ಪಾಂಡವಪುರದಲ್ಲಿ ಜೆಡಿಎಸ್ ಪ್ರಚಾರಕ್ಕೆ ರೈತಸಂಘದಿಂದ ತಡೆ
ಪಾಂಡವಪುರ, ಮೇ 10: ಬೈಕ್ ಜಾಥಾ ಮೂಲಕ ಚುನಾವಣಾ ಪ್ರಚಾರ ನಡೆಸಲು ಜೆಡಿಎಸ್ ಕಾರ್ಯಕರ್ತರು ಸ್ವರಾಜ್ ಇಂಡಿಯಾ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರ ಸ್ವಗ್ರಾಮ ಕ್ಯಾತನಹಳ್ಳಿಗೆ ಆಗಮಿಸಿದ್ದರು. ಈ ವೇಳೆ ರೈತಸಂಘದ ಕಾರ್ಯಕರ್ತರು ಜೆಡಿಎಸ್ ಪ್ರಚಾರಕ್ಕೆ ಅಡ್ಡಿ ಪಡಿಸಲು ಯತ್ನಿಸಿದ ಘಟನೆ ಬುಧವಾರ ಸಂಜೆ 4 ಗಂಟೆಗೆ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ವೇಳೆ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿ ಪರಸ್ಪರ ಘರ್ಷಣೆಯಾಗುವ ಸಂಭವ ಇತ್ತಾದರೂ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಸಂದರ್ಶನ
ವಿವಿಧ ಗ್ರಾಮಗಳ ಮೂಲಕ ಬೈಕ್ ಜಾಥಾ ನಡೆಸುತ್ತಾ ಜೆಡಿಎಸ್ ಕಾರ್ಯಕರ್ತರು ಕ್ಯಾತನಹಳ್ಳಿ ಗ್ರಾಮಕ್ಕೆ ಆಗಮಿಸಿ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಪ್ರಚಾರ ಭಾಷಣ ಮುಗಿಸಿ ತೆರೆದ ವಾಹನದಿಂದ ಕೆಳಗಿಳಿದು ಸಮೀಪದ ಗಣಪತಿ ದೇವಾಲಯಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಗ್ರಾಮದ ಸರ್ಕಲ್ನಲ್ಲಿನ ಮಹದೇಶ್ವರ ಮೆಡಿಕಲ್ ಸ್ಟೋರ್ ಮುಂಭಾಗ ನಿಂತಿದ್ದ ಕೆಲವು ರೈತ ಸಂಘದ ಕಾರ್ಯಕರ್ತರು, ಇದ್ದಕ್ಕಿದ್ದಂತೆ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಜಯವಾಗಲಿ, ಹಸಿರೇ ಉಸಿರು ಎಂದು ಘೋಷಣೆ ಕೂಗುತ್ತಾ ಹೆಗಲ ಮೇಲಿದ್ದ ಹಸಿರು ಟವಲ್ ತೆಗೆದು ಬೀಸತೊಡಗಿದರು.
ಇದನ್ನು ಕಂಡ ಒಂದೆರಡು ಜೆಡಿಎಸ್ ಕಾರ್ಯಕರ್ತರೂ ಕೂಡ ತಮ್ಮ ಪಕ್ಷದ ಟವಲ್ ಬೀಸತೊಡಗಿದಾಗ ಕುಪಿತರಾದ ರೈತ ಸಂಘದ ಕಾರ್ಯಕರ್ತರು ಮತ್ತಷ್ಟು ಜೋರಾಗಿ ಟವಲ್ ಬೀಸಿ ಘೋಷಣೆ ಕೂಗಿದಾಗ, ಸುಮ್ಮನಿರಿಸಲು ಬಂದ ವ್ಯಕ್ತಿಯೊಬ್ಬರ ಮೇಲೆ ಹರಿಹಾಯ್ದರು.
ಈ ವೇಳೆ ಪರಿಸ್ಥಿತಿ ಬಿಗಡಾಯಿಸುವ ಸಂಭವ ಇತ್ತಾದರೂ ಸ್ಥಳೀಯ ಪೊಲೀಸರ ಮಧ್ಯಪ್ರವೇಶದಿಂದ ಜೆಡಿಎಸ್ ಕಾರ್ಯಕರ್ತರು ಅಲ್ಲಿಂದ ತೆರಳಿದರು.
ವಿಡಿಯೋ : ಪುಟ್ಟಣ್ಣಯ್ಯ ಸಮಾಧಿ ಬಳಿ ಶಪಥಗೈದ ದರ್ಶನ್
ಈ ವೇಳೆ ಮತ್ತೆ ರೈತ ಸಂಘದ ಕಾರ್ಯಕರ್ತರು ತಮಗೆ ಹೆದರಿ ಹೋಗುತ್ತಿದ್ದಾರೆ ಎಂದು ಅಣಕಿಸುತ್ತಾ ಮತ್ತಷ್ಟು ಜೋರಾಗಿ ಟವಲ್ ಬೀಸತೊಡಗಿದರು. ಈ ವೇಳೆ ಪುಟ್ಟಣ್ಣಯ್ಯ ಸಹೋದರ ಕೆ.ಎಸ್.ಪ್ರಕಾಶ್ ಮತ್ತು ಸ್ವರಾಜ್ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ದಯಾನಂದ್ ಸ್ಥಳಕ್ಕೆ ಬಂದರಾದರೂ ತಮ್ಮ ಕಾರ್ಯಕರ್ತರನ್ನು ಸುಮ್ಮನಿರಿಸದೆ ತಾವೂ ತಮ್ಮ ಕಾರ್ಯಕರ್ತರೊಂದಿಗೆ ಸೇರಿ ಘೋಷಣೆ ಕೂಗುತ್ತಿದ್ದುದು ಕಂಡು ಬಂತು.
ದರ್ಶನ್ ಪುಟ್ಟಣ್ಣಯ್ಯ ಪರ ತಮಿಳುನಾಡಿನ ರೈತರ ಪ್ರಚಾರ
ಸೋಲಿನ ಹತಾಶೆಯಿಂದ ರೈತ ಸಂಘದ ಕಾರ್ಯಕರ್ತರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ನಮ್ಮ ಗ್ರಾಮಗಳಲ್ಲಿ ರೈತ ಸಂಘದವರು ಪ್ರಚಾರ ನಡೆಸಿದ ವೇಳೆ ನಾವ್ಯಾರೂ ಈ ರೀತಿ ನಡೆದುಕೊಳ್ಳಲಿಲ್ಲ ಎಂದು ಕೆಲವು ಜೆಡಿಎಸ್ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.