ಧಾರಕಾರ ಮಳೆ; 100 ಅಡಿ ಸನಿಹಕ್ಕೆ ಕೆಆರ್ಎಸ್ ನೀರಿನ ಮಟ್ಟ
ಮಂಡ್ಯ, ಜುಲೈ 20; ಕೊಡಗು ಸೇರಿದಂತೆ ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೆಆರ್ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಜಲಾಶಯದ ನೀರಿನ ಮಟ್ಟ 100 ಅಡಿ ಸನಿಹಕ್ಕೆ ಬಂದು ನಿಂತಿದೆ.
ಹಾರಂಗಿ, ಹೇಮಾವತಿ, ಕೆಆರ್ಎಸ್ ಮತ್ತು ಕಬಿನಿ ಕಾವೇರಿ ಕೊಳ್ಳದ ಜಲಾಶಯಗಳಾಗಿವೆ. ಮಂಗಳವಾರದ ವರದಿಯಂತೆ ಹಾರಂಗಿಗೆ 9393. ಹೇಮಾವತಿಗೆ 8582. ಕೆಆರ್ಎಸ್ಗೆ 13,892. ಕಬಿನಿ ಜಲಾಶಯಕ್ಕೆ 9262 ಕ್ಯುಸೆಕ್ ಒಳಹರಿವು ಇದೆ.
ಮುಂದುವರೆದ ಮಳೆ; ಜಲಾಶಯಗಳ ನೀರಿನ ಮಟ್ಟ
ಕಾವೇರಿ ಕೊಳ್ಳದ ಪ್ರಮುಖ ಜಲಾಶಯ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್ಎಸ್. ಮಂಗಳವಾರ ಜಲಾಶಯದ ನೀರಿನ ಮಟ್ಟ 99.50 ಅಡಿಗಳಿಗೆ ತಲುಪಿದೆ. ಜಲಾಶಯದ ಪೂರ್ಣ ಮಟ್ಟ 124.80 ಅಡಿಗಳು.
ಕೆಆರ್ಎಸ್ ಡ್ಯಾಂ ಬಿರುಕು ವಿವಾದದ ಬೆನ್ನಲ್ಲೇ ಡ್ಯಾಂ ಮೆಟ್ಟಿಲಿನ ಕಲ್ಲು ಕುಸಿತ!
ಜಲಾಶಯಕ್ಕೆ 13,892 ಕ್ಯುಸೆಕ್ ಒಳಹರಿವು ಇದ್ದು, 2,153 ಕ್ಯುಸೆಕ್ ಹೊರ ಹರಿವು ಇದೆ. ಕಳೆದ ವರ್ಷದ ಜುಲೈ 20ರಂದು ಕೆಆರ್ಎಸ್ ನೀರಿನ ಮಟ್ಟ 106 ಅಡಿಗಳಾಗಿತ್ತು. ಆದರೆ ಈ ಬಾರಿ ಜುಲೈ ತಿಂಗಳಿನಲ್ಲಿ ಮಳೆ ಆರಂಭವಾಗಿದ್ದು, ಈಗ ಜಲಾಶಯದ ನೀರಿನ ಮಟ್ಟ 100 ಅಡಿ ತಲುಪುತ್ತಿದೆ.
ಕೆಆರ್ಎಸ್ ಸುತ್ತಲಿನ ಜನರನ್ನು ಬೆಚ್ಚಿ ಬೀಳಿಸಿದ್ದ ನಿಗೂಢ ಶಬ್ದ!
ಕೆಆರ್ಎಸ್ ಜಲಾಶಯ ಸಂಪೂರ್ಣ ಭರ್ತಿಯಾದರೆ 49.45 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ಪ್ರಸ್ತುತ ಜಲಾಶಯದಲ್ಲಿ 22.44 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷದ ಇದೇ ದಿನ ಜಲಾಶಯದಲ್ಲಿ 28.81 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು.
ಕೆಆರ್ಎಸ್ ಜಲಾಶಯ ಭರ್ತಿಯಾದರೆ ಕರ್ನಾಟಕ ತಮಿಳುನಾಡು ರಾಜ್ಯಕ್ಕೆ ನೀರನ್ನು ಹಂಚಿಕೆ ಮಾಡಬೇಕಿದೆ. ಕಾವೇರಿ ನದಿ ಪಾತ್ರದಲ್ಲಿ ಮಳೆ ಮುಂದುವರೆದರೆ ಜಲಾಶಯಕ್ಕೆ ಒಳಹರಿವು ಹೆಚ್ಚಾಗಲಿದ್ದು, ಜಲಾಶಯ ಭರ್ತಿಯಾಗಲಿದೆ.
ಶ್ರೀರಂಗಪಟ್ಟಣದಲ್ಲಿರುವ ಜಲಾಶಯದ ನೀರನ್ನು ಕೃಷಿ ಚಟುವಟಿಕೆಗೆ ಮಾತ್ರ ಬಳಕೆ ಮಾಡುವುದಿಲ್ಲ. ಬೆಂಗಳೂರು, ಮಂಡ್ಯ ಮತ್ತು ಮೈಸೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಸಹ ಕೆಆರ್ಎಸ್ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
ಕಳೆದ ಕೆಲವು ದಿನಗಳಿಂದ ಕೆಆರ್ಎಸ್ ಜಲಾಶಯ ಕರ್ನಾಟಕದಲ್ಲಿ ಸುದ್ದಿಯಲ್ಲಿದೆ. ಮಂಗಳವಾರ ಮಂಡ್ಯದ ಸಂಸದೆ ಸುಮಲತಾ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ಮಾಡಿದರು.
ಕೆಆರ್ಎಸ್ ಜಲಾಶಯಕ್ಕೆ ಅಕ್ರಮ ಗಣಿಗಾರಿಕೆಯಿಂದ ಆಗುವ ಅಪಾಯವನ್ನು ಸಚಿವರ ಗಮನಕ್ಕೆ ತಂದರು. ಈ ವಿಚಾರವಾಗಿ ಉನ್ನತ ಮಟ್ಟದ ಸಮಿತಿ ರಚಿಸಿ, ತನಿಖೆ ನಡೆಸಬೇಕೆಂದು ಆಗ್ರಹಿಸಿದರು.