ಫೆ.14ರಂದು ಹುತಾತ್ಮ ಯೋಧ ಗುರು ಸಮಾಧಿ ಉದ್ಘಾಟನೆ
ಮಂಡ್ಯ, ಜನವರಿ 21: ಅಂತೂ ಇಂತೂ ಮೂರು ವರ್ಷದ ಬಳಿಕ ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮಂಡ್ಯ ಜಿಲ್ಲೆಯ ಯೋಧ ಗುರುವಿನ ಸಮಾಧಿ ನಿರ್ಮಾಣವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ಫೆಬ್ರವರಿ 14ರಂದು ಸಮಾಧಿಯ ಉದ್ಘಾಟನೆಯೂ ನಡೆದು ಹೋಗಲಿದೆ.
ಬಹುಶಃ 2019 ಫೆಬ್ರವರಿ 14ನ್ನು ಭಾರತೀಯರು ಯಾರೂ ಮರೆಯಲಾರರು. ಅವತ್ತು ಉಗ್ರಗಾಮಿಗಳು ನಡೆಸಿದ ಬಾಂಬ್ ದಾಳಿಗೆ ಸಿಆರ್ಪಿಎಫ್ನ 40 ಮಂದಿ ಯೋಧರು ಪ್ರಾಣ ತ್ಯಾಗ ಮಾಡಿದ್ದರು. ಅವರಲ್ಲಿ ಮದ್ದೂರು ತಾಲ್ಲೂಕಿನ ಗುಡಿಗೆರೆಯ ಯೋಧ ಎಚ್. ಗುರು ಒಬ್ಬರಾಗಿದ್ದರು.
ಯೋಧ ಗುರು ಸಾವಿಗೆ ಇಡೀ ಕನ್ನಡನಾಡು ಕಂಬನಿ ಮಿಡಿದಿತ್ತು. ಅದಾದ ನಂತರ ಅವರಿಗೊಂದು ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ ಬಳಿ ಮದ್ದೂರು- ಮಳವಳ್ಳಿ ರಸ್ತೆಯಲ್ಲಿ ಸಮಾಧಿ ಕಟ್ಟುವ ಕನಸು ಶುರುವಾಗಿತ್ತು. ಅದು ಎಲ್ಲ ಕನ್ನಡಿಗರ, ದೇಶಪ್ರೇಮಿಗಳ ಬಯಕೆಯೂ ಆಗಿತ್ತು. ಅದು ಸುಮಾರು ಮೂರು ವರ್ಷಗಳ ಬಳಿಕ ಈಡೇರುತ್ತಿದೆ. ಈಗಾಗಲೇ ಲಕ್ಷಾಂತರ ರೂ. ವೆಚ್ಚದಲ್ಲಿ ಸಮಾಧಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗಾಗಿ ಕಾಯುತ್ತಿದೆ.
Recommended Video
ಶಾಸಕ ಡಿ.ಸಿ.ತಮ್ಮಣ್ಣ ಹೇಳಿದ್ದೇನು?
ಇದೀಗ ಉದ್ಘಾಟನೆಗೆ ಸಿದ್ಧವಾಗಿರುವ ಗುರುವಿನ ಸಮಾಧಿಯನ್ನು ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಅವರು ವೀಕ್ಷಣೆ ಮಾಡಿದ್ದು, ಈ ವೇಳೆ ಮಾತನಾಡಿದ ಅವರು ಯೋಧ ಗುರು ಸಮಾಧಿ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು, ಫೆಬ್ರವರಿ 14ರಂದು ಉದ್ಘಾಟನೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ ಕೊರೊನಾ ಹೆಚ್ಚಳವಾಗುತ್ತಿರುವುದರಿಂದ ಹುತಾತ್ಮ ಯೋಧ ಗುರುವಿನ ಮನೆಯವರನ್ನು ಮಾತ್ರ ಕರೆಯಿಸಿ ಉದ್ಘಾಟನೆ ಮಾಡಿಸುವುದಾಗಿಯೂ ವಿವರಿಸಿದ್ದಾರೆ.
ವರ್ಷವಾದರೂ ಸಮಾಧಿ ನಿರ್ಮಿಸಿರಲಿಲ್ಲ
ಇನ್ನು ಗುರುವಿನ ಸಮಾಧಿ ನಿರ್ಮಾಣದ ಬಗ್ಗೆ ಹೇಳುವುದಾದರೆ ಯೋಧ ಗುರು ವೀರ ಮರಣವನ್ನಪ್ಪಿದ ವೇಳೆ ಸರ್ಕಾರ ಸಮಾಧಿ ನಿರ್ಮಾಣ ಮಾಡುವ ಬಗ್ಗೆ ಹೇಳಿಕೆ ನೀಡಿತ್ತು. ಜನ ಕೂಡ ಇದನ್ನು ಬಯಸಿದ್ದರು. ಆದರೆ ನಂತರದ ದಿನಗಳಲ್ಲಿ ಆ ಬಗ್ಗೆ ಮೌನವಹಿಸಲಾಯಿತಲ್ಲದೆ, ವರ್ಷವಾದರೂ ಸಮಾಧಿ ನಿರ್ಮಿಸಿರಲಿಲ್ಲ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಅಸಮಾಧಾನಗಳು ಹುಟ್ಟಿಕೊಂಡಿದ್ದವು.
ಈ ಸಂಬಂಧ ಹಲವು ಸಂಘಟನೆಗಳು ಮಂಡ್ಯ ಜಿಲ್ಲಾಡಳಿತದ ಮೇಲೆ ಒತ್ತಡ ತರಲು ಆರಂಭಿಸಿದ್ದವು. ಈ ಕುರಿತು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಖುದ್ದು ಪತ್ರ ಬರೆದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಸಮಾಧಿ ನಿರ್ಮಿಸುವಂತೆ ಮನವಿ ಮಾಡಿದ್ದರು.
ಅನುದಾನ ಬಿಡುಗಡೆ ಮಾಡಿದ್ದ ಬಿಎಸ್ವೈ
ಆಗಿನ ಮಂಡ್ಯ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಸಮಾಧಿ ನಿರ್ಮಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪತ್ರಕ್ಕೆ ಸ್ಪಂದಿಸಿ ಸಮಾಧಿ ನಿರ್ಮಾಣಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿ ಅನುದಾನ ಬಿಡುಗಡೆ ಮಾಡುವುದಾಗಿ ಆಗಿನ ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದರು.
ತದನಂತರ ಅವರು, ಹುತಾತ್ಮ ಯೋಧ ಎಚ್.ಗುರು ಅವರ ಸಮಾಧಿ ನಿರ್ಮಾಣಕ್ಕೆ 25 ಲಕ್ಷ ಹಣ ಘೋಷಿಸಿದ್ದರು. ಅದರಂತೆ ಸಮಾಧಿ ನಿರ್ಮಾಣದ ಕಾಮಗಾರಿ ಆರಂಭವಾಗಿತ್ತು. ಹುತಾತ್ಮ ಯೋಧ ಎಚ್. ಗುರು ಅವರ ಸಮಾಧಿಯನ್ನು ಉತ್ತಮ ರೀತಿಯಲ್ಲಿ ಭವ್ಯ ಸ್ಮಾರಕವನ್ನಾಗಿ ನಿರ್ಮಾಣ ಮಾಡುವ, ಮುಂದಿನ ಯುವ ಪೀಳಿಗೆಗೆ, ಯೋಧ ಗುರು ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ಕೆಲಸವನ್ನು ಮಾಡುವ ಉದ್ದೇಶವನ್ನು ಆಗಿನ ಡಿಸಿ ಎಂ.ವಿ. ವೆಂಕಟೇಶ್ ಹೊಂದಿದ್ದರು.
ದೇಶಪ್ರೇಮಿಗಳ ಸೆಳೆಯಲಿದೆ ಸಮಾಧಿ
ಈ ನಡುವೆ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರು ವರ್ಗಾವಣೆಗೊಂಡ ನಂತರ ಅಧಿಕಾರ ವಹಿಸಿಕೊಂಡ ಸಿ.ಅಶ್ವಥಿ, ಸಮಾಧಿ ಕಾರ್ಯದತ್ತ ಗಮನಹರಿಸಿದ್ದು, ಸದ್ಯ ಈಗ ಎಲ್ಲ ಅಡೆ ತಡೆಗಳನ್ನು ದಾಟಿ ಸಮಾಧಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಈ ಸಮಾಧಿ ದೇಶಪ್ರೇಮಿಗಳ ಮನಸೆಳೆಯುವುದರೊಂದಿಗೆ ಇಲ್ಲಿಗೆ ಹೆಚ್ಚಿನ ಜನರು ಭೇಟಿ ನೀಡುವಂತೆ ಮಾಡಲಿದೆ.