ಮಂಡ್ಯದ ಬಾರ್ ನಲ್ಲಿದ್ದ ಮದ್ಯವನ್ನು ಇಲಿಗಳು ಕುಡಿದವಾ?
ಮಂಡ್ಯ, ಮೇ 3: ಬಾರ್ ಮತ್ತು ವೈನ್ ಸ್ಟೋರ್ಗಳಿಗೆ ಹಾಕಲಾಗಿದ್ದ ಮೊಹರು ಮತ್ತು ಮದ್ಯದ ಪೌಚುಗಳನ್ನು ಇಲಿಗಳು ಕಡಿದು ಮದ್ಯವನ್ನು ನಾಶ ಮಾಡಿರುವ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.
ಮಂಡ್ಯ ಉಪ ವಿಭಾಗಾಧಿಕಾರಿ ಸೂರಜ್ ಅವರ ನೇತೃತ್ವದಲ್ಲಿ ಅಬಕಾರಿ ಅಧಿಕಾರಿಗಳ ತಂಡ ಬಾರ್ ಮತ್ತು ವೈನ್ ಸ್ಟೋರ್ಗಳಿಗೆ ಭೇಟಿ ನೀಡಿ, ಅಂಗಡಿ ಬಾಗಿಲುಗಳಿಗೆ ಹಾಕಲಾಗಿದ್ದ ಮೊಹರು ಮತ್ತು ಮದ್ಯದ ದಾಸ್ತಾನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೆಲವು ಮದ್ಯದ ಅಂಗಡಿಗಳಲ್ಲಿ ಪೌಚುಗಳನ್ನು ಇಲಿಗಳು ಕಡಿದು ಹಾಕಿರುವ ದೃಶ್ಯಗಳು ಗೋಚರಿಸಿವೆ.
ಕರ್ನಾಟಕದಾದ್ಯಂತ ಎಣ್ಣೆ ಅಂಗಡಿ ಓಪನ್: ಷರತ್ತುಗಳು ಅನ್ವಯ!
ಮಾ. ೨೩ ರಂದು ಎಲ್ಲ ಮದ್ಯದಂಗಡಿಗಳಿಗೂ ಪೊಲೀಸ್ ಮತ್ತು ಅಬಕಾರಿ ಇಲಾಖೆ ಪ್ರತ್ಯೇಕವಾಗಿ ಸೀಲ್ ಮಾಡಿದ್ದು, ಇದೀಗ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಬಾರ್ ಮತ್ತು ವೈನ್ಸ್ ಸ್ಟೋರ್ಗಳ ದಾಸ್ತಾನನ್ನು ತೆಗೆಯಲಾಗಿದೆಯೇ, ಇಲ್ಲವೆ ಹಾಗೆಯೇ ಇವೆ ಎಂಬುದರ ಕುರಿತು ಇದೀಗ ಪರಿಶೀಲನೆ ನಡೆಸಲಾಗುತ್ತಿದೆ.
ಒಂದು ವೇಳೆ ದಾಸ್ತಾನಿನಲ್ಲಿ ವ್ಯತ್ಯಾಸವಾದರೆ ಅಂತಹ ಮದ್ಯದಂಗಡಿಗಳ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಇದಕ್ಕೆ ಕಾರಣವೂ ಇತ್ತು. ಲಾಕ್ ಡೌನ್ ವೇಳೆ ಕೆಲವು ಅಂಗಡಿಗಳಿಂದ ಮದ್ಯವನ್ನು ಸಾಗಿಸಲಾಗಿದೆ ಎಂಬ ದೂರುಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ಆದರೆ ಪರಿಶೀಲನೆ ವೇಳೆ ಅಂಗಡಿಗಳಲ್ಲಿ ಖಾಲಿ ಪೌಚ್ಗಳು ದೊರೆತಿದ್ದು, ಲಾಕ್ಡೌನ್ನಿಂದ ಅಂಗಡಿಗಳನ್ನು ಸೀಲ್ ಮಾಡಲಾಗಿದ್ದು, ಇಲಿಗಳು ಮದ್ಯದ ಪೌಚ್ಗಳನ್ನು ಕಡಿದು ಹಾಕಿದ್ದು, ಮದ್ಯವನ್ನು ಇಲಿಗಳು ಕುಡಿದಿರಬಹುದಾ ಅಥವಾ ಮದ್ಯ ಹರಿದು ಹೋಗಿ ನಾಶವಾಗಿದೆಯಾ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
ಅಬಕಾರಿ ಜಿಲ್ಲಾ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ""ಮಂಡ್ಯ-ಮದ್ದೂರು ವ್ಯಾಪ್ತಿಯಲ್ಲಿ ೩೦ ಕ್ಕೂ ಹೆಚ್ಚು ವೈನ್ಸ್ ಸ್ಟೋರ್ಗಳಿದ್ದು, ಈಗಾಗಲೇ ಎಲ್ಲದ್ದಕ್ಕೂ ಸೀಲ್ ಮಾಡಿದ್ದೇವೆ. ಅಂಗಡಿಗಳಲ್ಲಿ ದಾಸ್ತಾನು ಪರಿಶೀಲನೆ ನಡೆಸುತ್ತಿದ್ದು, ಒಂದು ವೇಳೆ ದಾಸ್ತಾನಿನಲ್ಲಿ ಏರು ಪೇರು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಅಂಗಡಿ ಸನ್ನದುದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು'' ಎಂದು ಎಚ್ಚರಿಕೆ ನೀಡಿದ್ದಾರೆ.