ಕೆ.ಆರ್.ಪೇಟೆಯಲ್ಲಿ ಗೆಲುವಿಗಾಗಿ ಆರಂಭವಾಗಿದೆ ಜೆಡಿಎಸ್ ಗಾಳ
Recommended Video
ಮಂಡ್ಯ, ನವೆಂಬರ್ 21: ಉಪಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಕೆ.ಆರ್.ಪೇಟೆಯಲ್ಲಿ ರಾಜಕೀಯ ಜಿದ್ದಾಜಿದ್ದಿ ಆರಂಭವಾಗಿದೆ. ಜೆಡಿಎಸ್ ನ ಭದ್ರಕೋಟೆಯಾಗಿರುವ ಕೆ.ಆರ್.ಪೇಟೆ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕೆಂಬ ಹಠಕ್ಕೆ ಬಿದ್ದಿರುವ ಜೆಡಿಎಸ್ ನಾಯಕರು ಕಾಂಗ್ರೆಸ್ನಲ್ಲಿದ್ದ ಮುಖಂಡರು ಮತ್ತು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಗೆಲುವಿಗಾಗಿ ತಂತ್ರ ಆರಂಭಿಸಿದ್ದಾರೆ.
ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಕಟ್ಟಾ ಬೆಂಬಲಿಗ ಮನ್ಮುಲ್ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ಎಂ.ಬಿ.ಹರೀಶ್ ಅವರಿಗೆ ಗಾಳ ಹಾಕುವ ಮೂಲಕ ಚೆಲುವರಾಯಸ್ವಾಮಿ ಅವರಿಗೆ ಸಡ್ಡು ಹೊಡೆಯುವಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಯಶಸ್ವಿಯಾಗಿದ್ದಾರೆ.
ಮನ್ ಮುಲ್ ಅಧ್ಯಕ್ಷ ಎಂ.ಬಿ. ಹರೀಶ್ ಗೆ ಜೆಡಿಎಸ್ ನಿಂದ ಸ್ವಾಗತ
ಕೆ.ಆರ್.ಪೇಟೆ ಪಟ್ಟಣದ ಸುಭಾಷ್ನಗರದಲ್ಲಿರುವ ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಅವರ ನಿವಾಸದಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಎಂ.ಬಿ.ಹರೀಶ್ ಮತ್ತು ಬೆಂಬಲಿಗರಿಗೆ ಜೆಡಿಎಸ್ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಎಚ್.ಡಿ.ರೇವಣ್ಣ ಸ್ವಾಗತಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, "ನಮ್ಮ ಪಕ್ಷದಲ್ಲಿ ಎರಡು ಬಾರಿ ಗೆದ್ದು, ಪಕ್ಷಕ್ಕೆ ದ್ರೋಹ ಮಾಡಿ ಪಕ್ಷದ ಕಾರ್ಯಕರ್ತರನ್ನು ನಡುನೀರಿನಲ್ಲಿ ಕೈಬಿಟ್ಟು ಹೋಗಿರುವ ಅನರ್ಹ ಶಾಸಕ ನಾರಾಯಣಗೌಡರಿಗೆ ದೇವರೇ ಶಿಕ್ಷೆ ಕೊಡುತ್ತಾನೆ. ಜೆಡಿಎಸ್ ನಲ್ಲಿ ಚೆನ್ನಾಗಿ ಮೇಯ್ದುಕೊಂಡು, ಬೇರೆಡೆಗೆ ಮೇಯಲು ಹೋಗಿದ್ದಾರೆ. ಅವರಿಗೆ ವೈಯಕ್ತಿಕವಾಗಿ ಏನು ಹೇಳಲ್ಲ" ಎಂದರು.
ನಾರಾಯಣಗೌಡರ ಮೇಲೆ ಚಪ್ಪಲಿ ಎಸೆದ ಜೆಡಿಎಸ್ ಕಾರ್ಯಕರ್ತರು
ಮಾಜಿ ಸ್ಪೀಕರ್ ಕೃಷ್ಣ ಬೆಂಬಲಿತ ಹರೀಶ್
ಪಕ್ಷಕ್ಕೆ ಸೇರ್ಪಡೆಗೊಂಡಿರುವ ಯುವ ಮುಖಂಡ ಎಂ.ಬಿ.ಹರೀಶ್ ಅವರು ಮಾಜಿ ಸ್ಪೀಕರ್ ಕೃಷ್ಣ ಅವರ ಬೆಂಬಲಿಗರು. 2013ರ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿ ಕೃಷ್ಣ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಬಳಿಕ ಜೆಡಿಎಸ್ ಸೇರ್ಪಡೆಗೊಂಡಿದ್ದರು. 2018ರ ಚುನಾವಣೆಯಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ನಾಯಕತ್ವ ನಂಬಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ರಾಜಕೀಯ ಸಂದಿಗ್ಧ ಪರಿಸ್ಥಿತಿಯಲ್ಲಿ ಮರಳಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಸ್ಥಾನಮಾನ ನೀಡಲಾಗುವುದು ಎನ್ನುವ ಮೂಲಕ ಬೇರೆ ಪಕ್ಷದಿಂದ ಬರುವ ಮುಖಂಡರಿಗೆ ಸ್ಥಾನ ಮಾನ ನೀಡುವ ಬಗ್ಗೆ ಪರೋಕ್ಷವಾಗಿಯೇ ಹೇಳಿದ್ದಾರೆ.
ಗೆಲ್ಲುವ ಹಠದಲ್ಲಿ ಜೆಡಿಎಸ್
ಸದ್ಯ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು ಈ ಪೈಕಿ ಜೆಡಿಎಸ್ ನಿಂದ ಹೊರ ಹೋಗಿರುವ ಮೂವರು ಶಾಸಕರಾದ ವಿಶ್ವನಾಥ್, ನಾರಾಯಣಗೌಡ ಮತ್ತು ಗೋಪಾಲಯ್ಯ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮುಂದಿನ ದಿನಗಳಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಸೇರಿದಂತೆ ನಾಯಕರು ಯಾವ ರೀತಿಯ ದಾಳಗಳನ್ನು ಎಸೆಯುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ಉಪ ಚುನಾವಣೆ: ಸಂಸದೆ ಸುಮಲತಾ ಅಂಬರೀಶ್ ಬೆಂಬಲ ಯಾರಿಗೆ?
ಅಭಿವೃದ್ಧಿಗಾಗಿ ಬಿಜೆಪಿಗೆ ಬಂದ ಎಂದ ನಾರಾಯಣ ಗೌಡ
ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರ ಮೇಲೆ ಜೆಡಿಎಸ್ ಕಾರ್ಯಕರ್ತರು ಈಚೆಗೆ ಚಪ್ಪಲಿ ಎಸೆದಿದ್ದ ಘಟನೆ ಕೆಆರ್ ಪೇಟೆಯಲ್ಲಿ ನಡೆದಿತ್ತು. ನಾರಾಯಣಗೌಡ ಅವರು ಮೊದಲು ಜೆಡಿಎಸ್ ನಲ್ಲಿಯೇ ಇದ್ದವರು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಾಮಪತ್ರ ಸಲ್ಲಿಕೆಗೆಂದು ತೆರಳಿದ್ದ ವೇಳೆ ನಾರಾಯಣಗೌಡರ ಮೇಲೆ ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ಎಸೆದಿದ್ದರು. ಜೆಡಿಎಸ್ ಗೆ ದ್ರೋಹ ಬಗೆದು ಬಿಜೆಪಿಗೆ ಹಾರಿದ್ದೀರ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಒಂದು ಘಟನೆ ಕೆ.ಆರ್.ಪೇಟೆ ಚುನಾವಣೆ ಮೇಲೆ ಪರೋಕ್ಷ ಪರಿಣಾಮ ಬೀರುವ ಬಗ್ಗೆಯೂ ಮಾತುಗಳು ಕೇಳಿಬಂದಿವೆ.