'ಕುಮಾರಸ್ವಾಮಿಯವರಿಗೆ ಯಾರೆಲ್ಲಾ ಮೋಸ ಮಾಡಿದ್ದಾರೆ ಗೊತ್ತಾ?'
Recommended Video
ಮಂಡ್ಯ, ಮೇ.19:ಮಂಡ್ಯ ಲೋಕಸಭಾ ಚುನಾವಣೆ ವೇಳೆ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸದೆ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರನ್ನು ಕಾಂಗ್ರೆಸ್ನ ಮುಖಂಡರು ಬೆಂಬಲಿಸಿದ್ದಾರೆ ಎಂದು ಜೆಡಿಎಸ್ ನಾಯಕರು ಆರೋಪಿಸುತ್ತಿರುವ ಬೆನ್ನಲ್ಲೇ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪಿ.ಎಂ.ನರೇಂದ್ರಸ್ವಾಮಿ ಅವರು ಕೊಟ್ಟ ಈ ಹೇಳಿಕೆ ಎಲ್ಲರಲ್ಲೂ ಕುತೂಹಲ ಕೆರಳಿಸುವಂತೆ ಮಾಡಿದೆ.
ಲೋಕಸಭಾ ಚುನಾವಣೆ ಸಮಯದಲ್ಲಿ ಜೆಡಿಎಸ್ನ ಯಾವ್ಯಾವ ನಾಯಕರು, ಯಾವ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣೆ ಮಾಡಿದರು, ಮಾಡಲಿಲ್ಲ ಎನ್ನುವುದಕ್ಕೆ ನಮ್ಮ ಬಳಿ ಬಹಳಷ್ಟು ಸಾಕ್ಷಿಗಳಿವೆ. ಸಾಕ್ಷಿಗಳು ಬೇಕಿದ್ದರೆ ಕೊಡುವುದಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಹೇಳಿ ಕುತೂಹಲ ಕೆರಳಿಸುವಂತೆ ಮಾಡಿದ್ದಾರೆ.
ಮೇ 23ರಂದು ಮಂಡ್ಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ
ಇದೀಗ ಪಿ.ಎಂ.ನರೇಂದ್ರಸ್ವಾಮಿ ಅವರ ಹೇಳಿಕೆ ಮಂಡ್ಯ ಜಿಲ್ಲಾ ರಾಜಕೀಯದಲ್ಲಿ ಒಂದಷ್ಟು ಚರ್ಚೆ ಮತ್ತು ಬೆಳವಣಿಗೆಗಳಿಗೆ ಕಾರಣವಾಗುವ ಸಾಧ್ಯತೆಯಿದ್ದು, ಇದು ನಿಜನಾ ಒಂದು ವೇಳೆ ನಿಜವೇ ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೆಡಿಎಸ್ ನಾಯಕರನ್ನು ಸುಮ್ಮನೆ ಬಿಡುತ್ತಾರಾ? ಮುಂತಾದ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ.
ಇಷ್ಟಕ್ಕೂ ಪಿ.ಎಂ.ನರೇಂದ್ರಸ್ವಾಮಿ ಅವರೇನು ಮಾತನಾಡಿದರು ಎಂದರೆ, ಚುನಾವಣೆ ವೇಳೆ ಜೆಡಿಎಸ್ ಪಕ್ಷದ ಯಾವ ನಾಯಕರು ಯಾರ ಪರವಾಗಿದ್ದರು ಎನ್ನುವುದು ಈಗಾಗಲೇ ಚರ್ಚೆಗೆ ಬಂದಿದೆ. ಕುಮಾರಸ್ವಾಮಿ ಅವರಿಗೆ ಯಾರೆಲ್ಲಾ ಮೋಸ ಮಾಡಿದ್ದಾರೆ, ದೇವೇಗೌಡರ ಹೆಸರೇಳುತ್ತಿದ್ದವರು ಯಾರ್ಯಾರು ಎಲ್ಲೆಲ್ಲಿ, ಹೇಗೆಲ್ಲಾ ದ್ರೋಹ ಮಾಡಿದರು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ನ ಪರಾಜಿತ ಶಾಸಕರೆಲ್ಲರೂ ತಟಸ್ಥವಾಗಿದ್ದೆವು. ಜೆಡಿಎಸ್ ಅಭ್ಯರ್ಥಿಗಳೆಲ್ಲರೂ ಕುಮಾರಸ್ವಾಮಿ ಹಾಗೂ ದೇವೇಗೌಡರ ಹೆಸರಿನಲ್ಲಿ ಗೆದ್ದಿದ್ದಾರೆ. ಅಲ್ಲದೆ, ಲೋಕಸಭೆ ಚುನಾವಣೆ ವೇಳೆ ನಾವು ಯಾವುದೇ ವೇದಿಕೆ ಹತ್ತಲಿಲ್ಲ, ಪ್ರಚಾರ ಮಾಡಲಿಲ್ಲ, ಯಾರ ಪರವಾಗಿ ಭಾಷಣ ಮಾಡಲೂ ಇಲ್ಲ, ಯಾವುದೇ ಮಾಧ್ಯಮಗಳೆದುರು ಬಂದು ಪ್ರತಿಕ್ರಿಯೆ ಕೊಟ್ಟಿಲ್ಲ. ನಾವು ತಟಸ್ಥರಾಗಿ ಉಳಿದಿದ್ದೆವು ಎನ್ನುವುದಕ್ಕೆ ಇದಕ್ಕಿಂತ ಇನ್ನೇನು ತೋರಿಸಬೇಕು ಎಂದು ನರೇಂದ್ರಸ್ವಾಮಿ ಪ್ರಶ್ನಿಸಿದ್ದಾರೆ.