ಮಂಡ್ಯ; ಮರ ಏರಿ ಕೂತ ದೇವಿ ಬಲಿಗೆ ತಂದಿದ್ದ ಕೋಳಿ, ಹೈಡ್ರಾಮ!
ಮಂಡ್ಯ, ಮೇ 11; ಪುರಾತನ ಕಾಲದಿಂದಲೂ ಗ್ರಾಮೀಣ ಪ್ರದೇಶದಲ್ಲಿ ದೇವರಿಗೆ ಹರಕೆ ಹೊತ್ತುಕೊಳ್ಳುವ ಪದ್ಧತಿ ಕಾಣಬಹುದು. ಭಕ್ತರ ಇಷ್ಟಾರ್ಥಗಳನ್ನು ದೇವಿ ನೇರವೇರಿಸಿದಾಗ ಹರಕೆ ತೀರಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ.
ಕೋಳಿ, ಕುರಿಯನ್ನು ದೇವರಿಗೆ ಬಲಿಕೊಟ್ಟು ಹರಕೆ ತೀರಿಸುವ ಪದ್ಧತಿಯೂ ಇದೆ. ಆದರೆ ಹರಕೆ ತೀರಿಸಲು ತಂದಿದ್ದ ಕೋಳಿ ಮರ ಏರಿ ಕುಳಿತ ಘಟನೆ ಮಂಡ್ಯದಲ್ಲಿ ನಡೆದಿದೆ. ದೇವಿ ಬಲಿಗಾಗಿ ತಂದಿದ್ದ ಕೋಳಿ ತಪ್ಪಿಸಿಕೊಂಡು ಸಮೀಪದ ಮರ ಏರಿದ್ದರಿಂದ ಭಕ್ತರು ಮರ ನೋಡುತ್ತಾ ನಿಂತರು.
ಮಂಡ್ಯ ನಗರದ ನೂರಡಿ ರಸ್ತೆಯಲ್ಲಿರುವ ಶ್ರೀ ಬಿಸಿಲು ಮಾರಮ್ಮ ದೇವಾಲಯದ ಎದುರಿನ ಮರ ಏರಿದ ನಾಟಿ ಕೋಳಿ ಹುಂಜವನ್ನು ಕೆಳಗಿಳಿಸಲು ನಡೆದ ಪ್ರಯತ್ನಗಳು ವಿಫಲವಾಯಿತು.
ಘಟನೆ ವಿವರ; ಗಾಂಧಿನಗರ ಬಡಾವಣೆಯಲ್ಲಿ ಶ್ರೀಕಾಳಮ್ಮ ದೇವರ ಹಬ್ಬ ಆಚರಿಸಲಾಗುತ್ತಿತ್ತು. ಮಹಿಳೆಯರೆಲ್ಲರೂ ಆರತಿಯೊಂದಗೆ ನೂರಡಿ ರಸ್ತೆಯಲ್ಲಿರುವ ಬಿಸಿಲು ಮಾರಮ್ಮನ ದೇವಾಲಯಕ್ಕೆ ಬಂದಿದ್ದರು. ಕೆಲವರು ಕೋಳಿಗಳನ್ನು ಬಲಿ ನೀಡಲು ತಂದಿದ್ದರು.
ಭಕ್ತರೊಬ್ಬರು ಎರಡು ನಾಟಿ ಕೋಳಿ ಹುಂಜಗಳನ್ನು ಸಹ ತಂದಿದ್ದು, ಇದರಲ್ಲಿ ಒಂದು ಕೋಳಿಯನ್ನು ಬಿಸಿಲು ಮಾರಮ್ಮನಿಗೆ ಬಲಿ ನೀಡಿದರು. ಮತ್ತೊಂದು ಕೋಳಿಯನ್ನು ಬಲಿ ನೀಡಲು ಮುಂದಾಗುತ್ತಿದ್ದಂತೆ ಅದು ತಪ್ಪಿಸಿಕೊಂಡಿತು. ದೇವಾಲಯದ ಎದುರಿಗೆ ಇರುವ ಮರವೇರಿತು.
ಮರದಿಂದ ಕೋಳಿ ಇಳಿಸಲು ಕಸರತ್ತು ನಡೆಯಿತು. ಮರದ ಮೇಲೆ ಏರಿ ಕೋಳಿ ಹಿಡಿಯಲು ಯತ್ನಿಸಿದಸಿದರು. ಆದರೆ ಒಂದು ರೆಂಬೆಯಿಂದ ಮತ್ತೊಂದು ರೆಂಬೆಗೆ ಹಾರುತ್ತಾ ಮರದ ಮೇಲಕ್ಕೆ ಹೋಗುತ್ತಿತ್ತು. ಈ ನಡುವೆ ಮಳೆ ಬಂದ ಕಾರಣ ಮರ ಏರಿದವರೆಲ್ಲರೂ ಕೆಳಗಿಳಿದು ಮಳೆಯಿಂದ ತಪ್ಪಿಸಿಕೊಂಡರು.
ಮಳೆ ಸುರಿದರೂ ಕೋಳಿ ಮಾತ್ರ ಮರದ ಮೇಲಿನಿಂದ ಎಲ್ಲವನ್ನು ನೋಡುತ್ತಾ ಅಲ್ಲೇ ಉಳಿಯಿತು. ಹಳ್ಳಿಯಲ್ಲಿ ಕೋಳಿ ಸಾಕಿದ್ದವರನ್ನು ಸ್ಥಳಕ್ಕೆ ಕರೆಯಿಸಿ ಕೆಳಗಿಳಿಸಲು ಯತ್ನಿಸಲಾಯಿತು. ಆದರೂ ಪ್ರಯತ್ನ ಫಲಕೊಡಲಿಲ್ಲ. ಅಂತಿಮವಾಗಿ ಭಕ್ತರು ಮನೆ ಕಡೆ ಹೆಜ್ಜೆ ಹಾಕಿದರು.
Recommended Video