬ ಉತ್ತಮ ರೈತ ನಾಯಕ, ಹೋರಾಟಗಾರ. ಹಾಗಾಗಿ ನಾನು ಇಂದು ಪಾಂಡವಪುರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಿದ್ದೇನೆ," ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇದೇ ವೇಳೆ ತಿಥಿ ಸಿನಿಮಾದ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಸೆಂಚುರಿ ಗೌಡರು ಕೂಡ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಮತ ಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮೇಲುಕೋಟೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆ ನಾಲ್ಕು ಗಂಟೆಗೆ ದರ್ಶನ್ ಪರ ಸಚಿವ ಡಿಕೆ ಶಿವಕುಮಾರ್ ರೋಡ್ ಶೋ ನಡೆಸಲಿದ್ದಾರೆ. ಪಾಂಡವಪುರ ಮತ್ತು ಚಿನಕುರುಳಿಯಲ್ಲಿ ಶಿವಕುಮಾರ್ ರೋಡ್ ಶೋ ನಡೆಸಿ ದರ್ಶನ್ ಪರ ಮತಯಾಚಿಸಲಿದ್ದಾರೆ.