ಭತ್ತದ ನಾಟಿ ಮಾಡಿ ನಿಜಕ್ಕೂ ಮಣ್ಣಿನ ಮಗ ಆಗಲಿದ್ದಾರೆ ಎಚ್ಡಿಕೆ
ಬೆಂಗಳೂರು, ಆಗಸ್ಟ್ 7: ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ರಾಜ್ಯದ ರೈತ ಸಮುದಾಯದಲ್ಲಿ ಆತ್ಮ ವಿಶ್ವಾಸ ತುಂಬಿಸುವ ನಿಟ್ಟಿನಲ್ಲಿ ಆಗಸ್ಟ್ 11ರಂದು ತಾವೇ ಖುದ್ದಾಗಿ ಗದ್ದೆಯೊಂದರಲ್ಲಿ ಭತ್ತ ನಾಟಿ ಮಾಡಲಿದ್ದಾರೆ.
ಆಗಸ್ಟ್ 11ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಸುಮಾರು 3 ಗಂಟೆಗಳ ಕಾಲ ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ಗದ್ದೆಯೊಂದರಲ್ಲಿ ನಾಟಿ ಮಾಡಲು ನಿರ್ಧರಿಸಿದ್ದಾರೆ. ಆಗಸ್ಟ್ 10ರಂದು ರಾತ್ರಿ ಮೈಸೂರಿಗೆ ತೆರಳಿ ವಾಸ್ತವ್ಯ ಮಾಡಲಿರುವ ಅವರು ಆಗಸ್ಟ್ 11ರಂದು ಬೆಳಗ್ಗೆ 8 ಗಮಟೆಗೆ ಮೈಸೂರಿನ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ದರ್ಶನ ಪಡೆದು ಮಂಡ್ಯಕ್ಕೆ ಭೇಟಿ ನೀಡಲಿದ್ದು ಭತ್ತ ನಾಟಿ ಮಾಡಲು ಮುಂದಾಗಲಿದ್ದಾರೆ.
ಸರ್ಕಾರದ ಮೂರು ಕಚೇರಿ ಬೆಳಗಾವಿಗೆ ಶಿಫ್ಟ್: ಎಚ್ಡಿಕೆ ಘೋಷಣೆ
ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯದ ಮೂಲಕ ರಾಜ್ಯ ರೈತರಿಗೆ ಹತ್ತಿರವಾಗಿದ್ದ ಕುಮಾರಸ್ವಾಮಿ ಇದೀಗ ತಾವೇ ಖುದ್ದಾಗಿ ನಾಟಿ ಮಾಡಲುವ ಮೂಲಕ ರೈತ ಸಮುದಾಯದಲ್ಲಿ ಆತ್ಮಸ್ಥೈರ್ಯ ತುಂಬಿಸುವ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಮುಖ್ಯಮಂತ್ರಿಗಳು ತಾವು ಪ್ರತಿನಿಧಿಸುವ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೋ ಅಥವಾ ರಾಜ್ಯದ ಬೇರೆ ಜಿಲ್ಲೆಗಳಿಗೂ ಇದನ್ನು ವಿಸ್ತರಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಹೆಗ್ಗಡದೇವನಕೋಟೆಯಲ್ಲಿ ಪ್ರಥಮ ಗ್ರಾಮ ವಾಸ್ತವ್ಯ ನಡೆಸಿದ್ದರು. ಅದಾದ ಬಳಿಕ ರಾಜ್ಯದ ಜನತೆ ಒತ್ತಾಯದ ಮೇರೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ವಾಸ್ತವ್ಯ ಮಾಡಿದ್ದರು. ಇದೀಗ ರೈತ ಸಮುದಾಯದಲ್ಲಿ ಆತ್ಮವಿಶ್ವಾಸ ಮೂಡಿಸುವ ನಾಟಿ ಕಾರ್ಯಕ್ಕೆ ಮುಂದಾಗಿರುವ ಸಿಎಂ ಈ ಕಾರ್ಯಕ್ರಮವನ್ನು ಬೇರೆ ಜಿಲ್ಲೆಗಳಿಗೆ ವಿಸ್ತರಿಸುತ್ತಾರಾ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.