ಜೆಡಿಎಸ್ ಭದ್ರ ಕೋಟೆ ಮಂಡ್ಯ ಮತ್ತೆ 'ಗೌಡರ' ವಶಕ್ಕೆ
ಮಂಡ್ಯ, ನವೆಂಬರ್ 6: ನಿರೀಕ್ಷೆಯಂತೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್ .ಆರ್. ಶಿವರಾಮೇಗೌಡ ಭರ್ಜರಿ ಜಯ ಗಳಿಸಿದ್ದಾರೆ.
ಈ ಬಾರಿ ಶತಾಯಗತಾಯ ಗೆಲ್ಲಲೇಬೇಕೆಂಬ ಉದ್ದೇಶದಿಂದ ಡಾ. ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಿದ್ದ ಬಿಜೆಪಿ ಹೀನಾಯ ಸೋಲು ಕಂಡಿದೆ. ಮೈತ್ರಿ ಸರ್ಕಾರದ ದೋಸ್ತಿ ಪಕ್ಷ ಕಾಂಗ್ರೆಸ್ ಬಲವೂ ದಕ್ಕಿದ್ದರಿಂದ ಜೆಡಿಎಸ್ ನಿರೀಕ್ಷೆ ಮೀರಿದ ಗೆಲುವಿನ ಅಂತರ ಸಾಧಿಸಿದೆ.
ಮಂಡ್ಯ ಲೋಕಸಭೆ ಉಪಚುನಾವಣೆ ಫಲಿತಾಂಶ: LIVE: ಜೆಡಿಎಸ್ನ ಶಿವರಾಮೇಗೌಡ ಮುನ್ನಡೆ
19 ವರ್ಷಗಳ ಬಳಿಕ ಶಿವರಾಮೇಗೌಡ ಗೆಲುವಿನ ರುಚಿಯನ್ನು ಕಂಡಿದ್ದಾರೆ. ಅಂಬರೀಶ್ ಅವರು 1,81,00 ಮತಗಳನ್ನು ಗಳಿಸಿದ್ದರು. ಅಂಬರೀಶ್ ಅವರ ಮತಗಳ ದಾಖಲೆಯನ್ನು ಮುರಿದಿದ್ದಾರೆ.
ಮಂಡ್ಯದಲ್ಲಿ ಬೆಳಗ್ಗೆ 8ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿತ್ತು. ಸರ್ಕಾರಿ ಮಹಾವಿದ್ಯಾಲಯದ ಮುಖ್ಯಕಟ್ಟಡದ ಕೊಠಡಿ ಸಂಖ್ಯೆ 5,6,7,8,9,12,14 ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ಕಾರ್ಯ ಕಾಲೇಜಿನ ಸ್ನಾತಕೋತ್ತರ ಬ್ಲಾಕ್ನ ನೆಲ ಮಹಡಿ ಕೊಠಡಿ ಸಂಖ್ಯೆ 24,25ರಲ್ಲಿ ಮತ್ತು ಮದ್ದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತ ಎಣಿಕೆ ಕಾರ್ಯ ಕಾಲೇಜಿನ ಸ್ನಾತಕೋತ್ತರ ಬ್ಲಾಕ್ನ ಮೊದಲ ಅಂತಸ್ತಿನ ಕೊಠಡಿ ಸಂಖ್ಯೆ 28,31ರಲ್ಲಿ ಮತ ಎಣಿಕೆ ನಡೆಯಿತು.
ಮಂಡ್ಯದಲ್ಲಿ ವಿಜಯಲಕ್ಷ್ಮೀ ಪಟಾಕಿ ಹೊಡೆಯುವತ್ತ ಜೆಡಿಎಸ್
ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ 5,69,302 ಮತಗಳಿಂದ ಗೆಲುವು ಸಾಧಿಸಿದ್ದಾರೆ, ಬಿಜೆಪಿ ಅಭ್ಯರ್ಥಿ ಡಾ ಸಿದ್ದರಾಮಯ್ಯ 2,44,377 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 3,24,925 ಮತಗಳ ಅಂತರದಲ್ಲಿ ಶಿವರಾಮೇಗೌಡ ಗೆಲುವು ಸಾಧಿಸಿದ್ದಾರೆ. ಮಂಡ್ಯದಲ್ಲಿ ಒಟ್ಟು 13 ಸಾವಿರ ನೋಟಾ ಮತಗಳು ಚಲಾವಣೆಯಾಗಿತ್ತು.
ಶಿವರಾಮೇಗೌಡ 1989,1994ರಲ್ಲಿ ಎರಡು ಬಾರಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅವರು ಒಂದೂವರೆ ಲಕ್ಷ ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಒಂದೂವರೆ ವರ್ಷಗಳ ಹಿಂದೆ ಜೆಡಿಎಸ್ ಸೇರಿದ್ದರು.ಹಾಲಿ ಸಚಿವ ಸಿಎಸ್ ಪುಟ್ಟರಾಜು ಅವರ ರಾಜಿನಾಮೆಯಿಂದ ತೆರವಾಗಿತ್ತು.
ಈ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಲ್ಆರ್ ಶಿವರಾಮೇಗೌಡ ಕಣಕ್ಕಿಳಿದಿದ್ದು ಕಾಂಗ್ರೆಸ್ ಇಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿತ್ತು.ಹೀಗಾಗಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರಿಗೆ ಕಾಂಗ್ರೆಸ್ ನ ಬೆಂಬಲವೂ ದೊರಕಿದೆ.