ಮಂಡ್ಯ ಜಿ.ಪಂನಲ್ಲಿ ನಿಲ್ಲದ ಅಧ್ಯಕ್ಷ ಗಾದಿಯ ಕಾದಾಟ!
ಮಂಡ್ಯ, ನವೆಂಬರ್ 18: ಮಂಡ್ಯ ಜಿ.ಪಂ ಅಧ್ಯಕ್ಷ ಗಾದಿಯ ಕಿತ್ತಾಟ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ. ಅಧ್ಯಕ್ಷ ಗಾದಿಯನ್ನು ಹಿಡಿದ ಬಳಿಕ ಮತ್ತೊಬ್ಬರಿಗೆ ಬಿಟ್ಟುಕೊಡಲು ನಾಗರತ್ನ ಸ್ವಾಮಿ ಅವರು ತಯಾರಿಲ್ಲದ ಕಾರಣದಿಂದಾಗಿ ಜಟಾಪಟಿಗಳು ಮುಂದುವರೆದಿದ್ದು, ಜಿ.ಪಂ ಅಧಿಕಾರವಧಿ ಮುಗಿಯುವ ತನಕ ಜಿ.ಪಂ ಆಡಳಿತದ ಸಂಕಟ ಮುಂದುವರೆಯುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.
ಮಂಡ್ಯ ರಾಜಕೀಯದಲ್ಲಿ ದಿನದಿನಕ್ಕೂ ಹೊಸ ತಿರುವು ಕಾಣಿಸಿಕೊಳ್ಳುತ್ತಿದೆ. ಮಂಡ್ಯದತ್ತ ಬಿಜೆಪಿ ಮುಖ ಮಾಡಿ ಕೆ.ಆರ್.ಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಖಾತೆ ತೆರೆಯಿತೋ ಅಲ್ಲಿಂದೀಚೆಗೆ ಜಿಲ್ಲೆಯಲ್ಲಿ ರಾಜಕೀಯ ತಳಮಳಗಳು ಆರಂಭವಾಗಿವೆ. ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆ ವೇಳೆ ಸಂಘಟನೆಯನ್ನು ತಳಮಟ್ಟದಿಂದ ಗಟ್ಟಿ ಮಾಡಿ ಪಾರಮ್ಯ ಸಾಧಿಸುವತ್ತ ದೃಷ್ಠಿ ನೆಟ್ಟಿದೆ.
ಚಿಕ್ಕಮಗಳೂರು: ಜಿ.ಪಂ ಅಧ್ಯಕ್ಷೆ ರಾಜೀನಾಮೆಗೆ ಸ್ವಪಕ್ಷಿಯ ಸದಸ್ಯರ ಆಗ್ರಹ
ಕಾಂಗ್ರೆಸ್ ಬಗ್ಗು ಬಡಿಯುವ ತಂತ್ರ
ಈಗಾಗಲೇ ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯಕ್ಕೆ ಬಿಜೆಪಿ ದಾಪುಗಾಲಿಟ್ಟಿರುವುದು, ಒಂದು ಕಡೆ ಜೆಡಿಎಸ್ ನಾಯಕರಿಗೆ ಆತಂಕ ತಂದಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ನಾಯಕರಿಗೆ ಭಯವನ್ನುಂಟು ಮಾಡಿದೆ. ಇತ್ತೀಚಿಗಿನ ಬೆಳವಣಿಗೆಯನ್ನು ನೋಡಿದರೆ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಕಾಂಗ್ರೆಸ್ ಬಗ್ಗು ಬಡಿಯಲು ತಂತ್ರ ರೂಪಿಸುತ್ತಿದ್ದಾರಾ? ಎಂಬ ಸಂಶಯ ಬಾರದಿರದು. ಏಕೆಂದರೆ ಇದಕ್ಕೆ ನಿದರ್ಶನ ಎಂಬಂತೆ ಮಂಡ್ಯ ಡಿಸಿಸಿ ಬ್ಯಾಂಕ್ ಅಧಿಕಾರ ಪಡೆಯುವಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ನಮ್ಮ ಮುಂದಿದೆ.
ಇದುವರೆಗೆ ಡಿಸಿಸಿ ಬ್ಯಾಂಕ್ ಅಧಿಕಾರ ಹಿಡಿಯುವ ಕುರಿತಂತೆ ರಾಜಕೀಯದ ಆಟಗಳು ನಡೆಯುತ್ತಿದ್ದವಲ್ಲದೆ, ಬ್ಯಾಂಕ್ ಚುನಾವಣೆಯತ್ತಲೇ ಜನ ದೃಷ್ಠಿ ನೆಟ್ಟಿತ್ತು. ಆದರೆ ಇದೀಗ ಅದಕ್ಕೆ ಪೂರ್ಣ ವಿರಾಮ ಬಿದ್ದಿದೆ. ಸದ್ಯ ಎಲ್ಲರ ಚಿತ್ತ ಜಿ.ಪಂ ಅಧ್ಯಕ್ಷರ ಗಾದಿಯೆಡೆಗಿನ ಜಿದ್ದಾಜಿದ್ದಿಯತ್ತ ನೆಟ್ಟಿದೆ. ಮಂಡ್ಯ ಜಿ.ಪಂ ಅಭಿವೃದ್ಧಿ ವಿಚಾರಕ್ಕೆ ಸುದ್ದಿಯಾಗಿದ್ದಕ್ಕಿಂತ ಹೆಚ್ಚಾಗಿ ಕುರ್ಚಿ ಕಿತ್ತಾಟದ ವಿಚಾರಕ್ಕೆ ಸುದ್ದಿಯಾಗಿದ್ದೇ ಹೆಚ್ಚು.
ಅಧ್ಯಕ್ಷ ಗಾದಿ ಬಿಟ್ಟುಕೊಡುವಂತೆ ಒತ್ತಾಯ
ಅಧ್ಯಕ್ಷ ಗಾದಿ ಬಿಟ್ಟುಕೊಡುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರನ್ನು ಒತ್ತಾಯಿಸುತ್ತಲೇ ಬರಲಾಗುತ್ತಿದೆ. ಹಿಂದೆ ಜಿ.ಪಂ ಅಧ್ಯಕ್ಷರ ಅಧಿಕಾರವಧಿ ಐದು ವರ್ಷ ಇತ್ತಾದರೂ ಆ ನಂತರ ಮೂವತ್ತು ತಿಂಗಳಿಗೆ ನಿಗದಿ ಪಡಿಸಲಾಗಿದೆ. ಈ ಆದೇಶದಂತೆ ನಾಗರತ್ನ ಸ್ವಾಮಿ ಅವರು ಈಗಾಗಲೇ ಅಧಿಕಾರವನ್ನು ಬಿಟ್ಟು ಕೊಡಬೇಕಿತ್ತು. ಆದರೆ ಜಪ್ಪಯ್ಯ ಅಂದರೂ ಅಧ್ಯಕ್ಷೆ ಮಾತ್ರ ಕುರ್ಚಿಯನ್ನು ಬಿಟ್ಟುಕೊಡುತ್ತಿಲ್ಲ. ಆದರೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್ ಅವರು ತಮಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವಂತೆ ಒತ್ತಾಯಿಸುತ್ತಾ ಬಂದಿದ್ದು, ಇತ್ತೀಚೆಗೆ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ತನ್ನ ಪತ್ನಿಯ ಅಧಿಕಾರ ಹೋಗಿ ಬಿಟ್ಟರೆ ಕಷ್ಟ ಎಂದರಿತ ನಾಗರತ್ನ ಅವರ ಪತಿ ಸ್ವಾಮಿ ತಂತ್ರ ಮಾಡಿ ಬಿಜೆಪಿ ಪಕ್ಷವನ್ನು ಸೇರ್ಪಡೆ ಆಗುವುದರೊಂದಿಗೆ ಪ್ರಭಾವ ಬಳಸಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಕುರ್ಚಿ ಬಿಟ್ಟುಕೊಡಲು ಒಪ್ಪದ ಅಧ್ಯಕ್ಷೆ
ಸದ್ಯ ಅಧ್ಯಕ್ಷ ಗಾದಿ ಬಿಟ್ಟುಕೊಡಲು ಒಪ್ಪದ ಜಿ.ಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಬರೆದಿರುವ ಪತ್ರದಲ್ಲಿ 2021ರ ಮೇ 1 ರವರೆಗೂ ಅಧಿಕಾರದ ಅವಧಿಯಿರುವುದು ಸ್ಪಷ್ಟವಾಗಿದೆ. ಹೀಗಾಗಿ ಮುಂದಿನ ಅವಧಿಯವರೆಗೂ ನಾನೇ ಅಧ್ಯಕ್ಷೆ ಎನ್ನುತ್ತಿದ್ದಾರೆ. ಜಿ.ಪಂ ಅಧ್ಯಕ್ಷೆ ನಾಗರತ್ನ ಅವರ ಪತಿ ಸ್ವಾಮಿ ಅವರು ಬಿಜೆಪಿಗೆ ಸೇರಿರುವ ಕಾರಣ ಮುಂದಿನ ದಿನಗಳಲ್ಲಿ ನಾಗರತ್ನ ಕೂಡ ಬಿಜೆಪಿಯತ್ತ ವಾಲುವ ಎಲ್ಲ ಲಕ್ಷಣಗಳಿದ್ದು, ಇದು ದಳಪತಿಗಳ ಆತಂಕಕ್ಕೆ ಕಾರಣವಾಗಿದೆ.
Recommended Video
ನಾಯಕರು ಗಿಮಿಕ್ ಮಾಡ್ತಾರಾ?
ಜಿ.ಪಂ ಅಧ್ಯಕ್ಷ ಗಾದಿಯನ್ನು ಅಲ್ಪ ಕಾಲದ ಮಟ್ಟಿಗಾದರೂ ಜೆಡಿಎಸ್ನ ಸಿ.ಅಶೋಕ್ ಅವರಿಗೆ ನೀಡಬೇಕೆನ್ನುವುದು ಬಯಕೆಯಾಗಿದೆ. ಆದರೆ ಹಠಕ್ಕೆ ಬಿದ್ದಿರುವ ಜಿ.ಪಂ ಅಧ್ಯಕ್ಷೆ ನಾಗರತ್ನ ಅವರು ಸದ್ಯಕ್ಕಂತು ತಮ್ಮ ಕುರ್ಚಿಯನ್ನು ಬಿಟ್ಟುಕೊಡುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಒಂದು ವೇಳೆ ಡಿಸಿಸಿ ಬ್ಯಾಂಕ್ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡ ದಳ ಮತ್ತು ಕಮಲ ನಾಯಕರು ಇಲ್ಲಿ ಏನಾದರೂ ಗಿಮಿಕ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.