ಕೆಆರ್ ಎಸ್ ಗೆ ಆಂತರಿಕ ಭದ್ರತಾ ಎಡಿಜಿಪಿ ಭಾಸ್ಕರ್ ರಾವ್ ಭೇಟಿ
ಮಂಡ್ಯ, ಸೆಪ್ಟೆಂಬರ್ 17: ಕೃಷ್ಣರಾಜ ಸಾಗರ ಜಲಾಶಯವು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಆಂತರಿಕ ಭದ್ರತಾ ಎಡಿಜಿಪಿ ಭಾಸ್ಕರ್ ರಾವ್ ಅವರು ಬುಧವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕೃಷ್ಣರಾಜ ಸಾಗರ ಜಲಾಶಯ ಮತ್ತು ಬೃಂದಾವನ ಭದ್ರತೆಯ ಕುರಿತು ಸ್ಥಳೀಯ ಆಣೆಕಟ್ಟೆ ಭದ್ರತಾ ಉಸ್ತುವಾರಿ ವಹಿಸಿಕೊಂಡಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಪರೀಶಿಲನೆ ನಡೆಸಿ ಕೆಲವು ಸಲಹೆ-ಸೂಚನೆ ನೀಡಿದರು.
ಮಂಡ್ಯ: ಸೆ.16 ರಿಂದ ಕೆಆರ್ ಎಸ್ ಪ್ರವಾಸಿಗರಿಗೆ ಮುಕ್ತ
ಇನ್ಮುಂದೆ ದಿನನಿತ್ಯ ಸಾವಿರಾರು ಜನರು ಆಗಮಿಸುವ ನಿರೀಕ್ಷೆ ಇದ್ದು, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಡ್ಡಾಯ ಮಾಸ್ಕ ಹಾಕಿಕೊಂಡು ಬರುವಂತೆ ನೋಡಿಕೊಳ್ಳಬೇಕು, ಈ ವೇಳೆ ದೈಹಿಕ ಅಂತರ ನಿಯಮ ಪಾಲಿಸುವಂತೆ ತಿಳಿಹೇಳಬೇಕು. ಬೃಂದಾವನ ಹಾಗೂ ಅಣೆಕಟ್ಟೆ ಭದ್ರತೆ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಎಂದು ಎಡಿಜಿಪಿ ಭಾಸ್ಕರ್ ರಾವ್ ಸಲಹೆ ನೀಡಿದರು.
ಕೃಷ್ಣರಾಜ ಸಾಗರ ಜಲಾಶಯದ ಬಗ್ಗೆ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಾಸುದೇವ ಅವರಿಂದ ಮಾಹಿತಿ ಪಡೆದರು. ನಂತರ ಕಾವೇರಿ ಮಾತೆಯ ಪ್ರತಿಮೆಗೆ ಭಾಸ್ಕರ್ ರಾವ್ ಪೂಜೆ ಸಲ್ಲಿಸಿ, ಬೃಂದಾವನ ವೀಕ್ಷಣೆ ಮಾಡಿದರು.
ಕೆಆರ್ ಎಸ್ ಜಲಾಶಯವು ಪ್ರವಾಸಿಗರಿಗೆ ಮುಕ್ತವಾಗಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ರಾಜ್ಯ ಸರ್ಕಾರವು ಸೆ.16 ರಿಂದ ಪ್ರವಾಸಿಗರಿಗೆ ಬೃಂದಾವನ ಗಾರ್ಡನ್ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ.
Recommended Video
ಕೊರೊನಾ ಲಾಕ್ ಡೌನ್ ಕಾರಣದಿಂದಾಗಿ ಕಳೆದ ಮಾರ್ಚ್ ತಿಂಗಳಿನಿಂದಲೇ ಕೆ.ಆರ್.ಎಸ್ ವೀಕ್ಷಿಸಲು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಲಾಕ್ ಡೌನ್ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಕಾವೇರಿ ನೀರಾವರಿ ನಿಗಮ ನಿಯಮಿತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.