ಮದ್ದೂರಿನಲ್ಲಿ 70 ಲಕ್ಷದ ಎರಡಂತಸ್ತಿನ ಮನೆ ಮಾಲೀಕರಿಗೆ ಹುತ್ತದ್ದೇ ಕಾಟ
Recommended Video
ಸಾಲ ಮಾಡಿ ಮನೆ ಕಟ್ಟು ಎಂಬ ಮಾತಿದೆ. ಆದರೆ ಇಲ್ಲೊಬ್ಬರು ಮನೆಯೇನೋ ಕಟ್ಟಿದ್ದಾರೆ. ಆದರೆ ಗೃಹಪ್ರವೇಶವೇ ಮಾಡಲಾಗದೇ ಕಂಗಾಲಾಗಿದ್ದಾರೆ. ಹೌದು, ತಾವು ಕಟ್ಟಿದ ಮನೆಯೊಳಗೆ ಹುತ್ತಗಳು ತಲೆ ಎತ್ತಿರುವುದರಿಂದ ಇಡೀ ಕುಟುಂಬ ನೆಮ್ಮದಿ ಕಳೆದುಕೊಂಡಿದೆ. ಬಹಳ ಆಸೆಪಟ್ಟು ಕಟ್ಟಿದ ಮನೆಯೊಳಗೆ ವಾಸ ಮಾಡುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬಿದಿರಹೊಸಹಳ್ಳಿಯ ಮಹೇಶ್ ಎಂಬುವವರ ಮನೆಯೇ ಈ ಅಚ್ಚರಿಯ ಕೇಂದ್ರ ಬಿಂದು. ತಮ್ಮ ಜಮೀನಿನಲ್ಲಿ ಸುಮಾರು 70 ಲಕ್ಷ ರುಪಾಯಿ ವೆಚ್ಚದಲ್ಲಿ ಎರಡಂತಸ್ತಿನ ಮನೆ ನಿರ್ಮಾಣ ಆರಂಭ ಮಾಡಿದ ದಿನದಿಂದಲೂ ಅವರಿಗೆ ಸಮಸ್ಯೆ ಆಗಿದೆ. ಪದೇ ಪದೇ ಹುತ್ತ ತಲೆ ಎತ್ತಿ ಮಾಲೀಕ ಮಹೇಶ್ ರನ್ನು ಹೈರಾಣಾಗಿಸಿದೆ.
30 ಸಾವಿರ ಹಾವು ಹಿಡಿದು ದಾಖಲೆ ಮಾಡಿದ ಸ್ನೇಕ್ ಶ್ಯಾಮ್
ಪ್ರತಿ ಬಾರಿ ಮನೆಯಲ್ಲಿ ಹುತ್ತ ಕಟ್ಟಿದಾಗ ಅಗೆದು ತೆಗೆದರೂ ಮತ್ತೆ ಈ ಹುತ್ತ ಬೆಳೆಯುತ್ತಲೇ ಇದೆ. ಈ ವಿದ್ಯಮಾನವು ಮನೆಯ ಮಾಲೀಕರಲ್ಲಿ ನೆಮ್ಮದಿಯೇ ಇಲ್ಲದಂತೆ ಮಾಡಿದೆ. ಅಲ್ಲದೆ ಪ್ರತಿ ಬಾರಿ ಹುತ್ತ ತೆರವುಗೊಳಿಸಿದಾಗಲೂ ಮನೆಯ ಮಾಲೀಕರಿಗೆ ಕಾಕತಾಳೀಯ ಎಂಬಂತೆ ಒಂದಲ್ಲ ಒಂದು ಸಮಸ್ಯೆ ಎದುರಾಗಿ, ಈ ಕುಟಂಬ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಮನೆಯೊಳಗಿನ ಹುತ್ತಕ್ಕೆ ನಿತ್ಯ ಪೂಜೆ-ಪುನಸ್ಕಾರ
ಆದರೆ, ಗ್ರಾಮಸ್ಥರು ಮಾತ್ರ ಇದು ದೈವ ಲೀಲೆ ಎಂದು ಹೇಳುತ್ತಾರೆ. ಮನೆಯೊಳಗಿನ ಹುತ್ತಕ್ಕೆ ಪೂಜೆ ಪುನಸ್ಕಾರ ಮಾಡಲು ಮುಂದಾಗಿದ್ದಾರೆ. ಈ ಹುತ್ತ ನೋಡಲು ತಂಡೋಪತಂಡವಾಗಿ ಬರಲು ಆರಂಭಿಸಿದ್ದಾರೆ. ಈ ಹುತ್ತವನ್ನು ಅಗೆದು ಹಾಕಿದರೂ ನೀರು ಬಿಟ್ಟರೂ ಆಸಿಡ್ ಹಾಕಿದರೂ ಮತ್ತೆ ಮತ್ತೆ ಹುತ್ತ ಬೆಳೆಯುತ್ತಲೇ ಇದೆಯಂತೆ.
ಒಮ್ಮೆ ಹಾವು ಕಾಣಿಸಿಕೊಂಡಿತ್ತು
ಈ ಮನೆಯನ್ನು ಇನ್ನೂ ಪೂರ್ಣಗೊಳಿಸಿಲ್ಲ. ಗೃಹಪ್ರವೇಶ ಕೂಡ ಆಗಿಲ್ಲ. ಒಮ್ಮೆ ಮಾತ್ರ ಹಾವು ಕಾಣಿಸಿಕೊಂಡಿದೆ. ಉಳಿದಂತೆ ಹುತ್ತಕ್ಕೆ ನಿತ್ಯವೂ ಪೂಜೆ ಸಲ್ಲಿಸಲಾಗುತ್ತಿದೆ ಎನ್ನುತ್ತಾರೆ ಮನೆ ಮಾಲೀಕ ಮಹೇಶ್. ಅವರಿಗೂ ಇದು ದೈವಕ್ಕೆ ಸಂಬಂಧಿಸಿದ್ದು ಎಂಬ ಭಾವ ಆಳವಾಗಿ ಮನಸ್ಸಿನಲ್ಲಿ ಕೂತಂತಿದೆ.
ಗೆಜ್ಜೆ ಸದ್ದು ಕೇಳಿಬರುತ್ತದಂತೆ
ಇನ್ನು ಹುತ್ತದ ಬಳಿ ವಿಡಿಯೋ ಚಿತ್ರೀಕರಣ ಮಾಡಿದ ನಂತರ ಅದನ್ನು ವೀಕ್ಷಣೆ ಮಾಡಿದರೆ ಹುತ್ತದಿಂದ ಗೆಜ್ಜೆ ಸದ್ದು ಕೇಳುತ್ತಿದೆ ಎನ್ನುತ್ತಾರೆ ಸ್ಥಳೀಯರು. ಜನ ಮರುಳೋ - ಜಾತ್ರೆ ಮರುಳೋ ಎಂದು ಭಾರೀ ಸಂಖ್ಯೆಯಲ್ಲಿ ಈ ಹುತ್ತದ ಬಳಿ ಜನರು ಬರುತ್ತಿರುವುದರಿಂದ ಮಾಲೀಕರು ಕಸಿವಿಸಿಗೊಂಡಿದ್ದಾರೆ.
ಹುತ್ತಕ್ಕೆ ಕಿಂಡಿ ಇಲ್ಲದಿದ್ದರೆ ಚಟುವಟಿಕೆ ಹೆಚ್ಚು
"ಹುತ್ತ ಮೇಲ್ಭಾಗಕ್ಕೆ ಎಷ್ಟು ಎತ್ತರ ಇರುತ್ತದೋ ಅದರ ಕೆಳ ಭಾಗ ಅಷ್ಟೇ ಆಳ ಹಾಗೂ ಅಗಲವಾಗಿರುತ್ತದೆ. ಪಾಯ ತೆಗೆಯುವ ಸಂದರ್ಭದಲ್ಲಿ ರಾಣಿ ಗೆದ್ದಲು ಹುಳು ಹಾಗೇ ಉಳಿದುಹೋಗಿರಬೇಕು. ಒಂದು ರಾಣಿ ಹುಳು ಸಾವಿರಾರು ಮೊಟ್ಟೆ ಇಡುತ್ತದೆ. ಅವುಗಳ ಸಂತತಿ ಬಹಳ ಬೇಗ ಬೆಳೆಯುತ್ತದೆ. ಆದ್ದರಿಂದ ಹೀಗೆ ಪದೇ ಪದೇ ಹುತ್ತ ನಿರ್ಮಾಣ ಆಗಿರುತ್ತದೆ. ಮೂತಿ ಮುಚ್ಚಿ ಹೋದ ಹುತ್ತದಲ್ಲಿ ಅಂದರೆ ಹುತ್ತಕ್ಕೆ ಯಾವುದೇ ತೆರೆದ ಕಿಂಡಿ ಇಲ್ಲದಿದ್ದರೆ ಅಲ್ಲಿ ಚಟುವಟಿಕೆ ಹೆಚ್ಚಿರುತ್ತದೆ" ಎನ್ನುತ್ತಾರೆ ತುಮಕೂರಿನ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ.
ಯಾವ ಧಾರ್ಮಿಕ ಹಿನ್ನೆಲೆಯೂ ಇಲ್ಲ
ಈ ರೀತಿ ಹುತ್ತ ಗೋಡೆ ಪಕ್ಕದಲ್ಲಿ ಹೆಚ್ಚಾಗಿ ಇರುತ್ತದೆ. ಅದಕ್ಕೆ ಕಾರಣ ಏನೆಂದರೆ, ಗೆದ್ದಲು ಹೊರಗೆ ಬರಲು ಸಣ್ಣ ಸಣ್ಣ ತೂತುಗಳಿರುತ್ತವೆ. ಆದ್ದರಿಂದ ಹುತ್ತದ ಒಂದು ಭಾಗ ತೆರೆದು, ಅದರಲ್ಲಿ ಪ್ರತಿ ದಿನ ಸೀಮೆಎಣ್ಣೆ ಹಾಕುತ್ತಾ ಬರಬೇಕು. ಹೀಗೆ ಒಂದೆರಡು ತಿಂಗಳು ಮಾಡಿದರೆ ಗೆದ್ದಲು ಹುಳುಗಳು ಮತ್ತಷ್ಟು ಆಳಕ್ಕೆ ಹೋಗುತ್ತವೆ. ಹುತ್ತ ಎತ್ತರಕ್ಕೆ ಬೆಳೆಯದಿದ್ದರೆ ಅವು ಹಾಗೇ ಸತ್ತು ಹೋಗುತ್ತವೆ. ಮತ್ತೆ ಇದರಲ್ಲಿ ಯಾವ ಧಾರ್ಮಿಕ ಹಿನ್ನೆಲೆಯೂ ಇಲ್ಲ. ಇನ್ನು ಹಾವುಗಳು ಎಲ್ಲ ಹುತ್ತದಲ್ಲೂ ಇರೋದಿಲ್ಲ. ಮನೆಯ ಪಾಯ ತೆಗೆಯುವಾಗ ಉಳಿದುಹೋದ ಗೆದ್ದಲು ಹುಳಗಳಿಂದ ಹೀಗಾಗುತ್ತಿದೆ ಅಷ್ಟೇ ಎನ್ನುತ್ತಾರೆ ಬಿ.ವಿ.ಗುಂಡಪ್ಪ.