ಕೆ.ಆರ್.ಪೇಟೆಯಲ್ಲಿ ಗ್ರಾ.ಪಂ ಪ್ರವೇಶ ಮಾಡಿದ ಪತಿ-ಪತ್ನಿ
ಮಂಡ್ಯ, ಜನೆವರಿ 1: ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶವು ಪ್ರಕಟವಾಗಿದ್ದು, ಶೀಳನೆರೆ ಗ್ರಾಮ ಪಂಚಾಯಿತಿಗೆ ಶೀಳನೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪತಿ ಹಾಗೂ ನವಿಲುಮಾರನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪತ್ನಿ ಗೆಲುವು ಸಾಧಿಸುವ ಮೂಲಕ ಪತಿ-ಪತ್ನಿ ಗ್ರಾಮ ಪಂಚಾಯಿತಿಗೆ ಪ್ರವೇಶ ಮಾಡಿರುವುದು ವಿಶೇಷವಾಗಿದೆ.
ಇಲ್ಲಿನ 33 ಗ್ರಾಮ ಪಂಚಾಯಿತಿಗಳ 587 ಸ್ಥಾನಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಈಗಾಗಲೇ 48 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರೆ, ಬುಧವಾರ ಅಧಿಕೃತವಾಗಿ ಉಳಿದ 539 ಸ್ಥಾನಗಳ ಫಲಿತಾಂಶವನ್ನು ಡಿ.೩೦ ರಂದು ಪ್ರಕಟಿಸಲಾಯಿತು.
ಜೊತೆಯಾಗಿ ಗ್ರಾಮ ಪಂಚಾಯತಿ ಪ್ರವೇಶ ಮಾಡಿದ ಅತ್ತೆ-ಸೊಸೆ
ಶೀಳನೆರೆ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಶೀಳನೆರೆ ಕ್ಷೇತ್ರದಿಂದ ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೀಳನೆರೆ ಸಿದ್ಧೇಶ್ ಮತ್ತು ನವಿಲುಮಾರನಹಳ್ಳಿ ಕ್ಷೇತ್ರದಿಂದ ಸಿದ್ಧೇಶ್ ಅವರ ಪತ್ನಿ ಗಾಯತ್ರಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಪತಿ-ಪತ್ನಿ ಗ್ರಾಮ ಪಂಚಾಯಿತಿಗೆ ಪ್ರವೇಶ ಪಡೆದಿದ್ದಾರೆ.
ಇನ್ನು ಕೆ.ಆರ್.ಪೇಟೆ ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಶಿವರಾಮೇಗೌಡ, ಜಿಲ್ಲಾ ಮಾನವ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಕರ್ತೇನಹಳ್ಳಿ ಸುರೇಶ್, ಹರಿಹರಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬೊಮ್ಮೇನಹಳ್ಳಿ ಹರ್ಷ, ಹರಹರಪುರ ಹರೀಶ್, ಮಂಡ್ಯ ಸುದ್ದಿ ದಿನಪತ್ರಿಕೆಯ ಸಂಪಾದಕ ಎಸ್.ಕೆ.ಬಾಲಕೃಷ್ಣ, ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಆರ್.ಶ್ರೀನಿವಾಸ್ ಸಜ್ಜನ್, ಕಾಮನಹಳ್ಳಿ ಮಂಜುನಾಥ್ ಪತ್ನಿ ಅನುರಾದ, ಶೀಳನೆರೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಕೆ.ಪ್ರಕಾಶ್, ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೀಳನೆರೆ ಸಿದ್ಧೇಶ್ ಮತ್ತು ಎಪಿಎಂಸಿ ನಿರ್ದೇಶಕ ಹೊಸೂರು ಸ್ವಾಮಣ್ಣ ಗೆದ್ದ ಪ್ರಮುಖರಾಗಿದ್ದಾರೆ.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಪ್ಪನಹಳ್ಳಿಅರುಣ್, ತಾಲೂಕು ಬಿಎಸ್ಪಿ ಘಟಕದ ಮಾಜಿ ಅಧ್ಯಕ್ಷ ಹರಿಹರಪುರ ಶಿವಕುಮಾರ್, ಬಿಜೆಪಿ ಪಕ್ಷದ ಮಹಿಳಾ ನಾಯಕಿ ಶೀಳನೆರೆ ಸುಮಾ, ಸಚಿವ ನಾರಾಯಣಗೌಡರ ಅಣ್ಣನವರ ಅಳಿಯ ಪಿಎಲ್ಡಿ ಬ್ಯಾಂಕಿನ ನಿರ್ದೇಶಕ ಕೈಗೋನಹಳ್ಳಿ ಕುಮಾರ್, ಲಾಟರಿಯಲ್ಲಿ ಪರಾಭವಗೊಂಡ ಮಹಿಳಾ ಹೋರಾಟಗಾರ್ತಿ ವನಜಾಕ್ಷಿ ಸೋತವರ ಪಟ್ಟಿಯಲ್ಲಿದ್ದಾರೆ.
ಬೂಕನಕೆರೆ ಗ್ರಾಮ ಪಂಚಾಯಿತಿಯ ಬೊಮ್ಮೇಗೌಡನ ಹೊಸಕೊಪ್ಪಲು ಗ್ರಾಮದಲ್ಲಿ ಮಂಜುಳಾ ಮತ್ತು ವನಜಾಕ್ಷಿ ತಲಾ 301 ಮತಗಳನ್ನು ಪಡೆದುಕೊಂಡಿದ್ದರು. ಚುನಾವಣಾಧಿಕಾರಿಗಳು ಲಾಟರಿಯ ಮೂಲಕ ಫಲಿತಾಂಶವನ್ನು ಪ್ರಕಟಿಸಿದಾಗ ವಿಜಯಲಕ್ಷ್ಮಿಯು ಮುಂಜುಳ ಅವರಿಗೆ ಒಲಿದಳು.
ಬೂಕನಕೆರೆ ಗ್ರಾಮ ಪಂಚಾಯಿತಿಗೆ ಸೇರಿದ ಹೊಸೂರು ಗ್ರಾಮದಿಂದ ಎಪಿಎಂಸಿ ನಿರ್ದೇಶಕ ತಮ್ಮ ಸಮೀಪದ ಪ್ರತಿಸ್ಪರ್ಧಿ ನಿಂಗರಾಜು ಅವರನ್ನು ಕೇವಲ ಒಂದು ಮತದ ಅಂತರದಲ್ಲಿ ಪರಾಭವಗೊಳಿಸಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಪಟ್ಟಣಕ್ಕೆ ಜನಜಾತ್ರೆಯೇ ಹರಿದು ಬಂದಿತ್ತು. ಎಲ್ಲಿ ನೋಡಿದರಲ್ಲಿ ಜನಪ್ರವಾಹವೇ ಕಾಣುತ್ತಿತ್ತು. ನಿಷೇಧಾಜ್ಞೆಯ ನಡುವೆಯೇ ವಿಜಯಿ ಅಭ್ಯರ್ಥಿಗಳ ಬೆಂಬಲಿಗರು ಗೆದ್ದ ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
Recommended Video