ಅಕ್ರಮ ಗಣಿಗಾರಿಕೆ; ಸ್ಪೋಟಕ ರವಾನೆಯಾಗುತ್ತಿರುವುದು ಎಲ್ಲಿಂದ?
ಮಂಡ್ಯ, ಜನವರಿ 22; ಶಿವಮೊಗ್ಗದ ಹುಣಸೋಡಿನಲ್ಲಿ ನಡೆದ ಸ್ಪೋಟ ಪ್ರಕರಣ ಇಡೀ ರಾಜ್ಯ ಮಾತ್ರವಲ್ಲ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಒಂದು ವೇಳೆ ಈ ಘಟನೆ ಜನವಸತಿ ಪ್ರದೇಶದಲ್ಲಿ ನಡೆದಿದ್ದರೆ ಅದರಿಂದ ಆಗುತ್ತಿದ್ದ ಅನಾಹುತವನ್ನು ಊಹಿಸಲು ಸಾಧ್ಯವಿಲ್ಲ.
ಕ್ರಷರ್ನಲ್ಲಿ ನಡೆದ ಸ್ಫೋಟ ಪ್ರಕರಣದ ಬಳಿಕ ಪುನಃ ಅಕ್ರಮ ಗಣಿಗಾರಿಕೆ ಕುರಿತು ಚರ್ಚೆಗಳು ಆರಂಭವಾಗಿವೆ. ಕಲ್ಲು ಗಣಿಗಾರಿಕೆಗಳಿಗೆ ಬಳಸುತ್ತಿರುವ ಸ್ಪೋಟಕಗಳು ಅಕ್ರಮವಾಗಿ ಬಳಕೆಯಾಗುತ್ತಿರುವುದು ಅಚ್ಚರಿಯ ವಿಷಯದ ಜತೆಗೆ ಅನಾಹುತಗಳಿಗೆ ಎಡೆ ಮಾಡಿಕೊಡುತ್ತಿವೆ.
ಶಿವಮೊಗ್ಗ; ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದವರಿಗೆ ಸಂಕಷ್ಟ
ಈ ಸ್ಪೋಟಕಗಳನ್ನು ಸರಬರಾಜು ಮಾಡುತ್ತಿರುವವರು ಯಾರು?. ಇದರ ಹಿಂದೆ ದೊಡ್ಡ ಜಾಲವಿದೆಯಾ? ಎಂಬ ಹತ್ತು ಹಲವು ಪ್ರಶ್ನೆಗಳು ಎದುರಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಗಣಿಗಾರಿಕೆ ಹಣ ಉದುರಿಸುವ ಮರಗಳಂತೆ ಭಾಸವಾಗುತ್ತಿದ್ದು, ಪ್ರಭಾವಿಗಳು ಇದನ್ನು ನಡೆಸುತ್ತಿದ್ದಾರೆ.
ಕೆಆರ್ಎಸ್ ಅಣೆಕಟ್ಟೆ ಸುತ್ತ ಕಲ್ಲು ಗಣಿಗಾರಿಕೆ ನಿಷೇಧ
ಸರ್ಕಾರ ಮತ್ತು ಜಿಲ್ಲಾಡಳಿತ ಅನುಮತಿ ಪಡೆದು ನಡೆಯುವ ಅಧಿಕೃತ ಗಣಿಗಾರಿಕೆಗಳಿಗಿಂತ ಅನಧಿಕೃತ ಗಣಿಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಇವೆ. ಇಲ್ಲಿ ಕೆಲಸ ನಿರ್ವಹಣೆ ಮಾಡುವ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡುವುದಿಲ್ಲ. ಅವರ ಪ್ರಾಣಕ್ಕೆ ಬೆಲೆಯೇ ಇಲ್ಲದಂತಾಗಿದೆ.
ಶಿವಮೊಗ್ಗ; ಸ್ಫೋಟ ನಡೆದ ಪ್ರದೇಶದಲ್ಲಿವೆ ಸುಮಾರು 50 ಕ್ರಷರ್
ಸ್ಪೋಟಕಗಳ ಅಕ್ರಮ ಸಾಗಣೆ
ಮಂಡ್ಯ ಜಿಲ್ಲೆಯಲ್ಲಿ ಗಣಿಗಾರಿಕೆಗಳು ಎಲ್ಲೆಂದರಲ್ಲಿ ನಡೆಯುತ್ತಿದ್ದು, ಇತ್ತೀಚೆಗೆ ಕೆಆರ್ಎಸ್ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆಗೆ ನಿರ್ಬಂಧ ಹೇರಲಾಗಿದೆ. ಆದರೂ ಕೆಲವೆಡೆ ಅನಧಿಕೃತವಾಗಿ ಕಣ್ತಪ್ಪಿಸಿ ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅನಧಿಕೃತವಾಗಿ ನಡೆಯುತ್ತಿರುವ ಗಣಿಗಾರಿಕೆಗಳು ಪ್ರಭಾವಿಗಳ ಕೈಯಲ್ಲಿರುವ ಕಾರಣದಿಂದಾಗಿ ಯಾವುದೇ ಕ್ರಮಗಳನ್ನು ಕೈಗೊಂಡರೂ ಅದರಿಂದ ಪ್ರಯೋಜನವಾಗುತ್ತಿಲ್ಲ. ಇನ್ನು ಅಕ್ರಮ ಗಣಿಗಾರಿಕೆ ನಡೆಸುವ ಮಾಲೀಕರು ಬಂಡೆಗಳನ್ನು ಸ್ಪೋಟಿಸಲು ಬೇಕಾಗುವ ಸ್ಪೋಟಕಗಳನ್ನು ಕೂಡ ಅಕ್ರಮವಾಗಿ ತರಿಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಸಮಾಜ ಘಾತುಕರ ಪಾಲಾದರೆ ಗತಿಯೇನು?
ಇದುವರೆಗೆ ಪೊಲೀಸರು ಹಲವು ಬಾರಿ ಸ್ಪೋಟಕಗಳನ್ನು ವಶಪಡಿಸಿಕೊಂಡಿರುವ ಪ್ರಕರಣಗಳು ನಡೆದಿವೆ. ಇದೀಗ ಶಿವಮೊಗ್ಗದಲ್ಲಿ ನಡೆದ ಭಾರೀ ಸ್ಪೋಟದ ಬಳಿಕ ಗಂಭೀರತೆಯನ್ನು ಪಡೆದುಕೊಳ್ಳುತ್ತಿದ್ದು, ಒಂದು ವೇಳೆ ಸ್ಪೋಟಕಗಳು ಬಹು ಸುಲಭವಾಗಿ ಸಿಗುವುದಾದರೆ ಒಂದು ವೇಳೆ ಅವು ಸಮಾಜ ಘಾತುಕರ ಪಾಲಾದರೆ ಗತಿಯೇನು? ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಅರಣ್ಯಗಳು ಪಶ್ಚಿಮಘಟ್ಟ ಅರಣ್ಯಗಳಿಗೆ ಸೇರಿದ್ದು, ಈ ವ್ಯಾಪ್ತಿಯಲ್ಲಿ ನಕ್ಸಲರು ಸಕ್ರಿಯವಾಗಿದ್ದಾರೆ. ಹೀಗಿರುವಾಗ ಸ್ಪೋಟಕಗಳು ಅಂತಹವರ ಕೈಗೆ ಸಿಕ್ಕಿದ್ದರೆ ಏನಾಗುತ್ತಿತ್ತೋ?.
ಕೆ. ಆರ್. ಪೇಟೆಯಲ್ಲಿ ಸ್ಪೋಟಕ ವಶ
ಇಂತಹ ಘಟನೆಗಳು ಬೇರೆ ಜಿಲ್ಲೆಯಲ್ಲಿ ಮುಂದೆ ನಡೆದರೂ ಅಚ್ಚರಿಪಡಬೇಕಾಗಿಲ್ಲ. ಅದಕ್ಕೂ ಮುನ್ನ ಎಲ್ಲ ಜಿಲ್ಲೆಗಳಲ್ಲಿ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳ ಮೇಲೆ ನಿಗಾವಹಿಸಿ ಅನಧಿಕೃತವಾಗಿ ನಡೆಯುತ್ತಿರುವ ಗಣಿಗಾರಿಕೆಗಳ ಮೇಲೆ ಕ್ರಮ ಕೈಗೊಂಡು ಮುಚ್ಚಿಸಬೇಕಾಗಿದೆ. ಅಷ್ಟೇ ಅಲ್ಲ ಅಕ್ರಮವಾಗಿ ಸ್ಪೋಟಕಗಳ ಸಾಗಾಟದ ಮೇಲೆಯೂ ಕಣ್ಣಿಡಬೇಕಾಗಿದೆ. ಈ ನಡುವೆ ಅಕ್ರಮವಾಗಿ ಸ್ಪೋಟಕಗಳನ್ನು ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಕೆ. ಆರ್. ಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿ ಅವರಿಂದ ಸ್ಪೋಟಕ ಸಾಗಾಣಿಕೆಗೆ ಬಳಸಿದ್ದ ಗೂಡ್ಸ್ ವಾಹನ ಹಾಗೂ ಸ್ಪೋಟಕಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
1775 ಸ್ಪೋಟಕ ಸಿಡಿಮದ್ದು ಜೆಲ್ ವಶ
ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನ ಭೇರ್ಯ ಗ್ರಾಮದಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ 1775 ಸ್ಪೋಟಕ ಸಿಡಿಮದ್ದು ಜೆಲ್ಗಳು ಹಾಗೂ 1700 ಸ್ಪೋಟಕ ಸಿಡಿಮದ್ದು ಕಡ್ಡಿಗಳನ್ನು ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುರೇಶ್ ಅಕ್ಕಿಹೆಬ್ಬಾಳು ಗ್ರಾಮದ ಹೊರವಲಯದ ಹೇಮಾವತಿ ನದಿ ಸೇತುವೆಯ ವಾಹನವನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದಾಗ ಅಕ್ರಮ ಸ್ಪೋಟಕಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಇಬ್ಬರು ಯುವಕರನ್ನು ಮಾಲು ಸಮೇತ ಬಂಧಿಸಲಾಗಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮುಂದಿನ ದುರಂತ ತಡೆಯೋದು ಅಗತ್ಯ
ಪೊಲೀಸರು ಶಿವಮೊಗ್ಗದಲ್ಲಿ ನಡೆದ ಸ್ಪೋಟ ಪ್ರಕರಣದ ನಂತರ ಸ್ಪೋಟಕಗಳ ಅಕ್ರಮ ಸಾಗಾಣೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿದ್ದೇ ಆದರೆ ಮುಂದೆ ಆಗಬಹುದಾದ ದುರಂತಗಳನ್ನು ತಡೆಯಲು ಸಾಧ್ಯವಿದೆ.
Recommended Video