ನಾನು ಮಂಡ್ಯ ಬಿಡಲ್ಲ, ಮಂಡ್ಯ ಸಹ ನನ್ನನ್ನು ಬಿಡಲ್ಲ: ಸುಮಲತಾ
ಮಂಡ್ಯ, ಜೂನ್ 28 : "ಮಂಡ್ಯವನ್ನು ನಾನು ಬಿಡುವುದಿಲ್ಲ , ಮಂಡ್ಯ ನನ್ನನ್ನು ಬಿಡುವುದಿಲ್ಲ" ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸುಮಲತಾ ಮಂಡ್ಯ ಬಿಟ್ಟು ಹೋಗುತ್ತಾರೆ ಎಂದು ಯಾರೋ ಮಾತನಾಡಿದರೆ ಅದು ಅವರ ಹಗಲುಗನಸು. ಮಂಡ್ಯ ಬಿಟ್ಟು ಹೋಗಲಿ ಎನ್ನುವ ಆಸೆ-ಕನಸು ಇದೆಯೋ ಗೊತ್ತಿಲ್ಲ. ಅವರವರೇ ಈ ರೀತಿ ಸೃಷ್ಠಿ ಮಾಡಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ" ಎಂದು ಹೇಳಿದರು.
ಸುಮಲತಾ ಬಿಜೆಪಿ ಸೇರ್ಪಡೆಗೆ ತಾಂತ್ರಿಕ ತೊಂದರೆ: ಸಿಪಿ ಯೋಗೀಶ್ವರ್
"ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ಒಬ್ಬೊಬ್ಬರಿಗೆ ಒಂದೊಂದು ವಿಷಯ ಬೇಕು. ಒಬ್ಬರನ್ನು ಟಾರ್ಗೆಟ್ ಮಾಡುವುದೇ ಇವರ ಸಾಧನೆಯಾಗಿದೆ. ಇವತ್ತಿಂದಲ್ಲ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ನನ್ನನ್ನು ಟಾರ್ಗೆಟ್ ಮಾಡಿದರೆ ಅದರಿಂದ ಅವರಿಗೆ ಪ್ರಚಾರ ಸಿಗುತ್ತದೆ. ನನ್ನ ಟಾರ್ಗೆಟ್ ಮಾಡಿ ದೊಡ್ಡ ಸಾಧನೆ ಮಾಡಿದ ಹಾಗೆ ಫೀಲ್ ಆಗುತ್ತಾರೆ. ಅದು ತಪ್ಪು. ಇದಕ್ಕೆ ಏನು ಉತ್ತರ ಕೊಡಬೇಕೋ ಜನರು ಕೊಡುತ್ತಾರೆ. ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
"ಭ್ರಷ್ಟಾಚಾರದಲ್ಲಿರುವವರಿಗೆ ಈ ರೀತಿಯ ಭಯ ಇದೆ. ನನಗೆ ಯಾವುದೇ ಭಯ ಇಲ್ಲ. ಜನ ಇಷ್ಟಪಡುತ್ತಿದ್ದಾರೆ. ನಾನು ಇದ್ದೇನೆ. ಈ ಸುಳ್ಳು, ಅಪಪ್ರಚಾರ, ಜಗಳ ಮಾಡುವುದು ಕೆಳ ಮಟ್ಟದ ರಾಜಕಾರಣ" ಎಂದು ಹೇಳಿದರು.
ಪಕ್ಷ ತೊರೆಯುವ ವದಂತಿ, ಸ್ಪಷ್ಟನೆ ಕೊಟ್ಟ ಶಾಸಕ ಶಿವಲಿಂಗೇ ಗೌಡ
"ಮೈಸೂರು ಸಂಸದ ಪ್ರತಾಪ ಸಿಂಹ ಮಂಡ್ಯಕ್ಕೆ ಬರುತ್ತಿರುವುದರ ಬಗ್ಗೆ ನನಗೇನೂ ಅವರೊಂದಿಗೆ ಶೀಥಲ ಸಮರ ಇಲ್ಲ . ಅವರ ಕೆಲಸ ಅವರು ಮಾಡುತ್ತಾರೆ, ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ನನಗೆ ಯಾರೊಂದಿಗೂ ಶೀಥಲ ಸಮರ ಇಲ್ಲ . ನನಗೆ ಕ್ರೆಡಿಟ್ ತೆಗೆದುಕೊಳ್ಳುವ ಅನಿವಾರ್ಯತೆಯೂ ಇಲ್ಲ. ಎಲ್ಲಾ ಕೆಲಸವನ್ನೂ ಅವರೇ ಮಾಡಿಸುತ್ತಿದ್ದಾರೆ ಎಂದರಷ್ಟೇ ನನಗೆ ಬೇಸರ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
"ಹೆದ್ದಾರಿ ವಿಚಾರದಲ್ಲಿ ನನ್ನ ಜನರಿಗೆ ತೊಂದರೆ ಆದರೆ ನಾನು ಹೋರಾಟ ಮಾಡುತ್ತೇನೆ. ನನ್ನಿಂದ ಯಾವುದೇ ಕಾಮಗಾರಿಗಳು ಡೀಲ್ ಆಗಿಲ್ಲ. ಕೆಎಚ್ಬಿ ಕಾಲೋನಿ ರಸ್ತೆಯ ಬಗ್ಗೆ ಈ ಹಿಂದೆ ಅಧಿಕಾರಿಗಳಿಗೆ ತಿಳಿಸಿದ್ದೆ. ದಿಶಾ ಸಭೆಯಲ್ಲಿ ಈ ರಸ್ತೆ ಸರಿಪಡಿಸಲು ಸೂಚನೆ ನೀಡಿದ್ದೆ . ಆ ಕಾಮಗಾರಿ ಪೂರ್ಣವಾಗುವಾಗ ಅವರು ಅಲ್ಲಿಗೆ ಬಂದಿದ್ದಾರೆ. ಅಲ್ಲಿ ಹೋಗಿ ಫೋಟೋ ತೆಗೆಸಿಕೊಂಡು ಹಾಕುವುದರಿಂದ ಏನೂ ಆಗಲ್ಲ. ಅವರಿಂದಲೇ ಕೆಲಸ ಆಯ್ತು ಅಂದರೆ ನಾನು ಏನು ಮಾಡುವುದಕ್ಕೂ ಆಗುವುದಿಲ್ಲ. ನಾನು ಎಲ್ಲವನ್ನೂ ಫೋಟೋ ತೆಗೆದುಕೊಂಡು ಮಾಧ್ಯಮಗಳ ಮುಂದೆ ಬರುವುದಕ್ಕೂ ಆಗುವುದಿಲ್ಲ . ಮಾಧ್ಯಮಗಳ ಮುಂದೆ ಬಂದು ಕುಳಿತರೆ ಕೆಲಸ ಆಗುವುದಿಲ್ಲ" ಎಂದು ತಿಳಿಸಿದ್ದಾರೆ.