ಮುಚ್ಚುವ ಹಂತದಲ್ಲಿದ್ದ ದೇವರಹಳ್ಳಿ ಸರ್ಕಾರಿ ಶಾಲೆಗೆ ಹೊಸ ಕಳೆ!
ಮಂಡ್ಯ, ಆಗಸ್ಟ್ 24: ಪ್ರತಿ ವರ್ಷವೂ ದಾಖಲಾಗುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿ ಮುಚ್ಚುವ ಹಂತ ತಲುಪಿದ್ದ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ದೇವರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದು ಮುಖ್ಯ ಶಿಕ್ಷಕರ ಸತತ ಪರಿಶ್ರಮದಿಂದ ಮತ್ತೆ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವುದು ವಿಶೇಷವಾಗಿದೆ.
ಶಾಲೆ ಮುಖ್ಯ ಶಿಕ್ಷಕ ಕೆ. ಕೆಂಪೇಗೌಡರೇ ಶಾಲೆಯ ಸಮಗ್ರ ಅಭಿವೃದ್ಧಿಗೆ ಕಾರಣರಾದವರಾಗಿದ್ದು, ಅವರು ಮನೆಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಪೋಷಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಎರಡು ವಿದ್ಯಾರ್ಥಿಗಳಿದ್ದ ಶಾಲೆಯಲ್ಲೀಗ 20 ವಿದ್ಯಾರ್ಥಿಗಳಿಗೆ ತಲುಪಿರುವುದು ಒಂದು ರೀತಿಯ ಸಾಧನೆ ಎಂದರೆ ತಪ್ಪಾಗಲಾರದು.
ಮುಖ್ಯ ಶಿಕ್ಷಕ ಕೆಂಪೇಗೌಡ 2009ರಲ್ಲಿ ದೇವರಹಳ್ಳಿ ಶಾಲೆಗೆ ವರ್ಗಾವಣೆಯಾಗಿ ಬಂದಾಗ ಶಾಲೆಯಲ್ಲಿದ್ದ ಎರಡು ವಿದ್ಯಾರ್ಥಿಗಳನ್ನು ನೋಡಿ ದಂಗಾಗಿದ್ದರು. ಅದೇ ವೇಳೆಗೆ ಸರ್ಕಾರ ಕಡಿಮೆ ಮಕ್ಕಳಿರುವ ಶಾಲೆಗಳ ಬಾಗಿಲು ಮುಚ್ಚಲು ಆದೇಶ ಹೊರಡಿಸಿತ್ತು. ಜಿಲ್ಲೆಯಲ್ಲಿ ಮುಚ್ಚುವ ಶಾಲೆಗಳ ಪಟ್ಟಿಯಲ್ಲಿ ದೇವರಹಳ್ಳಿ ಶಾಲೆ ಕೂಡ ಇತ್ತು. ಅಂದಿನ ಬಿಇಒ ಸ್ವಾಮಿ ಎರಡು ಮಕ್ಕಳಿರುವ ದೇವರಹಳ್ಳಿ ಶಾಲೆ ಮುಚ್ಚಿ ಬೇರೆ ಶಾಲೆಗೆ ಕೆಂಪೇಗೌಡರನ್ನು ನಿಯೋಜನೆ ಮಾಡುವುದಾಗಿ ತಿಳಿಸಿದ್ದರು.
ಪೋಷಕರ ಮನವೊಲಿಸಿದ ಮುಖ್ಯ ಶಿಕ್ಷಕ
ದೇವರಹಳ್ಳಿ ಗ್ರಾಮದಲ್ಲಿ ಆಗ ತೊಂಬತ್ತು ಕುಟುಂಬಗಳು ಸೇರಿ ಮುನ್ನೂರು ಜನಸಂಖ್ಯೆಯಿತ್ತು. ಗ್ರಾಮದ ಮಕ್ಕಳು ಸ್ಥಳೀಯ ಶಾಲೆಯಿದ್ದರೂ ಬೇರೆ ಶಾಲೆಗಳಿಗೆ ತೆರಳುತ್ತಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಶಿಕ್ಷಕ ಕೆ. ಕೆಂಪೇಗೌಡರು, ಪ್ರತಿ ಮನೆ ಮನೆಗೆ ತೆರಳಿ ಖಾಸಗಿ ಶಾಲೆಗೆ ಹೋಗುತ್ತಿದ್ದ ಮಕ್ಕಳ ಪೋಷಕರನ್ನು ಮನವೊಲಿಸಿ ಸರ್ಕಾರಿ ಶಾಲೆಗೆ ದಾಖಲು ಮಾಡಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಇವತ್ತು ಶಾಲೆಯಲ್ಲಿ ಇಪ್ಪತ್ತು ವಿದ್ಯಾರ್ಥಿಗಳು ಪಾಠ ಕೇಳುವಂತಾಗಿದೆ.
ಖಾಸಗಿ ಶಾಲೆಗೆ ತೆರಳದಿರುವುದು ಗ್ರಾಮದ ವಿಶೇಷ
ಸದ್ಯ ಒಂದನೇ ತರಗತಿಯಲ್ಲಿ ನಾಲ್ಕು, ಎರಡನೇ ತರಗತಿಯಲ್ಲಿ ಮೂರು, ಮೂರನೇ ತರಗತಿ ನಾಲ್ಕು, ನಾಲ್ಕನೇ ತರಗತಿ ನಾಲ್ಕು ಹಾಗೂ ಐದನೇ ತರಗತಿ ಐದು ಮಕ್ಕಳು ದಾಖಲಾಗಿದ್ದಾರೆ. ಗ್ರಾಮದ ಒಬ್ಬ ವಿದ್ಯಾರ್ಥಿಯೂ ಖಾಸಗಿ ಶಾಲೆಗೆ ತೆರಳದಿರುವುದು ಗ್ರಾಮದ ವಿಶೇಷವಾಗಿದೆ. ಮಕ್ಕಳನ್ನು ಶಾಲೆಯತ್ತ ಸೆಳೆಯುವ ಸಲುವಾಗಿ ತರಗತಿಗೆ ಹಾಜರಾಗುವ ಎಲ್ಲ ಮಕ್ಕಳಿಗೂ ಶಿಕ್ಷಕ ಕೆಂಪೇಗೌಡರು ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ನೋಟ್ಬುಕ್, ಲೇಖನ ಸಾಮಾಗ್ರಿಗಳನ್ನು ಉಚಿತವಾಗಿ ನೀಡಿದ್ದಾರೆ. ಅಲ್ಲದೇ ಅಡುಗೆ ಸಿಬ್ಬಂದಿಗೆ ಬೇಸಿಗೆ ರಜೆಯ ಎರಡು ತಿಂಗಳ 6 ಸಾವಿರ ಗೌರವ ಧನವನ್ನು ತಮ್ಮ ಕೈಯಿಂದಲೇ ಭರಿಸುತ್ತಿದ್ದಾರೆ.
ಮಕ್ಕಳ ಮೇಲೆ ಇಟ್ಟಿರುವ ಪ್ರೀತಿಗೆ ಸಾಕ್ಷಿ
ಬಿಸಿಯೂಟಕ್ಕೆ ತಗಲುವ ಹೆಚ್ಚುವರಿ ಹಣವನ್ನೂ ಜೇಬಿನಿಂದಲೇ ಭರಿಸಿ ಮಕ್ಕಳಿಗೆ ಗುಣಮಟ್ಟದ ಊಟ ನೀಡುತ್ತಿದ್ದಾರೆ. ಜತೆಗೆ ಪ್ರತಿ ವರ್ಷ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಕ್ಕಳು ಆಯ್ಕೆಯಾಗಲು ಪ್ರೋತ್ಸಾಹ ನೀಡುತ್ತಿದ್ದಾರೆ. ನಿರಂತರವಾಗಿ ಶಾಲಾ ವಾರ್ಷಿಕೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಿ ಮಕ್ಕಳಿಗೆ ಸ್ವಂತ ಹಣದಿಂದಲೇ ಬಹುಮಾನ ವಿತರಿಸುವ ಕೆಲಸ ಮಾಡುತ್ತಿರುವುದು ಅವರು ಮಕ್ಕಳ ಮೇಲೆ ಇಟ್ಟಿರುವ ಪ್ರೀತಿಗೆ ಸಾಕ್ಷಿಯಾಗಿದೆ.
ನರೇಗಾದಲ್ಲಿ 4 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ
ಮಕ್ಕಳ ಸಂಖ್ಯೆ ಹೆಚ್ಚಿಸುವ ಜತೆಗೆ ದಾನಿಗಳಿಂದ 2 ಲಕ್ಷ ರೂ. ಕೊಡುಗೆ ಪಡೆದು ಶಾಲೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಿದ್ದಾರೆ. ತಾ.ಪಂ. ಅನುದಾನ 3 ಲಕ್ಷ ರೂ. ವೆಚ್ಚದಲ್ಲಿ ರಂಗಮಂದಿರ, ಜಿ.ಪಂ ಅನುದಾನ 2 ಲಕ್ಷ ರೂ. ವೆಚ್ಚದಲ್ಲಿ ಶಾಲೆ ದುರಸ್ತಿ, ಸುಣ್ಣ ಬಣ್ಣ ಮಾಡಿಸಿದ್ದು, ನರೇಗಾದಲ್ಲಿ 4 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣದ ಜತೆಗೆ ಶೌಚಾಲಯ ಸೇರಿದಂತೆ ಶಾಲೆಯ ಎಲ್ಲಾ ಕೊಠಡಿಗಳಲ್ಲೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.
ದೇವರಹಳ್ಳಿ ಶಾಲೆ ಆವರಣದಲ್ಲಿ ಶಾಲಾ ಕೈತೋಟ ನಿರ್ಮಿಸಿದ್ದಾರೆ. ಜತೆಗೆ ಸಿಲ್ವರ್, ತೇಗ, ತೆಂಗು, ಹಲಸು, ಸೀಬೆ, ನುಗ್ಗೆ, ಬಾಳೆ, ನಿಂಬೆ, ಕರಿಬೇವು, ಇರಳೇಕಾಯಿ ಹಾಗೂ ವಿವಿಧ ಅಲಂಕಾರಿ ಸಸಿಗಳನ್ನು ನೆಟ್ಟು ಸುಂದರ ಪರಿಸರ ನಿರ್ಮಾಣ ಮಾಡಿ ಶಾಲೆಗೆ ಕಳೆಕಟ್ಟಿದ್ದಾರೆ.
Recommended Video