Srirangapatna Jamia Masjid Row: ಮಂಡ್ಯ; ಜಾಮಿಯಾ ಮಸೀದಿಯಲ್ಲಿ ಆಂಜನೇಯ ದೇವಾಲಯವಿದೆ
ಮಂಡ್ಯ, ಮೇ 16; ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ಆಂಜನೇಯ ದೇವಾಲಯವಿದ್ದು ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವಥಿಗೆ ಮನವಿ ಸಲ್ಲಿಸಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿಗಳಿಗೆ ನರೇಂದ್ರ ಮೋದಿ ವಿಚಾರ ಮಂಚ್ನ ಕಾರ್ಯಕರ್ತರು ಮನವಿ ಸಲ್ಲಿಸಿದ್ದು, ಟಿಪ್ಪುವಿನಿಂದ ನಿರ್ಮಾಣವಾಗಿರುವ ಮಸೀದಿಯಲ್ಲಿ ಮೂಲ ಹಿಂದೂ ದೇವರ ಮೂರ್ತಿಗಳು ಹಾಗೂ ಕೆತ್ತನೆಗಳಿದ್ದು, ಮಸೀದಿಯಲ್ಲಿರುವ ಆಂಜನೇಯಸ್ವಾಮಿ ವಿಗ್ರಹಕ್ಕೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಜಾಮಿಯಾ ಮಸೀದಿ ಮೂಲತಃ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಾಗಿತ್ತು. ಮಸೀದಿಯನ್ನಾಗಿ ಬದಲಾಯಿಸಲಾಗಿದೆ ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹೇಳಿದ್ದಾರೆ. ಇದು ಆಂಜನೇಯ ದೇವಸ್ಥಾನ ಎನ್ನುವುದಕ್ಕೆ ಸಾಕಷ್ಟು ಕುರುಹುಗಳಿದ್ದು ಅವುಗಳನ್ನು ಪರಿಶೀಲಿಸುವಂತೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಟಿಪ್ಪು ಸುಲ್ತಾನ್ ಪರ್ಷಿಯಾ ರಾಜ ಖಲೀಫನಿಗೆ ಬರೆದಿರುವ ಪತ್ರಗಳು ಈ ವಾದಕ್ಕೆ ಪುಷ್ಠಿ ನೀಡುತ್ತವೆ. ಲೂಯಿಸ್ ರೈಸ್ ಬರೆದಿರುವ ಮೈಸೂರು ಗೆಜೆಟಿಯರ್, ಅರಮನೆ ನಡಾವಳಿಗಳು, ತಾರಿಕ್ ಎ-ಟಿಪ್ಪು ಹೇದರ್ ಇ ನಿಶಾನಿಯಲ್ಲೂ ಇದಕ್ಕೆ ಸಾಕ್ಷಿ ಇದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪುರಾತತ್ವ ಇಲಾಖೆ ದಾಖಲೆಗಳನ್ನು ಪರಿಶೀಲಿಸಿ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಮಸೀದಿ ಆವರಣದಲ್ಲಿರುವ ಕೊಳದಲ್ಲಿ ಸ್ನಾನ ಮಾಡಲು ಮಸೀದಿಯಲ್ಲಿ ಇದೆ ಎನ್ನಲಾದ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ವಾರಣಾಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ ನಡೆಯುತ್ತಿರುವ ಬೆನ್ನಲ್ಲೇ ಕರ್ನಾಟಕದ ಶ್ರೀರಂಗಪಟ್ಟಣದಲ್ಲೂ ಮಸೀದಿ ಕುರಿತು ದಾಖಲೆ ಪರಿಶೀಲನೆ ನಡೆಸುವಂತೆ ಆಗ್ರಹಿಸಲಾಗುತ್ತಿದೆ.
ಪೇಜಾವರ ಶ್ರೀಗಳ ಹೇಳಿಕೆ; "ದೇವಾಲಯಗಳನ್ನು ಖರೀದಿಸಿ ಮಸೀದಿಯನ್ನಾಗಿ ಪರಿವರ್ತಿಸಿದ್ದರೆ ಆಕ್ಷೇಪವಿಲ್ಲ. ಅತಿಕ್ರಮಣ ಮಾಡಿ ದೇವಾಲಯಗಳನ್ನು ಮಸೀದಿಗಳನ್ನಾಗಿ ಬದಲಾಯಿಸಿದ್ದರೆ ವಶಕ್ಕೆ ಪಡೆದು ಹಿಂದೂ ಸಮುದಾಯಕ್ಕೆ ಹಿಂತಿರುಗಿಸಬೇಕು" ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಜಾಮಿಯಾ ಮಸೀದಿಯಲ್ಲಿ ಹಿಂದೂ ದೇಗುಲವಾಗಿದ್ದು ಅಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಋಷಿಕುಮಾರ ಸ್ವಾಮೀಜಿ ಒತ್ತಾಯಿಸಿದ್ದರು. ಹಲವು ಬಾರಿ ಈ ವಿಚಾರದ ಬಗ್ಗೆ ಮಾತನಾಡಿರುವ ಅವರು ಜಾಮೀಯಾ ಮಸೀದಿಯಲ್ಲಿ ಆಂಜನೇಯ ದೇವಸ್ಥಾನ ಇರುವ ಬಗ್ಗೆ ಕುರುಹುಗಳು ಇದೆ ಎಂದು ಹೇಳಿದ್ದರು.
ಮುತಾಲಿಕ್ ಭೇಟಿ ಬೇಡ; ಜಾಮಿಯಾ ಮಸೀದಿ ವಿಚಾರದಲ್ಲಿ ಹೇಳಿಕೆ ನೀಡುತ್ತಿರುವ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಮತ್ತು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಂಡ್ಯ ಜಿಲ್ಲೆ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಪ್ರಗತಿಪರ ಸಂಘಟನೆಗಳು ಒತ್ತಾಯಿಸಿವೆ. ಈ ಕುರಿತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ.
ಸಾಮರಸ್ಯಕ್ಕೆ ಹೆಸರಾಗಿರುವ ಮಂಡ್ಯ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಆದರೆ ಋಷಿಕುಮಾರ ಸ್ವಾಮೀಜಿ, ಪ್ರಮೋದ್ ಮುತಾಲಿಕ್ ನೀಡುತ್ತಿರುವ ಹೇಳಿಕೆ ಸಮಾಜದ ಶಾಂತಿ-ಸೌಹಾರ್ದತೆಗೆ ಮಾರಕವಾಗಿದೆ ಎಂದು ಪ್ರಗತಿಪರ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ.