ಮಂಡ್ಯದಲ್ಲಿ ನಾಯಕರ ಹೇಳಿಕೆಗಳು ಜೆಡಿಎಸ್ ವರ್ಚಸ್ಸಿಗೆ ಧಕ್ಕೆ ತರುತ್ತಾ?
ಮಂಡ್ಯ, ಫೆಬ್ರವರಿ 08: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿಗೆ ಮಂಡ್ಯ ಕ್ಷೇತ್ರ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಇಲ್ಲಿ ಎರಡು ಪಕ್ಷಗಳ ನಾಯಕರು ತಮ್ಮ ಹಠಕ್ಕೆ ಬಿದ್ದಿದ್ದು, ಜೆಡಿಎಸ್ ನಾಯಕರ ಹೇಳಿಕೆಗಳೇ ಪಕ್ಷಕ್ಕೆ ಭಾರೀ ಹೊಡೆತ ನೀಡುವ ಸಾಧ್ಯತೆ ಹೆಚ್ಚಾಗಿದೆ.
ಸುಮಲತಾ ಅಂಬರೀಶ್ ಅವರ ಬಗೆಗೆ ಜೆಡಿಎಸ್ ನಾಯಕರು ನೀಡುತ್ತಿರುವ ಹೇಳಿಕೆ ಕೇವಲ ಮಂಡ್ಯ ಮಾತ್ರವಲ್ಲದೆ, ಬೇರೆ ಕ್ಷೇತ್ರದಲ್ಲಿಯೂ ಪರಿಣಾಮ ಬೀರಿದರೆ ಅಚ್ಚರಿ ಪಡುವಂತಿಲ್ಲ. ಜೆಡಿಎಸ್ ನಾಯಕರು ಮೌನವಾಗಿದ್ದರೆ ಒಳ್ಳೆಯದು ಆದರೆ ಅದ್ಯಾಕೋ ಗೊತ್ತಿಲ್ಲ ಆ ರೀತಿ ಇರಲು ಸಾಧ್ಯವಾಗದೆ ದೇವೇಗೌಡರ ಕುಟುಂಬದ ನಿಷ್ಠೆಯಿಂದಾಗಿ ನಾಯಕರು ಸುಮಲತಾ ಅವರ ಬಗ್ಗೆ ಅನಗತ್ಯ ಹಾಗೂ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಕೇವಲ ನಾಯಕರಿಗೆ ಮಾತ್ರವಲ್ಲ ಜೆಡಿಎಸ್ ಪಕ್ಷಕ್ಕೂ ಧಕ್ಕೆ ತರುತ್ತಿದೆ ಎಂದರೆ ತಪ್ಪಾಗಲಾರದು.
ಈಗಾಗಲೇ ಮಂಡ್ಯದಲ್ಲಿ ಅಂಬರೀಶ್ ನಿಧನದ ನಂತರ ಸುಮಲತಾ ಮತ್ತು ಅಭಿಷೇಕ್ ಅವರ ಬಗ್ಗೆ ಜನರಲ್ಲಿ ತುಸು ಹೆಚ್ಚಿನ ಅಭಿಮಾನ ಮತ್ತು ಅನುಕಂಪ ತೋರುತ್ತಿದ್ದಾರೆ. ಹೀಗಿರುವಾಗ ಅವರ ಬಗ್ಗೆಯೇ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಜನರಲ್ಲಿ ತಪ್ಪು ಭಾವನೆ ಹುಟ್ಟು ಹಾಕುತ್ತಿದ್ದು, ಅದು ಚುನಾವಣೆ ವೇಳೆ ಜೆಡಿಎಸ್ ಗೆ ಹಿನ್ನಡೆಯಾಗುವ ಲಕ್ಷಣಗಳು ಕಂಡು ಬರುತ್ತಿದೆ.
ಕರ್ನಾಟಕ ವಿಧಾನಸಭೆ ಅಧಿವೇಶನ LIVE: ಸರ್ಕಾರ ಉಳಿಯುತ್ತಾ, ಬೀಳುತ್ತಾ?
ಈ ನಡುವೆ ಜೆಡಿಎಸ್ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡರು ಸುಮಲತಾ ಅವರ ಮೂಲದ ಬಗ್ಗೆ ಪ್ರಶ್ನಿಸಿದ್ದು, ಅಂಬಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಜತೆಗೆ ಮಂಡ್ಯಕ್ಕೆ ಸುಮಲತಾ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ದೋಸ್ತಿಗೆ ಧಕ್ಕೆ ಯಾಗಿದೆ. ಜತೆಗೆ ಎರಡು ಪಕ್ಷಗಳ ನಾಯಕರ ವಾಗ್ಯುದ್ಧಕ್ಕೂ ಕಾರಣವಾಗಿದೆ.
ಇಬ್ಬರ ಜಗಳ ಮೂರನೆಯವನಿಗೆ ಲಾಭ
ಕುಮಾರಸ್ವಾಮಿ ಪತ್ನಿ ಅನಿತಾ ಕೂಡ ಆಂಧ್ರ ಮೂಲದವರೇ ಎನ್ನುವ ಮಾತುಗಳು ಜೆಡಿಎಸ್ ಗೂ ಮುಳುವಾಗಿದೆ. ಅಂಬರೀಶ್ ನಿಧನ ವೇಳೆ ಕುಮಾರಸ್ವಾಮಿ ನಿರ್ವಹಿಸಿದ ರೀತಿ ಮತ್ತು ನಡವಳಿಕೆಗಳು ಅವರ ಮೇಲೆ ಹೆಚ್ಚಿನ ಅಭಿಮಾನ ಬರುವಂತೆ ಮಾಡಿತ್ತು. ಆದರೆ ಚುನಾವಣೆಯ ವಿಚಾರ ಬಂದಾಗ ಅವರ ಹೇಳಿಕೆ ಅವರ ಸ್ವಾರ್ಥ ಮನೋಭಾವನೆಯನ್ನು ತೋರಿಸುತ್ತಿದೆ. ಇದನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು, ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ತಂತ್ರವನ್ನು ಬಳಸಿಕೊಳ್ಳಲು ಮುಂದಾಗಿದೆ.
ಮಂಡ್ಯದಿಂದ ಸುಮಲತಾ ಅಂಬರೀಶ್ ಸ್ಪರ್ಧೆ : ಯಾರು, ಏನು ಹೇಳಿದರು?
ಲೋಕಸಭಾ ಕ್ಷೇತ್ರ ಉಳಿಸಿಕೊಳ್ಳುವ ಹಠ
ಮಂಡ್ಯ ಕ್ಷೇತ್ರ ಜೆಡಿಎಸ್ ನ ಭದ್ರಕೋಟೆ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದರೆ ಸುಲಭವಾಗಿ ಗೆಲ್ಲಿಸಿಕೊಳ್ಳಬಹುದು ಎಂಬುದು ದೇವೇಗೌಡರ ಕುಟುಂಬದ ತೀರ್ಮಾನವಾಗಿತ್ತು. ಜತೆಗೆ ಸುಮಲತಾ ಅವರು ರಾಜಕೀಯಕ್ಕೆ ಬರಲ್ಲ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಕಾಂಗ್ರೆಸ್ ನಾಯಕರು ಈ ಬಾರಿ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವ ಹಠಕ್ಕೆ ಬಿದ್ದಿದ್ದಾರೆ. ಅದಕ್ಕೆ ಕಾರಣವೂ ಇದೆ.
ಮಂಡ್ಯದಿಂದ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಸ್ಪರ್ಧೆ?
ಬಳಸಿಕೊಳ್ಳದೇ ಹೋದರೆ ಕಾಂಗ್ರೆಸ್ ನಿರ್ನಾಮ
ಈ ಬಾರಿ ಅಂಬರೀಶ್ ಅವರ ಮೇಲಿನ ಅನುಕಂಪ ಮತವಾಗಿ ಪರಿವರ್ತನೆಯಾಗುವ ಎಲ್ಲ ಸಾಧ್ಯತೆಯಿದೆ ಇದನ್ನು ಬಳಸಿಕೊಳ್ಳದೇ ಹೋದರೆ ಮಂಡ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗುವುದಂತು ಖಚಿತ. ಇದನ್ನು ಅರಿತ ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಅಭಿಮಾನಿಗಳು ಸುಮಲತಾ ಅವರ ಮನವೊಲಿಸಿ ಚುನಾವಣಾ ಕಣಕ್ಕಿಳಿಯುವಂತೆ ಮಾಡಿದ್ದಾರೆ.
ಏನಾಗುತ್ತದೆ ಎಂಬುದೇ ಯಕ್ಷ ಪ್ರಶ್ನೆ
ಸುಮಲತಾ ಅವರು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂಬ ಹೇಳಿಕೆ ನೀಡುತ್ತಿದ್ದಂತೆಯೇ ಜೆಡಿಎಸ್ ವಲಯದಲ್ಲಿ ಕಳವಳ ಶುರುವಾಗಿದ್ದು, ಅದು ಮುಂದುವರೆಯುತ್ತಲೇ ಇದೆ. ಇಲ್ಲಿ ಏನಾಗುತ್ತದೆ ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ.