ನಿಖಿಲ್ ಕುಮಾರಸ್ವಾಮಿ ಸೋಲಿಗೆ ಜೆಡಿಎಸ್ ನಾಯಕರೇ ಕಾರಣ!
Recommended Video
ಮಂಡ್ಯ, ಮೇ 24 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿರೀಕ್ಷೆ ಹುಸಿಯಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು 1,25,876 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರು ಪುತ್ರನನ್ನು ಗೆಲ್ಲಿಸಿಕೊಂಡು ಬರುತ್ತಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಬಲವಾಗಿ ನಂಬಿದ್ದರು. ಆದರೆ, ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಜೆಡಿಎಸ್ ನಾಯಕರ ಹೇಳಿಕೆಗಳು ಕಾರಣವಾಗಿದೆ. ಸುಮಲತಾ ಅವರು 703660 ಮತಗಳನ್ನು ಪಡೆದು ಜಯಗಳಿಸಿದರು.
ಲೋಕಸಭಾ ಚುನಾವಣೆ : ದೇವೇಗೌಡರ ಕುಟುಂಬದ ಕಥೆ ಏನು?
ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ನಿಖಿಲ್ ಕುಮಾರಸ್ವಾಮಿ ಅವರಿಗೆ ತೀವ್ರ ಪೈಪೋಟಿ ಎದುರಾಗುವುದಿಲ್ಲ ಎಂಬ ವಿಶ್ವಾಸ ಜೆಡಿಎಸ್ ನಾಯಕರಲ್ಲಿ ಇತ್ತು. ಆದರೆ, ಸುಮಲತಾ ಅಂಬರೀಶ್ ಅವರು ಚುನಾವಣಾ ಕಣಕ್ಕಿಳಿದ ಮೇಲೆ ಮಂಡ್ಯ ಚಿತ್ರಣ ಸಂಪೂರ್ಣ ಬದಲಾಯಿತು.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಸುಮಲತಾ ಅಂಬರೀಶ್ ಅವರ ಸ್ಪರ್ಧೆಯನ್ನು ಸಹಿಸದ ಜೆಡಿಎಸ್ ನಾಯಕರು ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಸುಮಲತಾ ಬೆಂಬಲಕ್ಕೆ ನಿಂತಿದ್ದ ನಟರಾದ ಯಶ್, ದರ್ಶನ್ ಅವರನ್ನು ಟೀಕಿಸಿದರು. ಅಂತಿಮ ದಿನದ ಪ್ರಚಾರದಲ್ಲಿ ಸುಮಲತಾ ಅವರು ಆಡಿದ ಭಾವುಕ ಮಾತುಗಳು, ಸೆರಗೊಡ್ಡಿ ಮತಭಿಕ್ಷೆ ಕೇಳಿದ್ದು, ಚುನಾವಣಾ ಚಿತ್ರಣವನ್ನೇ ಬದಲಾಯಿಸಿತು.....
ಕುಮಾರಸ್ವಾಮಿ ಏನು ಹೇಳಿದ್ದರು?
ಸುಮಲತಾ ಅವರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾಗ ಮಾತನಾಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, 'ಚಿತ್ರನಟಿ ಸುಮಲತಾ ಅವರ ಭಾಷಣವನ್ನು ಗಮನಿಸುತ್ತಿದ್ದೇನೆ. ಅವರ ಮುಖದಲ್ಲಿ ಅಂಬರೀಶ್ ಸಾವಿನ ನೋವಿನ ಛಾಯೆಯೇ ಕಾಣುತ್ತಿಲ್ಲ. ನಾಟಕೀಯವಾದ ಸಿನಿಮಾ ಡೈಲಾಗ್ ಹೊಡೆಯುತ್ತಿದ್ದಾರೆ' ಎಂದು ಹೇಳಿದ್ದರು.
ಎಚ್.ಡಿ.ರೇವಣ್ಣ ಏನು ಹೇಳಿದ್ದರು?
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಸುಮಲತಾ ಚುನಾವಣಾ ಕಣಕ್ಕಿಳಿಯುವ ಕುರಿತು ಟೀಕೆ ಮಾಡಿದ್ದರು. 'ಗಂಡ ಸತ್ತು ಇನ್ನೂ ಆರು ತಿಂಗಳು ಕಳೆದಿಲ್ಲ. ಈಗಾಗಲೇ ಸುಮಲತಾಗೆ ರಾಜಕಾರಣ ಯಾಕೆ ಬೇಕಿತ್ತು?' ಎಂದು ಪ್ರಶ್ನೆ ಮಾಡಿದ್ದರು. ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಸುಮಲತಾ ಅವರು ಗೌಡ್ತಿಯಲ್ಲ
ಮಂಡ್ಯದ ಸಂಸದರಾಗಿದ್ದ ಶಿವರಾಮೇಗೌಡ ಅವರು, 'ಅಂಬರೀಶ್ ಪತ್ನಿ ಸುಮಲತಾ ಮಳವಳ್ಳಿ ಹುಚ್ಚೇಗೌಡರ ಸೊಸೆ ಎಂಬುದರಲ್ಲಿ ಅರ್ಥವಿಲ್ಲ. ಪ್ರಾಮಾಣಿಕರಾಗಿಯೂ ಅವರು ಒಕ್ಕಲಿಗರಾ ಹೇಳಿ. ಅಂಬರೀಶ್ ಶವ ಸಂಸ್ಕಾರಕ್ಕೆ ಸೇರಿದ್ದ ಜನ ಸಾಗರ ಕಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅವರು ಮಂಡ್ಯದ ಗೌಡ್ತಿಯಾಗಲು ಸಾಧ್ಯವಿಲ್ಲ' ಎಂದು ಹೇಳಿದ್ದರು.
ಸುಮಲತಾ ಮಂಡ್ಯದವರಲ್ಲ
ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ಸುಮಲತಾ ಚುನಾವಣಾ ಕಣಕ್ಕಿಳಿದಿದ್ದನ್ನು ಟೀಕಿಸಿದ್ದರು. 'ಸುಮಲತಾ ಎಂದೂ ಕೂಡಾ ಮಂಡ್ಯದ ಗೌಡ್ತಿಯಲ್ಲ. ಅವರ ಮೂಲ ಆಂಧ್ರಪ್ರದೇಶ. ಆಂಧ್ರದವರಾದ ಅವರು ಮಂಡ್ಯದಿಂದ ಹೇಗೆ ಚುನಾವಣೆ ಗೆಲ್ಲಲು ಸಾಧ್ಯ?' ಎಂದು ಪ್ರಶ್ನೆ ಮಾಡಿದ್ದರು.
ಕಳ್ಳೆತ್ತು, ಜೋಡೆತ್ತು ಎಂಬ ವಿವಾದ
ಸುಮಲತಾ ಅವರ ಪರವಾಗ ಪ್ರಚಾರಕ್ಕೆ ಬಂದ ನಟ ದರ್ಶನ್ ಮತ್ತು ಯಶ್ ಅವರನ್ನು ಟೀಕಿಸಲಾಗಿತ್ತು. ಅವರು ಪ್ರಚಾರಕ್ಕೆ ಬಂದ ಜೋಡೆತ್ತುಗಳಲ್ಲ. ಕಳ್ಳೆತ್ತುಗಳು ಎಂದು ಜೆಡಿಎಸ್ ನಾಯಕರು ಟೀಕಿಸಿದ್ದರು.
ಈ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, 'ನಾನು ಮತ ಕೇಳಲು ಹಲವಾರು ಎತ್ತುಗಳು ಬರ್ತಾವೆ ಎಂದು ಹೇಳಿದ್ದೆ. ನಾನ್ಯವತ್ತೂ ಕಳ್ಳೆತ್ತು ಎಂದು ಹೇಳಿಲ್ಲ. ಹೊಲ ಉಳೋ ಎತ್ತುಗಳಲ್ಲ ಶೋಕಿ ಎತ್ತುಗಳು ಎಂದು ಹೇಳಿದ್ದೆ' ಎಂದು ಸ್ಪಷ್ಟಪಡಿಸಿದ್ದರು.