ಮಂಡ್ಯದಲ್ಲಿ ಮತಾಂತರದ ವಿವಾದ ಭುಗಿಲು, ಸತ್ಯ ಬಯಲಾಗಲಿ
ಮಂಡ್ಯ, ಜೂನ್ 8: ಮಂಡ್ಯದಲ್ಲಿ ಮತಾಂತರದ ವಿರುದ್ಧ ಕೂಗೆದ್ದಿದೆ. ಪಾಂಡವಪುರದ ಶ್ರೀನಿವಾಸ್ ಎಂಬುವರ ಮಗ ಚಂದನ್ ನನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಮತ್ತು ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ಮುಸ್ಲಿಂ ಮುಖಂಡ ಯೂಸೂಫ್ ಎಂಬುವವರು ತಮ ಮಗಳಿಗೆ ಮದುವೆ ಮಾಡುವ ಸಲುವಾಗಿಯೇ ಚಂದನ್ ಗೆ ಮುಂಜಿ ಮಾಡಿ, ಇಸ್ಲಾಂಗೆ ಮತಾಂತರ ಮಾಡಿದ್ದಾರೆ. ಹತ್ತೊಂಬತ್ತು ವರ್ಷದ ನನ್ನ ಮಗನಿಗೆ ಮಾಡಲು ಹೊರಟಿರುವ ಬಲವಂತದ ಮದುವೆಯನ್ನು ತಡೆಯಬೇಕು ಎಂದು ಚಂದನ್ ನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.[ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಯುವಕ]
ಈಗ ಈ ಪ್ರಕರಣದಲ್ಲಿ ಹಿಂದೂಪರ ಸಂಘಟನೆಗಳು ಪ್ರವೇಶಿಸಿದ್ದು, ಹಿಂದೂ ಯುವಕರನ್ನು ಜಿಹಾದ್ ಗೆ ಬಳಸಿಕೊಳ್ಳಲು ಮಾಡುತ್ತಿರುವ ಕೆಲಸ ಇದು ಎಂದು ಆರೋಪ ಮಾಡಿವೆ. ಆದರೆ ಇಡೀ ಪ್ರಕರಣ ಸಂಕೀರ್ಣವಾಗಿದ್ದು, ಸತ್ಯ ಹೊರಬರಬೇಕಿದೆ. ಪಾಂಡವಪುರ ಪೊಲೀಸರು ದೂರಿನ ಸತ್ಯಾಸತ್ಯತೆ ಪರಿಶೀಲಿಸಿ, ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕಾಪಾಡಬೇಕಿದೆ.[ಮತಾಂತರಕ್ಕಾಗಿ ಕ್ರಿಶ್ಚಿಯನ್ ಸಂಘಟನೆಗಳಿಂದ ಎನ್ ಜಿಒಗಳಿಗೆ 17 ಸಾವಿರ ಕೋಟಿ]
ಈ ಹಿಂದೆ ಮಂಡ್ಯದಲ್ಲೇ ನಡೆದ ಪ್ರಕರಣವೊಂದರಲ್ಲಿ ಎರಡು ಕೋಮಿನ ಹುಡುಗ-ಹುಡುಗಿ ಮದುವೆಯಾಗಲು ಕುಟುಂಬಗಳು ಒಪ್ಪಿಕೊಂಡಿದ್ದರೂ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.