ಮಂಡ್ಯದ ಖತರ್ನಾಕ್ ಕಿಡ್ನಿ ಕಳ್ಳರಿಗೆ ಸಿಂಗಪುರ, ಶ್ರೀಲಂಕಾ ಲಿಂಕ್!
ಮಂಡ್ಯ, ಜನವರಿ 19 : ಬಡತನದಿಂದ ಬಳಲುವವರನ್ನು ಗುರಿಯಾಗಿಸಿಕೊಂಡು, ಅವರಿಗೆ ಲಕ್ಷಾಂತರ ರೂ. ಹಣದ ಆಮಿಷವೊಡ್ಡಿ, ಕಿಡ್ನಿ ಮಾರಾಟ ಮಾಡಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ಮಹಿಳೆ ಸೇರಿದಂತೆ ಐದು ಮಂದಿಯನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಕಳ್ಳರ ಕೈವಾಡವಿರುವುದು ಬೆಳಕಿಗೆ ಬಂದಿದೆ.
ಮಳವಳ್ಳಿ ಪಟ್ಟಣ ತಾರಾ, ರಾಮನಗರದ ಗೋಪಾಲ್ ಅಲಿಯಾಸ್ ಕಿಡ್ನಿ ಗೋಪಾಲ್, ರಾಜು, ತಿಮ್ಮಯ್ಯ ಹಾಗೂ ಮಂಡ್ಯ ತಾಲೂಕು ದುದ್ದ ಹೋಬಳಿಯ ಜವರಯ್ಯ ಅಲಿಯಾಸ್ ಜವರ ಬಂಧಿತರಾಗಿದ್ದಾರೆ. ಪೊಲೀಸರು ಇವರಿಂದ 1.50 ಲಕ್ಷ ರು. ನಗದನ್ನು ವಶಪಡಿಸಿಕೊಂಡಿದ್ದಾರೆ.
ತನ್ನ ಕಿಡ್ನಿ ಮಾರಲು ಹೋಗಿ ಮೋಸ: ಮಹಿಳೆ ಆತ್ಮಹತ್ಯೆ
ಬಂಧಿತರು ಶ್ರೀಲಂಕಾ ಹಾಗೂ ಸಿಂಗಪುರದ ಕಳ್ಳರೊಂದಿಗೆ ವ್ಯವಹಾರ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇದೊಂದು ಭಾರೀ ದೊಡ್ಡ ಜಾಲವಾಗಿರಬಹುದೆಂಬ ಸಂಶಯ ವ್ಯಕ್ತವಾಗಿದೆ.
ಕಳೆದೊಂದು ವಾರದ ಹಿಂದೆ ಮಳವಳ್ಳಿ ಪಟ್ಟಣದ ಗಂಗಾಮತ ಬೀದಿಯ ವೆಂಕಟಮ್ಮ(48) ಎಂಬಾಕೆ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಸೊಪ್ಪು ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಈಕೆಗೆ ತಾರಾ ಎಂಬಾಕೆಯ ಪರಿಚಯವಾಗಿತ್ತು.
ಕಿಡ್ನಿ ಮಾರಾಟ ಜಾಲದಲ್ಲಿರುವ ತಾರಾ ಎಂಬಾಕೆ ವೆಂಕಟಮ್ಮನ ಪರಿಚಯ ಮಾಡಿಕೊಂಡಿದ್ದಾಳೆ. ಆಕೆಯ ಬಡತನವನ್ನೇ ಬಂಡವಾಳ ಮಾಡಿಕೊಂಡು, ಮನುಷ್ಯನಿಗೆ ಒಂದು ಕಿಡ್ನಿ ಸಾಕು, ಒಂದು ಕಿಡ್ನಿ ಮಾರಿದರೆ 30 ಲಕ್ಷ ರು. ಸಿಗುತ್ತದೆ. ನಿನ್ನ ಮನೆಯಲ್ಲಿನ ಸಮಸ್ಯೆ ಇದರಿಂದ ಪರಿಹಾರವಾಗಲಿದೆ ಎಂದು ತಲೆ ಸವರಿದ್ದಳು. ಅಲ್ಲದೆ ಈ ಸಂಬಂಧ ಕಮೀಷನ್ ಆಗಿ 2.80 ಲಕ್ಷ ರೂಪಾಯಿಯನ್ನು ಪಡೆದುಕೊಂಡಿದ್ದಳಲ್ಲದೆ ಅದನ್ನು ಇತರರೊಂದಿಗೆ ಹಂಚಿಕೊಂಡಿದ್ದಳು.
ಕಿಡ್ನಿ ಕಸಿ ನಂತರ ಮೃತರಾದ ತೆಲಂಗಾಣ ಶಾಸಕರ ಪುತ್ರ
ಆ ನಂತರ ವೆಂಕಟಮ್ಮನಿಗೆ ತಾನು ವಂಚನೆಗೊಳಗಾಗಿದ್ದೇನೆ ಎಂಬುದು ಮತ್ತೆ ಗೊತ್ತಾಗಿತ್ತು. ಇದರಿಂದ ನೊಂದ ಆಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಸಾವಿಗೆ ಕಿಡ್ನಿ ಮಾರಾಟದಲ್ಲಿ ಸಿಲುಕಿ ಅದರಿಂದಾದ ವಂಚನೆಯೇ ಕಾರಣ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಸಂಬಂಧ ಮೃತಮಹಿಳೆಯ ಪತಿ ಮಲ್ಲಯ್ಯ ಎಂಬಾತ ಪೊಲೀಸರಿಗೆ ದೂರು ನೀಡಿದ್ದನು.
ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಶಿವಕುಮಾರ್ ಅವರ ಆದೇಶದ ಮೇರೆಗೆ ಡಿವೈಎಸ್ಪಿ ಎಚ್.ಎಂ. ಶೈಲೇಂದ್ರ ಮಾರ್ಗದರ್ಶನದಲ್ಲಿ ಸಿಪಿಐ ಸಿ.ಎನ್. ರಮೇಶ್ ಹಾಗೂ ಮಳವಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ತನಿಖೆ ಆರಂಭಿಸಿದ್ದರು.
72ನೇ ವಯಸ್ಸಿನಲ್ಲಿ ಮಗನಿಗೆ ಕಿಡ್ನಿಕೊಟ್ಟು ಪುನರ್ಜನ್ಮ ನೀಡಿದ ಮಹಾತಾಯಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ ತನಿಖಾ ತಂಡಕ್ಕೆ ಆರೋಪಿಗಳು ರಾಮನಗರದ ಶಾಂತಿಲಾಲ್ ಬಡಾವಣೆಯಲ್ಲಿರುವ ಗೋಪಾಲ್ ಎಂಬವರ ಮನೆಯಲ್ಲಿರುವುದು ಪತ್ತೆಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಜ.17ರಂದು ದಾಳಿ ಮಾಡಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ತಾರಾ ಮತ್ತು ಈಕೆಯ ಸಹೋದರಿ ಜ್ಯೋತಿ ಅವರು ಕಳೆದ 2015ರಲ್ಲಿ ಹಲವರ ಕಿಡ್ನಿ ಮಾರಾಟ ಮಾಡಿದ್ದು, ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಈ ಕಿಡ್ನಿ ಮಾರಾಟ ಜಾಲದ ಹಿಂದೆ ಆರೋಪಿಗಳಿಗೆ ಶ್ರೀಲಂಕಾ ಹಾಗೂ ಸಿಂಗಪುರದ ಕಳ್ಳರೊಂದಿಗೂ ಸಂಪರ್ಕವಿರುವುದು ಪತ್ತೆಯಾಗಿದೆ.