ಪಶ್ಚಿಮವಾಹಿನಿಯಲ್ಲಿ ಜಯಲಲಿತಾಗೆ ಶಾಸ್ತ್ರೋಕ್ತ ಅಂತ್ಯಕ್ರಿಯೆ
ಮಂಡ್ಯ, ಡಿಸೆಂಬರ್ 14: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಅಂತ್ಯ ಸಂಸ್ಕಾರ ವಿಧಿಗಳನ್ನು ಕಾವೇರಿ ನದಿ ತೀರ ಪಶ್ಚಿಮವಾಹಿನಿಯ ಶ್ರೀರಂಗಪಟ್ಟಣದಲ್ಲಿ ಮಂಗಳವಾರ ನೆರವೇರಿಸಲಾಯಿತು. ಶ್ರೀವೈಷ್ಣವ ಸಂಪ್ರದಾಯದ ಪ್ರಕಾರ ಜಯಲಲಿತಾ ಅವರ ದೇಹವನ್ನು ದಹನ ಮಾಡದೆ, ಹೂಳಿದ್ದರಿಂದ ಆ ಆತ್ಮಕ್ಕೆ ಮೋಕ್ಷ ಸಿಗುವ ಸಾಧ್ಯತೆ ಇಲ್ಲ. ಆದ್ದರಿಂದ ದರ್ಭೆ ಸಂಸ್ಕಾರ ಮಾಡಲಾಗಿದೆ ಎಂದು ಆಕೆ ಕುಟುಂಬದವರು ತಿಳಿಸಿದರು.
ಪ್ರಧಾನ ಅರ್ಚಕ ರಂಗನಾಥ್ ಅಯ್ಯಂಗಾರ್ ಸಂಸ್ಕಾರವನ್ನು ವಿಧಿವತ್ತಾಗಿ ನೆರವೇರಿಸಿದರು. ಜಯಲಲಿತಾ ಅವರನ್ನು ಹೋಲುವ ಗೊಂಬೆಯೊಂದನ್ನು ಮಾಡಿ, ಅದಕ್ಕೆ ದಹನ ಕ್ರಿಯೆ ಮಾಡಿದರು. ಇದರಿಂದ ಜಯಲಲಿತಾ ಅವರು ಮೋಕ್ಷ ಪಡೆಯಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು. ಇನ್ನೂ ಐದು ದಿನಗಳ ಕಾಲ ಇತರ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಲಾಗುತ್ತದೆ ಎಂದು ಹೇಳಿದರು.[ಜಯಲಲಿತಾ ಆತ್ಮ ಅಂತರ್ಪಿಶಾಚಿಯಾಗಿ ಅಲೆದಾಡತ್ತೆ!]
ಜಯಲಲಿತಾ ಅವರ ಮಲಸಹೋದರ ವರದರಾಜು ಎಲ್ಲ ಕಾರ್ಯಗಳನ್ನು ನೆರವೇರಿಸಿದರು. ಜಯಲಲಿತಾ ನಂಬಿಕೆಗಳನ್ನು ಆ ಪಕ್ಷದವರು ಗೌರವಿಸಬೇಕಿತ್ತು. ಆಕೆ ಆಸ್ತಿಕರು, ದೇವಸ್ಥಾನಗಳಿಗೆ ಹೋಗುತ್ತಿದ್ದರು. ಅವರ ಅಂತ್ಯಸಂಸ್ಕಾರ ಮಾಡಲು ನಮಗೆ ಅವಕಾಶ ನೀಡದೆ, ಅದು ಹೇಗೆ ದೇಹವನ್ನು ಹೂಳುವ ನಿರ್ಧಾರ ತೆಗೆದುಕೊಂಡರು ಎಂದು ಬೇಸರ ವ್ಯಕ್ತಪಡಿಸಿದರು.
ಡಿಸೆಂಬರ್ 5ರಂದು ಮೃತಪಟ್ಟಿದ್ದ ಜಯಲಲಿತಾ ಅವರ ಅಂತ್ಯಕ್ರಿಯೆಯನ್ನು ಚೆನ್ನೈನ ಮರೀನಾ ಬೀಚ್ ನಲ್ಲಿರುವ ಎಂಜಿಆರ್ ಸಮಾಧಿ ಪಕ್ಕದಲ್ಲೇ ನೆರವೇರಿಸಲಾಗಿತ್ತು. ಸ್ಮಾರಕ ನಿರ್ಮಾಣದ ಉದ್ದೇಶದಿಂದ ಜಯಲಲಿತಾ ಅವರ ದೇಹವನ್ನು ಹೂಳಲಾಗಿತ್ತು.
ದರ್ಭೆ ಸಂಸ್ಕಾರ ಎಂದರೇನು?
ಅಂತಿಮ ಸಂಸ್ಕಾರಗಳನ್ನು ಮಾಡಲಿಕ್ಕೆ ಆಗದ ಸ್ಥಿತಿಯಲ್ಲಿ ಮೃತ ವ್ಯಕ್ತಿಯ ಶರೀರವಿದ್ದಲ್ಲಿ, ಮೃತಪಟ್ಟ ನಂತರ ದೇಹವೇ ಸಿಗದಿದ್ದಲ್ಲಿ ಉದಾಹರಣೆಗೆ ನೀರಿನಲ್ಲಿ ದೇಹ ಕೊಚ್ಚಿಕೊಂಡು ಹೋದಾಗ, ಸಜೀವವಾಗಿ ದಹನವಾದಾಗ ಅಥವಾ ಇನ್ನ್ಯಾವುದೇ ಕಾರಣದಿಂದ ಶರೀರ ಸಿಗದಿದ್ದಾಗ ಈ ರೀತಿಯ ಸಂಸ್ಕಾರ ಮಾಡುವುದು ಪದ್ಧತಿ. ಆತ್ಮವನ್ನು ಆವಾಹನೆ ಮಾಡಿ, ಆ ನಂತರ ದೇಹಕ್ಕೆ ಮಾಡಬೇಕಾದ ಎಲ್ಲ ಸಂಸ್ಕಾರ ನೆರವೇರಿಸುವ ವಿಧಾನಕ್ಕೆ ದರ್ಭೆ ಸಂಸ್ಕಾರ ಎನ್ನುತ್ತಾರೆ.
ಪಿತೃ ಲೋಕಕ್ಕೆ ಪ್ರಯಾಣ
"ಸತ್ತ ನಂತರ ಶರೀರ ದೇವರಿಗೆ ಅರ್ಪಿಸುವಂಥದ್ದು. ಅಗ್ನಿ ಮೂಲಕ ದೇವರಿಗೆ ಅರ್ಪಿಸುತ್ತಾರೆ. ಸಾವಿನ ನಂತರ ಆ ಆತ್ಮವು ಒಂದು ವರ್ಷಗಳ ಪ್ರಯಾಣ ಮಾಡಿ, ಪಿತೃ ಲೋಕವನ್ನು ತಲುಪುತ್ತದೆ. ಅದು ಸಾಗುವ ಹಾದಿಯಲ್ಲಿ ಎದುರಿಸುವ ಸವಾಲುಗಳನ್ನು ದಾಟಲು ಕೆಲ ದಾನಗಳನ್ನು ಮಾಡಲಾಗುತ್ತದೆ.
ನಂಬಿಕೆ ಏನಿದ್ದರೂ ಪಿತೃದೇವತೆ ಸಾಲಿಗೆ
"ಜಯಲಲಿತಾ ಅವರು ಬ್ರಾಹ್ಮಣರು. ಅವರ ಪಕ್ಷದವರು ಹೇಳುವಂತೆ, ಜಯಲಲಿತಾ ನಂಬಿಕೆ ಏನೇ ಇರಬಹುದು. ಆದರೆ ಅವರ ಕುಟುಂಬದವರ ಪಾಲಿಗೆ ಅವರು ಪಿತೃ ದೇವತೆಗಳ ಸಾಲಿಗೆ ಸೇರಿಕೊಂಡು ಬಿಡುತ್ತಾರೆ. ಆದ್ದರಿಂದ ಅಂತ್ಯಸಂಸ್ಕಾರವನ್ನು ವಿಧಿವಿಧಾನದ ಪ್ರಕಾರ ಮಾಡಲೇಬೇಕು. ಈಗ ಅವರ ಕುಟುಂಬ ಅದನ್ನೇ ಮಾಡುತ್ತಿದೆ" ಎಂದು ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.
ಪಿತೃ ಶಾಪ
ಅಂತ್ಯ ಸಂಸ್ಕಾರವನ್ನು ಸರಿಯಾಗಿ ಮಾಡದಿದ್ದಲ್ಲಿ ಆ ಕುಟುಂಬದವರಿಗೆ ಪಿತೃ ಶಾಪ ತಗುಲುತ್ತದೆ. ಆದ್ದರಿಂದ ಆ ಕುಟುಂಬದ ಸದಸ್ಯರು ಧಾರ್ಮಿಕ ವಿಧಿವಿಧಾನದ ಪ್ರಕಾರ ಸಂಸ್ಕಾರವನ್ನು ನೆರವೇರಿಸಬೇಕು ಎಂದು ವಿಠ್ಠಲ ಭಟ್ ಅವರು ಹೇಳಿದರು.