ಬಿಜೆಪಿ ಸೇರ್ತಾರಾ ಪಕ್ಷೇತರ ಸಂಸದೆ ಸುಮಲತಾ?
Recommended Video
ಮಂಡ್ಯ, ಅಕ್ಟೋಬರ್ 9: ಮಂಡ್ಯದ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಭಾಗಿಯಾಗಲಿರುವುದು ತೀವ್ರ ಕುತೂಹಲ ಮೂಡಿಸಿದೆ.
ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸಂಸದರಾದ ನಂತರ ಬಿಜೆಪಿಗರ ಜತೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದರು.
ಮಂಡ್ಯದಲ್ಲಿ ಸುಮಲತಾ ಅವರನ್ನು ಕಣಕ್ಕಿಳಿಸಿದ್ದು ಯಾರು? ಅಂದಿನ ಸತ್ಯ ಈಗ ಬಹಿರಂಗ!
ಸುಮಲತಾ ಅಂಬರೀಶ್ ಬಿಜೆಪಿ ಸೇರುತ್ತಿರುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿತ್ತು. ಇಂದು ಬಿಜೆಪಿ ಕಚೇರಿಯಲ್ಲಿಯೇ ಸಭೆ ಕರೆದಿರುವುದರಿಂದ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.
ಸುಮಲತಾ ನಡೆ ಬಗ್ಗೆ ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಚುನಾವಣೆ ವೇಳೆ ಸ್ವಾಭಿಮಾನದ ಹೆಸರಿನಲ್ಲಿ ಪ್ರಚಾರದಲ್ಲಿ ಭಾಗಿಯಾಗಿ ಸುಮಲತಾ ಗೆಲುವಿಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ದುಡಿದಿದ್ದರು. ಇದೀಗ ಸುಮಲತಾ ಅವರ ನಡೆ ಆಶ್ಚರ್ಯ ಮೂಡಿಸಿದೆ.
ಮೊದಲ ಬಾರಿಗೆ ಬಿಜೆಪಿ ಸಭೆಯಲ್ಲಿ ಭಾಗಿಯಾಗಲಿರುವ ಸುಮಲತಾ
ಮೊದಲ ಬಾರಿಗೆ ಬಿಜೆಪಿ ಸಭೆಯಲ್ಲಿ ಸುಮಲತಾ ಅಂಬರೀಶ್ ಭಾಗಿಯಾಗಲಿರುವುದು ತೀವ್ರ ಕುತೂಹಲ ಹುಟ್ಟುಹಾಕಿದೆ. ಚುನಾವಣೆ ಸಂದರ್ಭದಲ್ಲಿಯೇ ಒಂದೊಮ್ಮೆ ಗೆಲುವುದು ಸಾಧಿಸಿದರೆ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು ಅಷ್ಟೇ ಅಲ್ಲದೆ ಗೆದ್ದ ಮೇಲೂ ಕೂಡ ಬಿಎಸ್ ಯಡಿಯೂರಪ್ಪಪ ಅವರನ್ನು ಸುಮಲತಾ ಭೇಟಿ ಮಾಡಿದ್ದರು. ಮೈತ್ರಿ ಸರ್ಕಾರದಲ್ಲೇ ಬಿರುಕು ಎದ್ದಿದ್ದ ಪರಿಣಾಮ ಯಾವ ಪಕ್ಷಕ್ಕೆ ಸೇರ್ಪಡೆಯಾಗುವುದು ಎನ್ನುವ ಗೊಂದಲದಲ್ಲಿದ್ದಂತೆ ಕಾಣುತ್ತಿತ್ತು. ಇದೀಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಬಿಜೆಪಿ ಕಡೆಗೆ ಒಲವು ತೋರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಮಂಡ್ಯದಲ್ಲಿ ಕಚೇರಿ ತೆರೆದ ಸುಮಲತಾ, ಕಚೇರಿ ವಿಶೇಷತೆ ಏನು?
ಬಿಜೆಪಿ ಸುಮಲತಾ ಬಂದರೆ ಸ್ವಾಗತ
ಒಂದೊಮ್ಮೆ ಸುಮಲತಾ ಅಂಬರೀಶ್ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ, ಅವರ ಹಿಂದೆ ಬಲ ಇದೆ, ಉತ್ತಮ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆಯೂ ಇದೆ, ಅವರು ಬಂದರೆ ಬಿಜೆಪಿಗೆ ಒಂದು ದೊಡ್ಡ ಶಕ್ತಿಯಾಗುತ್ತದೆ ಎಂದು ಮಂಡ್ಯದ ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ ಹೇಳಿದ್ದಾರೆ.
ಕಾಂಗ್ರೆಸ್ ಅಸಮಾಧಾನ
ಸುಮಲತಾ ಅಂಬರೀಶ್ ವಿರುದ್ಧ ಕಾಂಗ್ರೆಸ್ ಅಸಮಾಧಾನ ಹೊರಹಾಕಿದೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಸೂಚಿಸಿದ್ದರು. ಆದರೆ ಇದೀಗ ಬಿಜೆಪಿಗೆ ಸೇರುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡಿದ್ದ ಸಚ್ಚಿದಾನಂದ ಕೂಡ ಸಭೆಯಲ್ಲಿ ಭಾಗಿ
ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡಿದ್ದ ಇಂಡುವಾಳು ಸಚ್ಚಿದಾನಂದ ಕೂಡ ಬಿಜೆಪಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ, ಅವರೂ ಕೂಡ ಬಿಜೆಪಿ ಸೇರಬಹುದೇ ಎನ್ನುವ ಕುತೂಹಲವೆದ್ದಿದೆ. ಚುನಾವಣೆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಪರಾಜಿತ ಕಾಂಗ್ರೆಸ್ ನಾಯಕರು ಸುಮಲತಾ ಪರ ಕೆಲಸ ಮಾಡಿದ್ದಾರೆಂಬ ಸತ್ಯವನ್ನು ಬಿಚ್ಚಿಟ್ಟಿದ್ದರು. ಇದೀಗ ಮತ್ತೆ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.