ನಾನೂ ಸೇನೆಗೆ ಸೇರಿ ಉಗ್ರರ ರುಂಡ ಚೆಂಡಾಡುತ್ತೇನೆ:ಹುತಾತ್ಮ ಗುರು ಪತ್ನಿ ಕಲಾವತಿ
ಮಂಡ್ಯ, ಫೆಬ್ರವರಿ 17: ಇಡೀ ದೇಶವೇ ಸೆಲ್ಯೂಟ್ ಹೊಡೆಯಬೇಕಾದಂತಹ ಕೆಲಸ ನನ್ನ ಗಂಡ ಮಾಡಿದ್ದಾರೆ. ಅವರು ಬದುಕಿದ್ದಾಗ ಮುಂದಿನ ಹತ್ತುವರ್ಷಗಳ ಕಾಲ ಸೇನೆಯಲ್ಲಿರುತ್ತೇನೆ ಎಂದಿದ್ರು. ಆದರೆ ಅವರ ಆಸೆ ಈಡೇರಲಿಲ್ಲ. ಅವರ ಕನಸನ್ನು ನಾನು ಈಡೇರಿಸುತ್ತೇನೆ. ನಾನು ಸೈನ್ಯಕ್ಕೆ ಸೇರಿ ಪಾಪಿ ಉಗ್ರರ ರುಂಡ ಚೆಂಡಾಡ್ತಿನಿ ಎಂದು ಪುಲ್ವಾಮದಲ್ಲಿ ವೀರ ಯೋಧನಾಗಿ ಮಡಿದ ಗುರು ಪತ್ನಿ ಕಲಾವತಿ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.
ಶನಿವಾರ (ಫೆ.16) ಪತಿಯ ಮೃತದೇಹಕ್ಕಾಗಿ ಕಾಯುತ್ತಿರುವಾಗ ಬಿಕ್ಕಿ - ಬಿಕ್ಕಿ ಅಳುತ್ತಾ ಕಲಾವತಿ ಆಡಿದ ಈ ಮಾತುಗಳು ಎಂಥಹವರನ್ನು ಸೇನೆಗೆ ಸೇರುವಂತೆ ತುಡಿತಕೊಳ್ಳಗಾಗುವಂತೆ ಮಾಡಿತು. "ನನ್ನ ಗಂಡನಿಗೆ ಪೊಲೀಸ್ ಡ್ರೆಸ್ ಅಂದ್ರೆ ತುಂಬಾ ಇಷ್ಟ. ಕೊನೆಗೂ ಅವರಿಷ್ಟದಂತೆ ಆ ಪೊಲೀಸ್ ಡ್ರೆಸ್ ಹಾಕೊಂಡೆ ಪ್ರಾಣ ಕೊಟ್ರು. ದೇಶಕ್ಕಾಗಿ ಹುಟ್ಟಿ, ದೇಶಕ್ಕಾಗಿ ಹೋರಾಡಿ, ದೇಶಕ್ಕಾಗಿ ಪ್ರಾಣ ಬಿಟ್ಟರು ನನ್ನ ಗಂಡ ಎಂಬ ಹೆಮ್ಮೆ ಇದೆ " ಎಂದು ಕಣ್ಣೀರಲ್ಲೇ ಪತಿಯ ಭಾವಚಿತ್ರದ ಮುಂದೆ ದುಃಖ ಉಮ್ಮಳಿಸಿ ಬರುವಂತೆ ರೋಧಿಸುತ್ತಿದ್ದರು.
ಸರಕಾರಿ ಗೌರವದೊಂದಿಗೆ ಕೆ.ಎಂ.ದೊಡ್ಡಿಯಲ್ಲಿ ಹುತಾತ್ಮ ಯೋಧ ಗುರು ಅಂತ್ಯಕ್ರಿಯೆ
"ಮೊನ್ನೆ ಕೆಲಸಕ್ಕೆ ಹೋಗುವಾಗಲೂ ನಾನು ಡ್ಯೂಟಿಗೆ ಹೋಗ್ತಿನಿ. ನನಗೇನು ಆಗೊಲ್ಲ ಎನ್ನುತ್ತಿದ್ದರು. ಟಿವಿಯಲ್ಲಿ ಯಾರಾದರೂ ಯೋಧರು ಪ್ರಾಣ ಬಿಟ್ರು ಎಂಬ ಸುದ್ದಿ ಕೇಳಿ ಫೋನ್ ಮಾಡಿದ್ರೆ ಸಾಕು, ನನಗೆ ಆ ವಿಚಾರವನ್ನೆಲ್ಲಾ ಹೇಳ್ಬೇಡಿ. ನನ್ನ ಮುಂದೆ ಅಳಬೇಡಿ ಅಂತಿದ್ರು. ಅಲ್ಲಿ ಏನಾಗುತ್ತೆ ಅನ್ನೋದನ್ನು ಯಾವುದೇ ಕಾರಣಕ್ಕೂ ಹೇಳ್ತಿರಲಿಲ್ಲ. ನಾವು ಭಯಪಡ್ತಿವಿ ಅಂತ ಯಾವುದನ್ನು ಹೇಳುತ್ತಿರಲಿಲ್ಲ" ಎಂದು ಕಲಾವತಿ ರೋಧಿಸಿದರು.
ಇನ್ನೊಬ್ಬ ಮಗನನ್ನೂ ಸೈನ್ಯಕ್ಕೆ ಕಳುಹಿಸುವೆ, ಆದರೆ ಪಾಕಿಸ್ತಾನವನ್ನು ಬಿಡಬೇಡಿ
"ಅವರು ಫೋನ್ ಮಾಡಿದಾಗ ಕೊನೆಯದಾಗಿ ಏನೋ ಹೇಳೋಕೆ ಬಂದ್ರು ಗೊತ್ತಾಗಲಿಲ್ಲ. ಆಗ ಫೋನ್ ರಿಸೀವ್ ಮಾಡಲಿಲ್ಲ. ನಾನು ದೇವರು ಪೂಜೆ ಮಾಡ್ತಿದ್ದೆ. ಆದರೆ ದೇವರು ಕಣ್ಣು ಬಿಡದೇ ನನ್ನ ದೇವರನ್ನೇ ಕಿತ್ತುಕೊಂಡು ಬಿಟ್ಟ. ಬುಧವಾರ ಸಾಯಂಕಾಲ ಮಾತನಾಡಿದೆ. ಇನ್ನೆರಡು ತಿಂಗಳಿಗೆ ನಮ್ಮ ಮದುವೆಯಾದ ವರ್ಷ ಆಗುತ್ತೆ. ಬರ್ತಿನಿ ಎಂದು ಹೇಳಿದ್ರು. ನನಗೆ ಧೈರ್ಯ ತುಂಬುವವರೇ ಇಲ್ಲ" ಎಂದು ಅಳುವಾಗ ಮಮ್ಮಲ ಮರುಗುವಂತಿತ್ತು ಎದುರಿಗಿರುವವರ ಪರಿಸ್ಥಿತಿ.
ಹುತಾತ್ಮ ಯೋಧ ಗುರು ಕುಟುಂಬದಲ್ಲಿ ಸ್ಮಶಾನ ಮೌನ
"ಅವರನ್ನು ಕೊಂದವರನ್ನು ಬಿಡ್ಬೇಡಿ. ನನ್ನ ಗಂಡನನ್ನು ಹೆಂಗೆ ಸಾಯ್ಸಿದ್ರೋ ಹಂಗೇ ಸಾಯ್ಸಿ. ನರೇಂದ್ರ ಮೋದಿಯವರು ಪಾಕ್ ಅನ್ನು ಹೊಡೆದು ಬಿಸಾಕಿ ಅಂತಾ ಆರ್ಡರ್ ಮಾಡ್ಲಿ. ಆ ತರ ಮಾಡಿದ್ರೆ, ನಮ್ಮ ಸೈನಿಕರಿಗೆ ನೆಮ್ಮದಿ ಸಿಗುತ್ತೆ. ನನ್ನನ್ನು ಸೇನೆಗೆ ಸೇರ್ಸಿಕೊಳ್ಳಿ. ನನ್ನ ಗಂಡನಿಗೆ ಹೊಡೆದವರಿಗೆ ಸುಮ್ನೆ ಬಿಡೋಲ್ಲ. ರುಂಡಾ ಚೆಂಡಾಡ್ತಿನಿ" ಎಂದು ಪಾಪಿ ಪಾಕ್ ಗೆ ಹಿಡಿ ಶಾಪ ಹಾಕಿದರು ಕಲಾವತಿ.