ಕನ್ನಡಿಗರಾಗಿ ಕನ್ನಡದ ಕೊಲೆ ಮಾಡದಿರಿ!
ಮಂಡ್ಯ, ಜನೆವರಿ 4: ಕನ್ನಡದ ಉಳಿವಿನ ಬಗೆಗೆ ಮಾರುದ್ಧ ಭಾಷಣ ಮಾಡುವ ನಾವು ಕನ್ನಡವನ್ನೇ ಸ್ಪಷ್ಟವಾಗಿ, ವ್ಯಾಕರಣ ಬದ್ಧವಾಗಿ ಬರೆಯುವತ್ತ ಗಮನಹರಿಸದ ಕಾರಣದಿಂದಾಗಿ ತಪ್ಪುಗಳು ನುಸುಳಿ ಕನ್ನಡದ ಕಗ್ಗೊಲೆಯಾಗುತ್ತಿರುವುದು ಮುಜುಗರದ ಸಂಗತಿಯಾಗಿದೆ.
ಕನ್ನಡ ಪದಗಳ ಅರಿವಿನ ಕೊರತೆಯೋ? ಅಥವಾ ನಿರ್ಲಕ್ಷ್ಯವೋ ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿಯೇ ಬರೆಯಲಾಗುತ್ತಿರುವ ನಾಮಫಲಕ, ಕರಪತ್ರ, ಆಮಂತ್ರಣ ಪತ್ರಿಕೆಗಳಲ್ಲಿ ಕನ್ನಡ ಪದಗಳನ್ನು ತಪ್ಪು ತಪ್ಪಾಗಿ ಮುದ್ರಿಸುವುದು ಕಂಡು ಬರುತ್ತಿದ್ದು, ಇದರಿಂದ ಕೆಲವೊಮ್ಮೆ ಪದಗಳೇ ಅರ್ಥ ಕಳೆದುಕೊಂಡು ಅಪಾರ್ಥಗಳಾಗುತ್ತಿವೆ.
ಮಹಾತ್ಮ ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸು ಹರಾಜು
ಇವತ್ತಿಗೂ ಬಹಳಷ್ಟು ಮಂದಿಗೆ ಕನ್ನಡದ ಬಹತೇಕ ಪದಗಳನ್ನು ವ್ಯಾಕರಣ ಬದ್ಧವಾಗಿ ಬರೆಯಲು ಬರುತ್ತಿಲ್ಲ ಎಂಬುದೇ ಬೇಸರದ ಸಂಗತಿಯಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವ ಸಂದರ್ಭಗಳಲ್ಲಿ ಬರೆಯುವ ಬರಹಗಳ ಬಗ್ಗೆ ನಿಗಾವಹಿಸದೆ ಹೋದರೆ ಅರ್ಥ ನೀಡಬೇಕಾದ ಪದಗಳು ಅರ್ಥ ಕಳೆದುಕೊಂಡು ಅಭಾಸವಾಗುವುದರ ಜತೆಗೆ ಕಾರ್ಯಕ್ರಮದ ಸಂಘಟಕರು ನಗೆಪಾಟಲಿಗೀಡಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆದ ಕಾರ್ಯಕ್ರಮ ಸಾಕ್ಷಿಯಾಗಿದೆ.
ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಸರಳವಾಗಿ ಶಾಲಾ ಕೊಠಡಿಯಲ್ಲಿಯೇ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಸಂಬಂಧ ಶಾಲಾ ಕಪ್ಪುಹಲಗೆಯಲ್ಲಿ ಕಾರ್ಯಕ್ರಮದ ವಿವರ ಮತ್ತು ಗರ್ಭಿಣಿಯರಿಗೆ ಹೊಸವರ್ಷದ ಶುಭಹಾರೈಸಿ ಬರೆಯಲಾಗಿತ್ತಾದರೂ ಅದರಲ್ಲಿ ಕನ್ನಡ ಪದಗಳು ತಪ್ಪಾಗಿರುವುದು ಎದ್ದು ಕಾಣುತ್ತಿತ್ತು. ಹಾರ್ದಿಕ ಬದಲಾಗಿ ಆರ್ದಿಕ, ಸೀಮಂತಕ್ಕೆ ಶ್ರೀಮಂತ ಎಂದು ಬರೆಯಲಾಗಿತ್ತು.
Recommended Video
ಇದರ ಬಗ್ಗೆ ಸಂಘಟಕರು ಗಮನಹರಿಸದೆ ಹೋದದ್ದು ಮಾತ್ರ ದುರಂತವೇ ಸರಿ. ಇನ್ನಾದರೂ ಸಂಬಂಧಿಸಿದವರು ಕನ್ನಡದ ಪದಗಳ ಬಗ್ಗೆ ನಿಗಾವಹಿಸಲಿ. ಇಲ್ಲದೆ ಹೋದರೆ ಕನ್ನಡಿಗರಾಗಿ ನಾವೇ ಕನ್ನಡಕ್ಕೆ ಅವಮಾನ ಮಾಡಿದಂತಾಗುತ್ತದೆ ಎಂಬುದಂತು ಸತ್ಯ.