ಮಂಡ್ಯ: ಕಾಂಗ್ರೆಸ್ ನಿರ್ಧಾರದಿಂದ ಸುಮಲತಾ ಅಂಬರೀಶ್ ಗೆ ಭ್ರಮನಿರಸನ?
Recommended Video
ದಿ.ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರದಲ್ಲಿ ಭಾರೀ ಚರ್ಚೆ ನಡೆಯುತ್ತಿತ್ತು. ಚಿತ್ರರಂಗದ ಹಿನ್ನಲೆಯಿಂದ ಸುಮಲತಾ ಬಂದಿರುವುದರಿಂದ, ಸಿನಿಮಾ ರಂಗದಲ್ಲಿನ ಅವರ ಹಿತೈಷಿಗಳು, ಅವರು ಪಕ್ಷೇತರರಾಗಿ ಸ್ಪರ್ಧಿಸಲಿ ಎಂದು ಒತ್ತಾಯಿಸಿದ್ದರು.
ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಸುಮಲತಾ, ನಾನು ಚುನಾವಣೆಗೆ ಸ್ಪರ್ಧಿಸುವುದಾದರೆ ಅದು ಕಾಂಗ್ರೆಸ್ಸಿನಿಂದ ಎನ್ನುವ ಹೇಳಿಕೆಯನ್ನು ನೀಡಿದ್ದರು. ಸುಮಲತಾ ಅಕ್ಕ ಸ್ಪರ್ಧಿಸುವುದಾದರೆ, ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊರುವುದಾಗಿ ನಟ ದರ್ಶನ್ ಹೇಳಿದ್ದರು.
ಸುಮಲತಾ ಅವರನ್ನು ಮುಂದಿಟ್ಟುಕೊಂಡು, ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕ್ಷೇತ್ರವನ್ನು ಯಾವ ಕಾರಣಕ್ಕೂ ಜೆಡಿಎಸ್ಸಿಗೆ ಬಿಟ್ಟುಕೊಡಬಾರದು ಎಂದು ಹಠ ಹಿಡಿದಿದ್ದರು. ಈ ಎಲ್ಲಾ ಬೆಳವಣಿಗೆಗಳು ದೇವೇಗೌಡ್ರನ್ನು ಚಿಂತೆಗೀಡಾಗುವಂತೆ ಮಾಡಿತ್ತು.
ಜೆಡಿಎಸ್ಗೆ 7 ಸೀಟು ಕೊಡಲು ಕಾಂಗ್ರೆಸ್ ತಂತ್ರ? ಸಿದ್ದು-ಗೌಡರ ಸಭೆ
ಆದರೆ, ಸೋಮವಾರ (ಫೆ 18) ಖಾಸಗಿ ಹೋಟೆಲ್ ನಲ್ಲಿ ನಡೆದ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ನಡೆದ ಚರ್ಚೆ, ರಾಜ್ಯ ಕಾಂಗ್ರೆಸ್ ಮುಖಂಡರ ನಿರ್ಧಾರ, ಮಂಡ್ಯ ಜಿಲ್ಲೆಯ ಅಸಂಖ್ಯಾತ ಕಾರ್ಯಕರ್ತರನ್ನು ಭ್ರಮನಿರಸನಗೊಳಿಸಿತೇ, ಮತ್ತು ಸುಮಲತಾ ಪರವಾಗಿ ರಾಜ್ಯ ಕಾಂಗ್ರೆಸ್ ನಿಲ್ಲಲಿಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ.
ಅಭಿಮಾನಿಗಳು ಒತ್ತಡ ಹೇರುತ್ತಿದ್ದು, ಅವರ ಆಸೆ ಸೋಲಬಾರದು
ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಅಭಿಮಾನಿಗಳು ಒತ್ತಡ ಹೇರುತ್ತಿದ್ದು, ಅವರ ಆಸೆ ಸೋಲಬಾರದು ಎಂದು ಸುಮಲತಾ ಅಂಬರೀಶ್ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದರು. ಜೊತೆಗೆ, ನಾನು ಚುನಾವಣೆಗೆ ಸ್ಪರ್ಧಿಸುವುದಾದರೆ, ಕಾಂಗ್ರೆಸ್ ಟಿಕೆಟಿನಿಂದ ಎಂದು ಸುಮಲತಾ ಸ್ಪಷ್ಟವಾಗಿ ಹೇಳಿದ್ದರು.
ಅಭಿಮಾನಿಗಳ ಆಸೆ ಸೋಲಬಾರದು, ರಾಜಕೀಯ ಪ್ರವೇಶ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ
ಸಿಂಪತಿಯಂದಾಗಿ ಜನರ ಪ್ರೀತಿ ಸುಮಲತಾ ಅವರಿಗೆ ಸಿಗುತ್ತಿದೆ
ಸಿಂಪತಿಯಂದಾಗಿ ಜನರ ಪ್ರೀತಿ ಅವರಿಗೆ ಸಿಗುತ್ತಿದೆ ಅದನ್ನೇ ಅವರು ರಾಜಕೀಯ ಏಳಿಗೆಗೆ ಬಳಸಿಕೊಳ್ಳುತ್ತಿದ್ದಾರೆ. ಮಂಡ್ಯಕ್ಕೆ ಸುಮಲತಾ ಕೊಡುಗೆ ಏನು ಎಂದು ಖಾರವಾಗಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದರು. ಮುಖ್ಯಮಂತ್ರಿಗಳ ಹೇಳಿಕೆ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಇನ್ನೊಂದು ಸುತ್ತಿನ ಮಾತಿನ ಚಕಮಕಿಗೆ ಕಾರಣವಾಗಿತ್ತು. ಅಧಿಕಾರಿಗಳ ಮಕ್ಕಳು ಅಧಿಕಾರಿಗಳಾಗುವಂತೆ, ನಟರ ಮಕ್ಕಳು ನಟರಾಗುವಂತೆ, ಕ್ರೀಡಾಪಟುಗಳ ಮಕ್ಕಳು ಕ್ರೀಡಾಪಟುಗಳಾಗುವಂತೆ ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆಗುವುದು ಸಾಮಾನ್ಯ ಎಂದು ಮಗನ ರಾಜಕೀಯ ಎಂಟ್ರಿಯನ್ನು ಕುಮಾರಣ್ಣ ಸಮರ್ಥಿಸಿಕೊಂಡಿದ್ದರು.
ಮಂಡ್ಯದಿಂದ ಸುಮಲತಾ ಅಂಬರೀಶ್ ಸ್ಪರ್ಧೆ : ಯಾರು, ಏನು ಹೇಳಿದರು?
ಜೆಡಿಎಸ್ ಗೆದ್ದಿರುವ ಕ್ಷೇತ್ರವನ್ನು ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪಿಗೆ
ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಸಿಗೆ ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪುವುದಿಲ್ಲ ಎನ್ನುವ ಮಾತು ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿತ್ತು. ಆದರೆ, ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ಜೆಡಿಎಸ್ ಗೆದ್ದಿರುವ ಕ್ಷೇತ್ರವನ್ನು ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪಿಕೊಳ್ಳುವಂತೆ ಕಾಣುತ್ತಿದೆ.
ಎರಡೂ ಕ್ಷೇತ್ರವನ್ನು ಜೆಡಿಎಸ್ಸಿಗೆ ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿದೆ
ಪ್ರಸಕ್ತ ಲೋಕಸಭೆಯಲ್ಲಿ ಜೆಡಿಎಸ್ ಎರಡು ಸ್ಥಾನವನ್ನು (ಮಂಡ್ಯ ಮತ್ತು ಹಾಸನ) ಹೊಂದಿದೆ. ಈಗಿರುವ ಎಲ್ಲಾ ಒತ್ತಡವನ್ನು ಬದಿಗೊತ್ತಿ, ಎರಡೂ ಕ್ಷೇತ್ರವನ್ನು ಜೆಡಿಎಸ್ಸಿಗೆ ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನುವ ಮಾಹಿತಿಯಿದೆ. ಜೊತೆಗೆ, ಮೈಸೂರು ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ವಿಚಾರದಲ್ಲೂ ಯಾವುದೇ ತಗಾದೆ ತೆಗೆಯದಿರಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ
ಕಾಂಗ್ರೆಸ್ ಒಂದು ವೇಳೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಸಿಗೆ ಬಿಟ್ಟುಕೊಡುವ ಅಂತಿಮ ನಿರ್ಧಾರಕ್ಕೆ ಬಂದರೆ, ಅದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಬಹುದು. ಇನ್ನು, ಕಾಂಗ್ರೆಸ್ ನಿರ್ಧಾರದಿಂದ ಬೇಸತ್ತು, ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ. ತಮ್ಮ ಪಕ್ಷಕ್ಕೆ ಸೆಳೆಯಲು ಬಿಜೆಪಿಯೂ ಪ್ರಯತ್ನಿಸಬಹುದು.