ನಾನು ಚುನಾವಣೆ ಎದುರಿಸುವುದು ಮಂಡ್ಯದಿಂದ ಮಾತ್ರ: ಸುಮಲತಾ
ಮಂಡ್ಯ, ಫೆಬ್ರವರಿ 28: ನಾನು ಚುನಾವಣೆ ಎದುರಿಸುವುದಾದರೆ ಅದು ಮಂಡ್ಯದಿಂದ ಮಾತ್ರ ಎಂದು ಸುಮಲತಾ ಅಂಬರೀಶ್ ಅವರು ಸ್ಪಷ್ಟಪಡಿಸಿದ್ದಾರೆ. ಸುಮಲತಾ ಅವರ ಈ ಹೇಳಿಕೆ ಜೆಡಿಎಸ್-ಕಾಂಗ್ರೆಸ್ಗೆ ಆತಂಕ ತಂದಿದೆ.
ಇಂದು ಮಂಡ್ಯದ ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಅವರು ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.
ಸುಮಲತಾ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್ನಲ್ಲಿ ಗಾಳಿ ಸುದ್ದಿ ಹರಿದಾಡುತ್ತಿದ್ದು, ಕೆಪಿಸಿಸಿ ನಾಯಕರು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದಾರೆ. ಆದರೆ ಇದು ಸುಮಲತಾ ಅವರಿಗೆ ಸುತಾರಾಂ ಇಷ್ಟವಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಲ್ಲಿನ ಜನ ಅಂಬರೀಶ್ ಅವರನ್ನು ಎರಡು ಬಾರಿ ಸಚಿವರನ್ನಾಗಿ, ಸಂಸದರನ್ನಾಗಿ ಮಾಡಿದ್ದಾರೆ. ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನನಗೆ ಅಪಾರ ನಂಬಿಕೆ ಇದೆ ಹಾಗಾಗಿ ನಾನು ಚುನಾವಣೆಗೆ ನಿಂತರೆ ಇಲ್ಲಿಂದ ಮಾತ್ರ ಎಂದು ಸುಮಲತಾ ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ಗೆ ಇಕ್ಕಟ್ಟು
ಸುಮಲತಾ ಅವರ ಈ ಹೇಳಿಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷವನ್ನು ಸಂಕಟಕ್ಕೆ ಸಿಲುಕಿಸಿದೆ. ಸುಮಲತಾ ಅವರನ್ನು ಮನವೊಲಿಸುವುದಾಗಿ ಈಗಾಗಲೇ ಕಾಂಗ್ರೆಸ್ನ ಹಿರಿಯ ಮುಖಂಡರು ಹೇಳಿದ್ದಾರೆ. ಆದರೆ ಸುಮಲತಾ ಅವರು ತಾವು ಮಂಡ್ಯದಿಂದಲೇ ಕಣಕ್ಕಿಳಿಯಲು ನಿರ್ಧರಿಸಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ.
ಹಾಲಿ ಸಂಸದರ ಬದಲಾವಣೆ ಇಲ್ಲ
ಮೈತ್ರಿ ಸೂತ್ರದ ಪ್ರಕಾರ ಯಾವ ಕ್ಷೇತ್ರದಲ್ಲಿ ಪ್ರಸ್ತುತ ಯಾವ ಪಕ್ಷದ ಸಂಸದ ಅಧಿಕಾರದಲ್ಲಿದ್ದಾರೋ ಅವರಿಗೆ ಟಿಕೆಟ್ ಕೊಡಬೇಕು ಎಂಬುದು ನಿಶ್ಚಯವಾಗಿದೆ. ಮಂಡ್ಯದಲ್ಲಿ ಈಗ ಜೆಡಿಎಸ್ ಸಂಸದರು ಇದ್ದು ಈ ಮೈತ್ರಿಯ ಸೀಟು ಹಂಚಿಕೆ ಸೂತ್ರದ ಪ್ರಕಾರ ಅವರಿಗೆ ಸೀಟು ಸಿಗಬೇಕಿದೆ. ಆದರೆ ಸುಮಲತಾ ಕಾಂಗ್ರೆಸ್ನಿಂದ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.
ಕಾಂಗ್ರೆಸ್ ನಾಯಕರು ಇಕ್ಕಟ್ಟಿನಲ್ಲಿ
ಸುಮಲತಾ ಅವರ ನಿರ್ಧಾರದಿಂದ ಕಾಂಗ್ರೆಸ್ ನಾಯಕರು ಅಡ್ಡಕತ್ತರಿಯಲ್ಲಿ ಸಿಲುಕಿದ್ದಾರೆ. ಸುಮಲತಾ ಅವರಿಗೆ ಮಂಡ್ಯ ಟಿಕೆಟ್ ನೀಡಬೇಕೆಂಬ ಹಂಬಲವಿದ್ದರೂ ಸಹ ಅವರು ಏನೂ ಮಾಡದ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಸುಮಲತಾ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಲು ತೀರ್ಮಾನಿಸಲಾಗಿದೆ. ಆದರೆ ಇದಕ್ಕೆ ಸುಮಲತಾ ಅವರು ಒಪ್ಪುವುದು ಬಹುತೇಕ ಕಷ್ಟ.
ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕೆ?
ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಬೇಕು ಎಂಬುದು ಕುಮಾರಸ್ವಾಮಿ ಆಸೆಯಾಗಿದೆ. ಆದರೆ ಸುಮಲತಾ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿದರೆ ಮಗನಿಗೆ ಸಮಸ್ಯೆ ಆಗುತ್ತದೆ ಆದ್ದರಿಂದ ಸುಮಲತಾ ವಿರುದ್ಧ ಕುಮಾರಸ್ವಾಮಿ ಗರಂ ಆಗಿದ್ದಾರೆ. ಮಂಡ್ಯಕ್ಷೇತ್ರದಿಂದ ಸುಮಲತಾ ಅವರನ್ನು ಪಕ್ಕಕ್ಕೆ ಸರಿಸಿ ಎಂದು ಕುಮಾರಸ್ವಾಮಿ ಕಾಂಗ್ರೆಸ್ ಮುಖಂಡರನ್ನು ಕೇಳಿದ್ದಾರೆ.