ಮಂಡ್ಯ ಬೆಚ್ಚಿ ಬೀಳಿಸಿದ ಕೊರೊನಾ; ಮಳವಳ್ಳಿ, ನಾಗಮಂಗಲದಲ್ಲಿ ಹೈ ಅಲರ್ಟ್
ಮಂಡ್ಯ, ಏಪ್ರಿಲ್ 08: ನೆರೆಯ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದರೂ ಸದ್ಯ ತಮ್ಮ ಜಿಲ್ಲೆಯಲ್ಲಿ ಇಲ್ಲವೆಂದು ನೆಮ್ಮದಿಯಾಗಿ ಕಳೆದೊಂದು ತಿಂಗಳನ್ನು ಕಳೆದಿದ್ದ ಮಂದಿಯಲ್ಲಿ ಇದೀಗ ಭಯ ಶುರುವಾಗಿದೆ. ಇದಕ್ಕೆ ಕೊರೊನಾ ಮುಕ್ತವಾಗಿದ್ದ ಜಿಲ್ಲೆಯಲ್ಲಿ ಮೂರು ಪ್ರಕರಣಗಳು ಒಂದೇ ದಿನ ಪತ್ತೆಯಾಗಿರುವುದು ಕಾರಣವಾಗಿದೆ.
ಈ ಕುರಿತಂತೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾಹಿತಿ ನೀಡಿದ್ದು, ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಏಳು ಮಂದಿ ಪೈಕಿ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಮೂವರು ಸೋಂಕಿತ ವ್ಯಕ್ತಿಗಳು 32, 36 ಹಾಗೂ 65 ವರ್ಷದವರಾಗಿದ್ದಾರೆ. ಉಳಿದ ಇಬ್ಬರಿಗೆ ನೆಗೆಟಿವ್ ಬಂದಿದ್ದು, ಮತ್ತಿಬ್ಬರ ಗಂಟಲ ದ್ರವ ಮತ್ತು ರಕ್ತದ ಮಾದರಿಯನ್ನು ಪುನರ್ ಪರಿಶೀಲನೆಗಾಗಿ ಮತ್ತೊಮ್ಮೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಾಗಮಂಗಲದ ಐದು ಪ್ರಕರಣಗಳು ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ಮಳವಳ್ಳಿ ಮೂಲದ ಏಳು ಮಂದಿಯ ಹಿನ್ನೆಲೆ ಪರಿಶೀಲನೆ
ಮಳವಳ್ಳಿ ಮೂಲದ ಏಳು ಮಂದಿಯ ಟ್ರಾವೆಲ್ ಹಿಸ್ಟರಿಯನ್ನು ಪರಿಶೀಲಿಸಿ ಮಾಹಿತಿ ಕಲೆಹಾಕಲಾಗಿದ್ದು, ಫೆ. 4ರಂದು ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಫೆ.13ರವರೆಗೂ ಅಲ್ಲಿಯೇ ಉಳಿದುಕೊಂಡಿದ್ದಾರೆ. ನಂತರ ಫೆ. 13ರಂದು ದೆಹಲಿಯಿಂದ ಧರ್ಮಗುರುಗಳೊಂದಿಗೆ 7 ಮಂದಿಯೂ ಸಂಪರ್ಕಕ್ರಾಂತಿ ಎಕ್ಸ್ಪ್ರೆಸ್ ಮೂಲಕ ಬೆಂಗಳೂರಿನ ಯಶವಂತಪುರಕ್ಕೆ ಮಧ್ಯರಾತ್ರಿ 1 ಗಂಟೆಗೆ ಬಂದಿಳಿದಿದ್ದಾರೆ ಎಂದು ಹೇಳಿದರು. ಧರ್ಮ ಗುರುಗಳು ಮೈಸೂರು ಯಶವಂತಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಮೈಸೂರಿಗೆ ತೆರಳಿದರೆ, ಮಳವಳ್ಳಿ ಮೂಲದ ಏಳು ಮಂದಿ ಯಶವಂತಪುರದಿಂದ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಮುಂಜಾನೆ ಮೂರು ಗಂಟೆಗೆ ಆಗಮಿಸಿ ಅಲ್ಲಿಂದ ಸಾರಿಗೆ ಬಸ್ ಮೂಲಕ ಮದ್ದೂರಿಗೆ ಬಂದಿಳಿದರು. ಬಳಿಕ ಮದ್ದೂರಿನಿಂದ ಮಳವಳ್ಳಿಗೆ ಮಾರುತಿ 800 ಹಾಗೂ ಮತ್ತೊಂದು ಕಾರಿನಲ್ಲಿ ತೆರಳಿದ್ದಾರೆ ಎಂದು ತಿಳಿಸಿದರು.
ಮಳವಳ್ಳಿ ಜನರನ್ನು ಬೆಚ್ಚಿ ಬೀಳಿಸಿದೆ ಕೊರೊನಾ ಕುರಿತ ಈ ಒಂದು ಸಂಗತಿ...
10 ಧರ್ಮಗುರುಗಳಿಂದ ಕೊರೊನಾ ಸೋಂಕು?
ಸೋಂಕು ದೃಢಪಟ್ಟಿರುವ ಮೂವರು ದೆಹಲಿಯಿಂದ ಬಂದಿದ್ದ ಧರ್ಮಗುರುಗಳೊಂದಿಗೆ ಸಂಪರ್ಕದಲ್ಲಿದ್ದ ಕಾರಣ ಅವರಿಂದಲೂ ಹರಡಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, 10 ಧರ್ಮಗುರುಗಳ ಪೈಕಿ 5 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಅವರಿಂದಲೇ ಇವರಿಗೂ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿದೆ ಎಂದರು. ಸೋಂಕು ಕಾಣಿಸಿಕೊಂಡಿರುವ ವ್ಯಕ್ತಿಗಳು ಮೇಲ್ನೋಟಕ್ಕೆ ಸಂಪೂರ್ಣವಾಗಿ ಆರೋಗ್ಯದಿಂದಿದ್ದಾರೆ. ಅವರಿಗೆ ಜ್ವರ, ನೆಗಡಿ, ಶೀತ, ಕೆಮ್ಮು ಈ ತರಹದ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಆದರೆ, ಇವರ ಗಂಟಲು ದ್ರವ ಮತ್ತು ರಕ್ತ ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ಬಂದಿರುವುದರಿಂದ ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು. ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಜಿಲ್ಲಾಡಳಿತಕ್ಕೆ ಸಮರ್ಪಕವಾಗಿ ಮಾಹಿತಿ ನೀಡಬೇಕು. ಧಾರ್ಮಿಕ ಸಭೆ ನಡೆದ ದಿನದಂದು ಪಾಲ್ಗೊಂಡವರಷ್ಟೇ ಅಲ್ಲದೆ, ನಂತರದಲ್ಲಿ ಭಾಗವಹಿಸಿದ್ದವರೂ ಸಹ ಮಾಹಿತಿ ನೀಡುವುದರ ಜೊತೆಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮಳವಳ್ಳಿ ಕಂಟೈನ್ಮೆಂಟ್ ಝೋನ್
ದೆಹಲಿ ಮೂಲದ ಐದು ಧರ್ಮಗುರುಗಳಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಮಳವಳ್ಳಿ ತಾಲೂಕಿನಲ್ಲೂ ಸೋಂಕು ಹರಡಿರುವ ಸಾಧ್ಯತೆಗಳಿರುವುದರಿಂದ ಪಟ್ಟಣದ ಸುತ್ತಲಿನ ಏಳು ಕಿ.ಮೀ. ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಹಾಗೂ ಮೂರು ಕಿ.ಮೀ. ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಮಂಡ್ಯ: ಐಸೋಲೇಷನ್ ವಾರ್ಡ್ ನಿಂದ ಕೊರೊನಾ ಶಂಕಿತ ಪರಾರಿ
ಈ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ಯಾವುದೇ ವ್ಯಕ್ತಿ ಓಡಾಡುವಂತಿಲ್ಲ. ಮುಂದಿನ 28 ದಿನಗಳ ಕಾಲ ಈ ಪ್ರದೇಶವನ್ನು ತೀವ್ರ ನಿಗಾ ಘಟಕವಾಗಿ ಪರಿಗಣಿಸುತ್ತದೆ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಹಣ್ಣು-ಹಂಪಲು, ತರಕಾರಿ ವಿತರಣೆ ಸೇರಿದಂತೆ ಜೀವನ ಅವಶ್ಯಕವಾದ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುವುದು.
ತಾಲ್ಲೂಕಿನ 2.84000 ಜನಸಂಖ್ಯೆ ಇದೆ, 170 ಆರೋಗ್ಯ ತಂಡ ರಚಿಸಿದ್ದು, ಪ್ರತಿ 50 ಮನೆಗಳಿಗೆ ಇಬ್ಬರು ನೋಡೆಲ್ ಅಧಿಕಾರಿ ನೇಮಕ ಮಾಡಿ ಅಲ್ಲಿನ ನಿವಾಸಿಗಳ ಆರೋಗ್ಯ ತಪಾಸಣೆ ನಡೆಸಿ ಮುನ್ನೆಚ್ಚರಿಕೆ ವಹಿಸಲಾಗುವುದು. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಶ್ರಮಿಸಲಿದ್ದಾರೆ ಎಂದು ಹೇಳಿದರು.
ದಕ್ಷಿಣ ಪೊಲೀಸ್ ವರಿಷ್ಠಾಧಿಕಾರಿ ಭೇಟಿ
ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣಕ್ಕೆ ದಕ್ಷಿಣ ಪೊಲೀಸ್ ವರಿಷ್ಠಾಧಿಕಾರಿ ವಿಫುಲ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರು ಸರ್ಕಾರದೊಂದಿಗೆ ಸಹಕಾರ ನೀಡಬೇಕು. ಎಲ್ಲರೂ ಕಡ್ಡಾಯವಾಗಿ ಲಾಕ್ಡೌನ್ಗೆ ಸ್ಪಂದನೆ ಮಾಡಬೇಕು. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.
ನಾಗಮಂಗಲದಲ್ಲೂ ಹೈ ಅಲರ್ಟ್
ಕೊರೊನಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗಮಂಗಲ ತಾಲೂಕಿನಲ್ಲೂ ಹೈ ಅಲರ್ಟ್ ಘೋಷಣೆಯಾಗಿದೆ. ದೆಹಲಿ ಮೂಲದ ಐವರು ಧರ್ಮಗುರುಗಳಿಗೆ ಹಾಗೂ ಅವರ ಸಂಪರ್ಕದಲ್ಲಿದ್ದ ಏಳು ಮಂದಿಯಲ್ಲಿ ಮೂವರಿಗೆ ಸೋಂಕು ದೃಢಪಟ್ಟಿರುವುದು ಆತಂಕ ಹೆಚ್ಚುವಂತೆ ಮಾಡಿದೆ. ಆ ಹಿನ್ನೆಲೆಯಲ್ಲಿ ನಾಗಮಂಗಲದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಪಟ್ಟಣದ ಸುತ್ತಲಿನ ಏಳು ಕಿ.ಮೀ. ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಹಾಗೂ ಮೂರು ಕಿ.ಮೀ. ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಶೈಲಜಾ ಘೋಷಿಸಿದ್ದಾರೆ. ನಾಗಮಂಗಲದಲ್ಲಿ ಮಾ. 13 ರಿಂದ 23ರವರೆಗೆ ಧರ್ಮಗುರುಗಳು ವಾಸವಿದ್ದ ಸಮಯದಲ್ಲಿ 24 ಮಂದಿ ಅವರ ಸಂಪರ್ಕದಲ್ಲಿದ್ದರು. ಅವರನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗಿದೆ.
ಕರ್ನಾಟಕದಲ್ಲಿ ಕೊರೊನಾ ವೈರಸ್; ಮಂಡ್ಯ ಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಿದೆ?