ಮಂಡ್ಯ ಕ್ಷೇತ್ರದ ಟಿಕೆಟ್ಗಾಗಿ ಜೆಡಿಎಸ್ನಲ್ಲಿ ಶುರವಾಯ್ತು ಶಕ್ತಿ ಪ್ರದರ್ಶನ
ಮಂಡ್ಯ, ಆಗಸ್ಟ್ 19 : ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ವೇಳೆ ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ ಹುಟ್ಟುಹಬ್ಬ ಆಚರಣೆ ಜಾತ್ಯತೀತ ಜನತಾದಳದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ಹುಟ್ಟುಹಬ್ಬ ಆಚರಣೆಯೊಂದಿಗೆ ಅಭಿಮಾನಿಗಳು, ಬೆಂಬಲಿಗರು ವಿಜಯಾನಂದ ಮಂಡ್ಯ ವಿಧಾನಸಭಾ ಕ್ಷೇತ್ರ ಪ್ರವೇಶಿಸುವ ಸಂದೇಶ ರವಾನಿಸಿದ್ದರೆ, ಮತ್ತೊಂದು ಬಣದವರು ವರಿಷ್ಠರೆದುರು ಶಕ್ತಿ ಪ್ರದರ್ಶನ ತೋರಿದ್ದಾರೆ.
ನಿತ್ಯ ಸಚಿವ ಕೆ.ವಿ.ಶಂಕರಗೌಡರ ಮೊಮ್ಮಗ ಕೆ.ಎಸ್.ವಿಜಯಾನಂದ ಈಗಾಗಲೇ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದವರು. ಸಂಸ್ಥೆಯ ನಿರ್ಮಾತೃ ಕೆ.ವಿ. ಶಂಕರಗೌಡರ ಕುಟುಂಬದ ಕುಡಿ ಎಂಬ ಕಾರಣಕ್ಕೆ ವಿಜಯಾನಂದ ಅವರನ್ನು ಮಾಜಿ ಶಾಸಕ ಹೆಚ್.ಡಿ. ಚೌಡಯ್ಯನವರು ಪ್ರತಿಷ್ಠಿತ ಪಿಇಟಿ ಸಂಸ್ಥೆಯ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದರು. ಮೂರು ವರ್ಷಗಳಿಂದ ವಿಜಯಾನಂದ ಸಂಸ್ಥೆಯ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಕೆಆರ್ಎಸ್ ಡ್ಯಾಂ ಮೇಲೆ ಸಂಸದೆ ಸುಮಲತಾ ಫೋಟೋ ಶೂಟ್, ಸಾರ್ವಜನಿಕರು ಕಿಡಿ
ಇದೀಗ ಅವರನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಲು ಅಭಿಮಾನಿಗಳು, ಬೆಂಬಲಿಗರು ನಿರ್ಧರಿಸಿದ್ದು, ಹುಟ್ಟುಹಬ್ಬದ ಜವಾಬ್ದಾರಿಯನ್ನು ಹೆಗಲಮೇಲೆ ಹೊತ್ತು ನಡೆಸಿದ್ದಾರೆ. ಇಲ್ಲಿಂದ ಮುಂದೆ ಚುನಾವಣಾ ರಾಜಕೀಯ ಚಟುವಟಿಕೆಗಳನ್ನು ಚುರುಕುಗೊಳಿಸಲು ಟೊಂಕಕಟ್ಟಿ ನಿಂತಿದ್ದಾರೆ. ಇದು ಮಂಡ್ಯದಲ್ಲಿ ರಾಜಕೀಯವಾಗಿ ಮಹತ್ವವನ್ನು ಪಡೆದುಕೊಂಡಿದೆ.
ಕೆ.ವಿ.ಶಂಕರಗೌಡರ ಮೊಮ್ಮಗನಿಂದ ಟಿಕೆಟ್ಗೆ ಪ್ರಯತ್ನ
ಕೆ.ವಿ.ಶಂಕರಗೌಡರ ಕುಟುಂಬದ ಕುಡಿ ರಾಜಕೀಯ ನೇಪಥ್ಯಕ್ಕೆ ಸರಿಯುವುದು ಬೇಡ. ಆ ಕುಡಿಯನ್ನು ರಾಜಕಾರಣದಲ್ಲಿ ಬೆಳೆಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಹಲವಾರು ಮಂದಿ ವಿಜಯಾನಂದ ಬೆನ್ನಿಗೆ ನಿಂತಿದ್ದಾರೆ. ಮಂಡ್ಯ ಕ್ಷೇತ್ರದಿಂದ ವಿಧಾನಸಭೆ ಪ್ರವೇಶ ಮಾಡಿಸುವುದಕ್ಕೆ ಹೆಗಲು ಕೊಟ್ಟಿದ್ದಾರೆ. ಅದಕ್ಕಾಗಿ ವಿಜಯಾನಂದರಿಗೆ ಹುಟ್ಟುಹಬ್ಬ ಆಚರಣೆಯ ಮೂಲಕ ರಾಜಕೀಯ ಶಕ್ತಿ ತುಂಬುವುದಕ್ಕೆ ಶ್ರಮಿಸುತ್ತಿದ್ದಾರೆ.
ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಹುಟ್ಟುಹಬ್ಬಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದೂರವಾಣಿ ಮೂಲಕ ಶುಭ ಹಾರೈಸಿದರೆ, ಶಾಸಕ ಎಂ.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಹೆಚ್.ಎಸ್.ಮಂಜು, ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಬಿಜೆಪಿ ಮುಖಂಡ ಹೆಚ್.ಆರ್.ಅರವಿಂದ್ ಸೇರಿದಂತೆ ಪಿಇಟಿ ಸಮೂಹ ಶಿಕ್ಷಣ ಸಂಸ್ಥೆಯ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಾಶಯ ತಿಳಿಸಿದರು.
ಯೋಗೇಶ್ ಶಕ್ತಿ ಪ್ರದರ್ಶನ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ತಮಗೇ ಟಿಕೆಟ್ ನೀಡುವಂತೆ ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ವರಿಷ್ಠರೆದುರು ಗುರುವಾರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಹನಕೆರೆಯಿಂದ ಸುಮಾರು 70-80 ಕಾರುಗಳಲ್ಲಿ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಿವಾಸಕ್ಕೆ ಬೆಳಗ್ಗೆಯೇ ತೆರಳಿದ್ದರು ಎನ್ನಲಾಗಿದೆ. ಶಾಸಕ ಎಂ.ಶ್ರೀನಿವಾಸ್ ಅಳಿಯ ಆಗಿರುವ ಎಚ್.ಎನ್.ಯೋಗೇಶ್ ತಮಗೇ ಜೆಡಿಎಸ್ ಟಿಕೆಟ್ ಘೋಷಣೆ ಮಾಡಬೇಕೆಂಬ ಒತ್ತಡವನ್ನು ವರಿಷ್ಠರ ಮೇಲೆ ಹಾಕುವುದರ ಜೊತೆಯಲ್ಲೇ ತಮಗಿರುವ ಬೆಂಬಲದ ಶಕ್ತಿಯನ್ನು ಪ್ರದರ್ಶಿಸಲು ತೆರಳಿದ್ದರು.
ಎಚ್ಡಿಕೆಗೆ ತಿಳಿಸದೇ ಭೇಟಿಗೆ ಪ್ರಯತ್ನ
ಎಚ್.ಎನ್.ಯೋಗೇಶ್ ಹಾಗೂ ಅವರ ಬೆಂಬಲಿಗರು ಆಗಮಿಸುವ ಪೂರ್ವ ಮಾಹಿತಿ ಎಚ್.ಡಿ.ಕುಮಾರಸ್ವಾಮಿಗೆ ತಿಳಿದಿರಲಿಲ್ಲ. ಆ ಮಾಹಿತಿಯನ್ನು ಯೋಗೇಶ್ ಕೂಡ ಅವರಿಗೆ ತಿಳಿಸಿರಲಿಲ್ಲ. ಹಾಗಾಗಿ ಬೆಳಗ್ಗೆ 6.30ರ ಸಮಯಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಕಾರ್ಯನಿಮಿತ್ತ ಚಿತ್ರದುರ್ಗಕ್ಕೆ ತೆರಳಿದ್ದರು. ಮಂಡ್ಯ ತೆರಳಿದ್ದವರು 8.30ರ ಸಮಯಕ್ಕೆ ಎಚ್ಡಿಕೆ ನಿವಾಸ ತಲುಪಿದ್ದರಿಂದ ಭೇಟಿ ಸಾಧ್ಯವಾಗಲಿಲ್ಲ. ಕೊನೆಗೆ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿಯಾಗುವ ಪ್ರಯತ್ನ ನಡೆಸಿದರೂ ಅದೂ ಕೂಡ ಲ ನೀಡದೆ ವಾಪಸಾದರು. ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಸಾಧ್ಯವಾಗದೆ ವಾಪಸಾದ ಹಲವರು ವಿಜಯಾನಂದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದ್ದು ಮತ್ತೊಂದು ವಿಶೇಷವಾಗಿತ್ತು.
ಯೋಗೇಶ್ವ ವಿರುದ್ಧ ಅಸಮಧಾನ
ಕೆ.ಎಸ್.ವಿಜಯಾನಂದ ಹುಟ್ಟುಹಬ್ಬದ ದಿನದಂದೇ ಎಚ್.ಎನ್.ಯೋಗೇಶ್ ಮತ್ತು ಬೆಂಬಲಿಗರು ವರಿಷ್ಠರ ಭೇಟಿಗೆ ತೆರಳಿದ್ದು ಹಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಚುನಾವಣೆ ಎಂದ ಮೇಲೆ ಪೈಪೋಟಿ ಸಾಮಾನ್ಯ. ಅದನ್ನು ಆರೋಗ್ಯಕರವಾಗಿ ಎದುರಿಸಬೇಕು. ಹುಟ್ಟುಹಬ್ಬದ ದಿನವೇ ದಳ ನಾಯಕರ ಪೈಪೋಟಿಗೆ ತೆರಳಿದ್ದರಿಂದ ಗೊಂದಲ ಸೃಷ್ಟಿಸಿದಂತಾಗಿದೆ ಎಂಬ ಮಾತುಗಳು ಜೆಡಿಎಸ್ ವಲಯದಿಂದಲೇ ಕೇಳಿಬರುತ್ತಿದ್ದವು.