100 ಅಡಿ ತಲುಪಿದ ಕೆಆರ್ಎಸ್ ನೀರಿನ ಮಟ್ಟ
ಮಂಡ್ಯ, ಜೂನ್ 17 : ಜೂನ್ 20ಕ್ಕೂ ಮೊದಲೇ ಕೆಆರ್ಎಸ್ ನೀರಿನ ಮಟ್ಟ 100 ಅಡಿ ತಲುಪಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಈ ಬಾರಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇಲ್ಲ.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಆದ್ದರಿಂದ, ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬರುತ್ತಿದ್ದು, ಭಾನುವಾರ ಬೆಳಗ್ಗೆ 6 ಗಂಟೆಗೆ ಜಲಾಶಯದಲ್ಲಿ 100.75 ಅಡಿ ನೀರಿನ ಸಂಗ್ರಹವಿದೆ.
ಭಾರೀ ವರ್ಷಧಾರೆಗೆ ಮೈದುಂಬಿದ ಜಲಾಶಯಗಳು: ರೈತರ ಮೊಗದಲ್ಲಿ ಖುಷಿ
ಜಲಾಶಯಕ್ಕೆ 23,424 ಕ್ಯುಸೆಕ್ ನೀರಿನ ಒಳ ಹರಿವು ಇದ್ದು, 453 ಕ್ಯುಸೆಕ್ ನೀರನ್ನು ಡ್ಯಾಂನಿಂತ ಹೊರಬಿಡಲಾಗುತ್ತಿದೆ. ಕೆಆರ್ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳು.
ಜೂನ್ 20ಕ್ಕೂ ಮೊದಲೇ ಜಲಾಶಯದ ನೀರಿನ ಮಟ್ಟ 100 ಅಡಿಗೆ ತಲುಪಿದ್ದು, ಈ ಬಾರಿ ಕೆಆರ್ಎಸ್ ಜಲಾಶಯ ಭರ್ತಿಯಾಗಲಿದೆ. ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ರೈತರ ಮೊಗದಲ್ಲಿಯೂ ಮಂದಹಾಸ ಮೂಡಿಸಿದೆ.
ಕೊಂಕಣದಲ್ಲಿ ಭಾರಿ ಮಳೆ ಮುನ್ಸೂಚನೆ, ಕರ್ನಾಟಕ, ಗೋವಾಕ್ಕೆ ಎಚ್ಚರಿಕೆ!
ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ ಕೇವಲ 67.86 ಅಡಿಗಳಷ್ಟು ನೀರಿನ ಸಂಗ್ರಹವಿತ್ತು. 1397 ಕ್ಯುಸೆಕ್ ಒಳಹರಿವು ಮತ್ತು 1074 ಕ್ಯುಸೆಕ್ ಹೊರ ಹರಿವು ಇತ್ತು. ಆದರೆ, ಈ ಬಾರಿ ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಿದೆ.
ಕಾವೇರಿ ತೀರ್ಪಿನ ಅನ್ವಯ ಕರ್ನಾಟಕ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸಬೇಕು. ನಾಲೆಗಳ ಮೂಲಕ ಕೃಷಿ ಚಟುವಟಿಕೆಗೆ ನೀರು ಒದಗಿಸಬೇಕು. ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಕುಡಿಯುವ ನೀರನ್ನು ಸಹ ಕೆಆರ್ಎಸ್ನಿಂದ ಪೂರೈಸಲಾಗುತ್ತದೆ.