ಮತ್ತೆ ಮುಖ್ಯಮಂತ್ರಿಯಾಗುವ ಮಾತನಾಡಿದ ಸಚಿವ ಉಮೇಶ್ ಕತ್ತಿ!
ಮಂಡ್ಯ, ಆಗಸ್ಟ್, 09: "ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಕೇವಲ ಊಹಾಪೋಹ ಅಷ್ಟೇ. ಮುಂದಿನ ವಿಧಾನಸಭಾ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸುತ್ತೇವೆ" ಎಂದು ಸಚಿವ ಉಮೇಶ್ ಕತ್ತಿ ಮಳವಳ್ಳಿಯಲ್ಲಿ ಹೇಳಿದರು.
ತಾಲೂಕಿನ ಶಿವನಸಮುದ್ರದ ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತ ಹಾಗೂ ಜಲವಿದ್ಯುತ್ ಸ್ಥಾವರ ವೀಕ್ಷಣೆ ಮಾಡಿ ನಂತರ ಮಾತನಾಡಿದ ಅವರು, "ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹ ಅಷ್ಟೇ. ಯಡಿಯೂರಪ್ಪನವರ ನಂತರ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ" ಎಂದರು.
ಮಂಡ್ಯ; ಸೈಲಿಂಗ್ ಅಂಡ್ ಕೈಟ್ ಬೋರ್ಡ್ ಚಾಂಪಿಯನ್ಶಿಪ್ ಆರಂಭ
"ನಾನು ಅವರ ಸರ್ಕಾರದಲ್ಲಿ ಸಚಿವನಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಆ ವೇಳೆ ನಾನು ಸಹ ಮುಖ್ಯಮಂತ್ರಿ ಸ್ಥಾನದ ಅಕಾಂಕ್ಷಿ" ಎಂದು ತಿಳಿಸಿದರು.
ಮುಖ್ಯಮಂತ್ರಿ ಆಗುವ ಹಂಬಲ: "ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ನಮ್ಮ ಪಕ್ಷಕ್ಕೆ ಮತ್ತೆ ಬಹುಮತ ಬರಲಿದ್ದು, ಆಗ ಮುಖ್ಯಮಂತ್ರಿ ಸ್ಥಾನ ನೀಡಲು ವರಿಷ್ಠರ ಬಳಿ ಮನವಿ ಮಾಡುತ್ತೇನೆ. 8 ಬಾರಿ ಶಾಸಕನಾಗಿದ್ದೇನೆ, ವಿವಿಧ ಇಲಾಖೆಗಳಲ್ಲಿ ಸಚಿವನಾಗಿ ಕಾರ್ಯನಿರ್ವಹಿಸಿರುವೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ನಾಡಿನ ಜನರ ಸೇವೆ ಮಾಡುವ ಹಂಬಲದಲ್ಲಿದ್ದೇನೆ" ಎಂದರು.
"ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪಕ್ಷದ ಹಿರಿಯ ನಾಯಕರಾಗಿದ್ದು, ಅವರ ಮಾರ್ಗದರ್ಶನ ನಮಗೆ ಅಗತ್ಯವಿದೆ. ಅವರನ್ನು ಪಕ್ಷ ಎಂದಿಗೂ ಕಡೆಗಣಿಸುವುದಿಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದರು.
ಕಂದಾಯ ಇಲಾಖೆಗೆ ನೀಡಲು ತೀರ್ಮಾನ; "ರಾಜ್ಯದಲ್ಲಿನ 9 ಲಕ್ಷ 94 ಸಾವಿರ ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶದ ಪೈಕಿ, 3 ಲಕ್ಷದ 30, 000 ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶವನ್ನು ಇಲಾಖೆಗೆ ತೆಗೆದುಕೊಳ್ಳುವ ಬಗ್ಗೆ ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಉಳಿದ 6 ಲಕ್ಷದ 60 ಸಾವಿರ ಹೆಕ್ಟೇರ್ ಡೀಮ್ಡ್ ಪ್ರದೇಶವನ್ನು ಕಂದಾಯ ಇಲಾಖೆಗೆ ನೀಡಲು ಮುಂದಾಗಿದ್ದೇವೆ" ಎಂದರು.
ಮೇಕೆದಾಟು ಯೋಜನೆ ಅತ್ಯಗತ್ಯ: "ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಜನರ ಅನುಕೂಲಕ್ಕಾಗಿ ಮೇಕೆದಾಟು ಯೋಜನೆಯ ಅವಶ್ಯಕತೆ ಇದ್ದು, ಇದನ್ನು ಜಾರಿ ಮಾಡಲು ತಮಿಳುನಾಡು ಸರ್ಕಾರ ಅವಕಾಶ ಮಾಡಿಕೊಡಬೇಕು. ಮೇಕೆದಾಟು ಯೋಜನೆ ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದರು.
Recommended Video