ಕೆ.ಆರ್.ಪೇಟೆ ತಾಲೂಕಿನಲ್ಲಿ 59 ಕಡೆ ಅಕ್ರಮ ಗಣಿಗಾರಿಕೆ:ಕೇಳೋರೇ ಇಲ್ಲ!
ಕೆ.ಆರ್.ಪೇಟೆ, ಜನವರಿ 24:ತಾಲೂಕಿನ ವಿವಿಧ ಭಾಗಗಳಲ್ಲಿ ಹಲವು ಮಂದಿ ಸುಮಾರು 66 ಕಡೆಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಪೈಕಿ 7 ಮಂದಿ ಮಾತ್ರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪರಿಸರ ಇಲಾಖೆಯಿಂದ ಅಧಿಕೃತವಾಗಿ ಅನುಮತಿಯನ್ನು ಪಡೆದು ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ.
ಆದರೆ ಉಳಿದ 59 ಮಂದಿ ಅಕ್ರಮವಾಗಿ ಗಣಿಗಾರಿಕೆಯನ್ನು ಮಾಡುತ್ತಿದ್ದು ಸರಕಾರಕ್ಕೆ ವಂಚಿಸುತ್ತಾ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ತಾಲೂಕಿನ ಕಾಡುಮೆಣಸ ಗ್ರಾಮದ ಕೆ.ಕೆ.ರಾಜೇಗೌಡ, ಕಾಡುಮೆಣಸದ ಕುಳ್ಳೇಗೌಡ, ನಾಗರಾಜು ಅವರು ಕೊರಟೀಕೆರೆ ಎಲ್ಲೆಯ ಸರ್ವೆ ನಂ .159 ರಲ್ಲಿ ಹಾಗೂ ಹರಳಹಳ್ಳಿಯ ಹೆಚ್.ಟಿ.ಮಂಜು ಅವರು ಶಿವಪುರ ಎಲ್ಲೆಯ ಸ.ನಂ .10 ಮತ್ತು 10 / ಪಿ .3 ಮತ್ತು ಬೊಮ್ಮನಾಯಕನಹಳ್ಳಿ ಎಲ್ಲೆಯ ಸ.ಸಂ.46 ರಲ್ಲಿ, ಚಿನಕುರಳಿಯ ಎಸ್.ನಾಗರಾಜು ಅವರು ಮಲ್ಕೋನಹಳ್ಳಿ ಎಲ್ಲೆಯ ಸ.ನಂ .57 ರಲ್ಲಿ ಅಧಿಕೃತವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪರಿಸರ ಇಲಾಖೆ ಮತ್ತಿತರ ಇಲಾಖೆಗಳಿಂದ ಅಧಿಕೃತ ಲೈಸೆನ್ಸ್ ಮತ್ತು ಎನ್.ಓ.ಸಿ. ಪತ್ರಗಳನ್ನು ಪಡೆದು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಶುರುವಾಗಿದೆ ಡ್ರೋನ್ ಬಳಕೆ
ಆದರೆ ಉಳಿದ 59 ಮಂದಿ ಯಾವುದೇ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳದೆ ಅನಧಿಕೃತವಾಗಿ ಕಲ್ಲು ಗಣಿಗಾರಿಕೆಯನ್ನು ಮುಂದುವರೆಸುವ ಮೂಲಕ ಸರಕಾರಕ್ಕೆ ಕೊಟ್ಯಾಂತರ ರೂ ವಂಚಿಸುವ ಜೊತೆಗೆ ಪರಿಸರ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ.
ನವೀಕರಣ ಮಾಡಿಸಿಕೊಂಡಿರುವುದಿಲ್ಲ
ಈ ಪೈಕಿ 59 ಮಂದಿ ಅನಧಿಕೃತವಾಗಿ ಕಲ್ಲುಗಾರಿಕೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ವಿಶೇಷವೆಂದರೆ ಕೆಲವರು ಕಳೆದ 18 ವರ್ಷಗಳ ಹಿಂದೆ ಲೈಸೆನ್ಸ್ ಅವಧಿ ಮುಕ್ತಾಯಗೊಂಡಿದ್ದರೂ ಇದೂವರೆಗೂ ನವೀಕರಣ ಮಾಡಿಸಿಕೊಂಡಿರುವುದಿಲ್ಲ. ಮತ್ತೆ ಕೆಲವರದ್ದು 10 ವರ್ಷಗಳ ಹಿಂದೆ ಇನ್ನೂ ಕೆಲವು 5 ವರ್ಷಗಳ ಹಿಂದೆ ಲೈಸೆನ್ಸ್ ಅವಧಿ ಮುಗಿದಿದ್ದರೂ ನವೀಕರಣ ಮಾಡಿಸಿಕೊಳ್ಳದೇ ಅನಧಿಕೃತವಾಗಿ ಕಲ್ಲು ಗಣಿಗಾರಿಕೆಯನ್ನು ಇಂದಿಗೂ ಮುಂದುವರೆಸುತ್ತಿದ್ದಾರೆ.
ಕೆಆರ್ ಎಸ್ ಗೆ ಸುತ್ತಿಕೊಂಡ ಗಣಿಗಾರಿಕೆಯ ಪರ-ವಿರೋಧ ಹೋರಾಟ
ಕೇಳುವವರು ಯಾರೂ ಇಲ್ಲ
ಆದರೂ ಸಹ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಾಗಲಿ, ತಾಲೂಕು ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ, ಯಾವುದೇ ಗಮನಹರಿಸುತ್ತಿಲ್ಲ. ಇದರಿಂದ ತಾಲೂಕಿನ ಪ್ರಾಕೃತಿಕ ಸಂಪತ್ತು ಅಪಾರ ಪ್ರಮಾಣದಲ್ಲಿ ಲೂಟಿಯಾಗುತ್ತಿದ್ದರೂ ಸಹ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಇದೀಗ ತಾಲೂಕಿಗೆ ತಹಸೀಲ್ದಾರ್ ಆಗಿ ಬಂದಿರುವ ಎಂ.ಶಿವಮೂರ್ತಿ ಅವರಾದರೂ ಈ ಅಕ್ರಮ ಗಣಿಗಾರಿಕೆಯ ವಿರುದ್ಧ ಸಮರ ಸಾರುವ ಮೂಲಕ ನಮ್ಮ ಪ್ರಕೃತಿ ಸಂಪತ್ತನ್ನು ಉಳಿಸಬೇಕು ಎಂಬುದು ಆಶಯವಾಗಿದೆ.
ಬನ್ನೇರುಘಟ್ಟದಲ್ಲಿ ಗಣಿಗಾರಿಕೆ ನಿರ್ಬಂಧಿಸುವಂತೆ ರಾಜೀವ್ ಮನವಿ
ಅಕ್ರಮವಾಗಿ ಕಲ್ಲು ಗಣಿಗಾರಿಕೆ
ತಾಲೂಕಿನ ಶೇ.50ಕ್ಕೂ ಹೆಚ್ಚು ಭಾಗಗಳಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಆದರೂ ಸಹ ಅರಣ್ಯ ಇಲಾಖೆಯು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಅರಣ್ಯ ಇಲಾಖೆ ತಕ್ಷಣ ಕ್ರಮ ವಹಿಸಿದರೆ ಶೇಕಡಾ .50 ಕ್ಕೂ ಹೆಚ್ಚು ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಬಹುದು ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ, ಕಲ್ಲು ಗಣಿಗಾರಿಕೆಗೂ ನಮಗೂ ಸಂಬಂಧವಿಲ್ಲ ಎನ್ನುವಂತೆ ಸುಮ್ಮನಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕಣ್ಣುಮುಚ್ಚಿ ಕುಳಿತ ಅರಣ್ಯ ಇಲಾಖೆ
ಉದಾಹರಣೆಗೆ ಮಾದಿಗರಹೊಸಹಳ್ಳಿ ಗ್ರಾಮದಲ್ಲಿ ಯಶೋಧಮ್ಮಲಕ್ಕೇಗೌಡ ಅವರು ಸ.ನಂ.25 ಕ್ಕೆ ಲೈಸೆನ್ಸ್ ಪಡೆದು ಅರಣ್ಯ ಇಲಾಖೆಗೆ ಸೇರಿದ ಸ.ನಂ .14 ರಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದೇ ರೀತಿ ಸಾಕಷ್ಟು ಕಡೆಗಳಲ್ಲಿ ಅರಣ್ಯ ಇಲಾಖೆಗೆ ಜಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಆದರೂ ಸಹ ಅರಣ್ಯ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಇದರಿಂದಾಗಿ ಹಲವಾರು ಮಂದಿ ಸರಕಾರಕ್ಕೆ ವಂಚಿಸುವ ಕೆಲಸವನ್ನು ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ಮಾಡುತ್ತಿದ್ದಾರೆ.
ಹಾಗಾಗಿ ತಾಲೂಕಿನಲ್ಲಿ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳದೇ ಅಕ್ರಮ ಕಲ್ಲುಗಣಿಗಾರಿಕೆಯನ್ನು ಮುಂದುವರೆಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಕೆ.ಜೆ.ಚಂದ್ರಶೇಖರ್ ಸಂಬಂಧಪಟ್ಟ ಅಧಿಕಾರಿಗಳು ಒತ್ತಾಯ ಮಾಡಿದ್ದಾರೆ.