ಮುಖ್ಯಮಂತ್ರಿ ಕುಮಾರಸ್ವಾಮಿ ನಾಟಿ ಕಾರ್ಯಕ್ಕೆ ಗದ್ದೆಗಳು ಸಜ್ಜು
ಮಂಡ್ಯ, ಆಗಸ್ಟ್ 10: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಸ್ಟ್ 11ರಂದು 2 ಗಂಟೆಗೆ ನಾಟಿ ಮಾಡಲಿರುವ ಪಾಂಡವಪುರ ತಾಲೂಕಿನ ಅರಳಕುಪ್ಪೆ-ಸೀತಾಪುರ ಗ್ರಾಮದ ಹೊರವಲಯದ ಗದ್ದೆಯಲ್ಲಿ ಸಕಲ ಸಿದ್ಧತೆಯನ್ನು ಮಾಡಲಾಗಿದ್ದು, ಸಿಎಂ ಸ್ವಾಗತಕ್ಕೆ ಗದ್ದೆಗಳು ಸಜ್ಜಾಗಿವೆ.
ಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎತ್ತಿನಗಾಡಿಗಳಿಗೆ ಬಣ್ಣ ಹೊಡೆದು ಸಿಂಗಾರಗೊಳಿಸುತ್ತಿದ್ದರೆ, ಸಿಡಿಎಸ್ ನಾಲೆಯ ಬದಿಯಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ.
ಭತ್ತದ ನಾಟಿ ಮಾಡಿ ನಿಜಕ್ಕೂ ಮಣ್ಣಿನ ಮಗ ಆಗಲಿದ್ದಾರೆ ಎಚ್ಡಿಕೆ
ಸತತ ಬರಗಾಲದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಯಾವುದೇ ಭತ್ತ, ಕಬ್ಬು ಬೆಳೆಗಳನ್ನು ಸಮರ್ಪಕವಾಗಿ ಬೆಳೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರೈತರು ಭತ್ತದ ಕೃಷಿ ಮಾಡುತ್ತಿದ್ದು, ಕುಮಾರಸ್ವಾಮಿ ರೈತ ಮಹಿಳೆಯರ ಜೊತೆ ಭತ್ತದ ನಾಟಿ ಮಾಡಲಿದ್ದಾರೆ.
ನಾಟಿ ಕಾರ್ಯ ನಡೆಸಲು ಸುಮಾರು 5 ಎಕರೆ ಕೃಷಿ ಪ್ರದೇಶವನ್ನು ಸಿದ್ಧಪಡಿಸಲಾಗಿದೆ. ನಾಟಿ ಕಾರ್ಯದಲ್ಲಿ ಭತ್ತದ ನಾಟಿ ಮಾಡುವುದಕ್ಕಾಗಿ ಸುಮಾರು 105 ಮಹಿಳೆಯರು, 50 ಪುರುಷರು ಹಾಗೂ 25 ಜೋಡಿ ಎತ್ತುಗಳು ಭಾಗವಹಿಸಲಿವೆ.
ಎತ್ತುಗಳು ಉಳುಮೆ ಮಾಡಿ ಗದ್ದೆಯನ್ನು ಸಿದ್ಧಪಡಿಸುತ್ತಿದ್ದಂತೆಯೇ ಹಿಂದೆ ಗಂಡಾಳು ಭತ್ತದ ಪೈರುಗಳನ್ನು ಹಾಕಲಿದ್ದಾರೆ. ಬಳಿಕ ಹೆಣ್ಣಾಳು ನಾಟಿ ಆರಂಭಿಸಲಿದ್ದಾರೆ. ಐದು ಎಕರೆ ಪ್ರದೇಶದ ನಾಟಿ ಸಂಪೂರ್ಣವಾಗಿ ಮುಕ್ತಾಯವಾಗುವವರೆಗೂ ಕುಮಾರಸ್ವಾಮಿ ಅವರು ಸ್ಥಳದಲ್ಲಿಯೇ ಇರಲಿದ್ದಾರೆ ಎನ್ನಲಾಗಿದೆ.
ಆಗಸ್ಟ್ 10ರಿಂದ ಸಿಎಂ ರಾಜ್ಯ ಪ್ರವಾಸ, ಇಸ್ರೇಲ್ ಮಾದರಿ ಕೃಷಿಗೆ ಚಾಲನೆ
ನಾಟಿ ಗದ್ದೆಯ ಮಧ್ಯಭಾಗದಲ್ಲಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಮೂವರು ವ್ಯಕ್ತಿಗಳು ಮಾತ್ರ ನಿಲ್ಲುವಂತಹ ಸಣ್ಣ ವೇದಿಕೆಯನ್ನು ನಿರ್ಮಿಸಲಾಗುತ್ತಿದೆ.
ಭತ್ತದ ನಾಟಿ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಸಿಎಂ ಕುಮಾರಸ್ವಾಮಿ ಆ ವೇದಿಕೆಯಿಂದಲೇ ಭಾಷಣ ಮಾಡಲಿದ್ದಾರೆ. ಅದನ್ನು ವೀಕ್ಷಣೆ ಮಾಡುವುದಕ್ಕಾಗಿ ಸಿಡಿಎಸ್ ನಾಲೆಯ ಏರಿಯ ಸಮೀಪ ಎರಡು ಎಲ್ಇಡಿ ಸ್ಕ್ರೀನ್ಗಳ ವ್ಯವಸ್ಥೆಯನ್ನು ಮಾಡಲಾಗುವುದು. ಭತ್ತದ ನಾಟಿಯನ್ನು ವೀಕ್ಷಣೆ ಮಾಡುವುದಕ್ಕಾಗಿ ಆಗಮಿಸುವ ಸಾರ್ವಜನಿಕರಿಗೆ ಸಿಡಿಎಸ್ ನಾಲೆಯ ಏರಿಯ ಮೇಲೆಯೇ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ.
ಈ ಕುರಿತು ಮಾತನಾಡಿದ ಸಚಿವ ಕೆ.ಪುಟ್ಟರಾಜು, ಕುಮಾರಸ್ವಾಮಿ ಭತ್ತದ ನಾಟಿ ಕಾರ್ಯ ನಡೆಸುತ್ತಿರುವುದನ್ನು ಬಿಜೆಪಿ ಟೀಕೆ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲಿದ್ದಾಗ ನಾಲ್ಕು ವರ್ಷ ಜಿಲ್ಲೆಯ ರೈತರು ಯಾವುದೇ ಬೆಳೆಯನ್ನು ಬೆಳೆಯದಂತೆ ನಿಲ್ಲಿಸಿದ್ದರು.
ರಾಜ್ಯದ ರೈತರ ಆತ್ಮಹತ್ಯೆಯಲ್ಲಿ ಜಿಲ್ಲೆಯ ರೈತರು ಮೊದಲಾದಾಗ ಬಿಜೆಪಿ ಕೇಂದ್ರ ಸರಕಾರಕ್ಕೆ ಒತ್ತಡ ತಂದು ರೈತರ ಸಾಲಮನ್ನಾ ಮಾಡಿಸುವುದಕ್ಕೆ ಮುಂದಾಗಲಿಲ್ಲ. ಇದೀಗ ರೈತರಿಗೆ ಆತ್ಮಸ್ಥೈರ್ಯ ತುಂಬಲು ಮುಂದಾಗಿರುವ ಕಾರ್ಯದ ಬಗ್ಗೆ ಟೀಕೆ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಇಸ್ರೇಲ್ ಮಾದರಿ ಕೃಷಿಯ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ರಾಜ್ಯದಲ್ಲಿ ಒಂದು ಉತ್ತರ ಕರ್ನಾಟಕ ಮತ್ತೊಂದು ದಕ್ಷಿಣ ಕರ್ನಾಟಕದಲ್ಲಿ ಎರಡು ಕಡೆ ಇಸ್ರೇಲ್ ಮಾದರಿಯ ಪೈಲಟ್ ಯೋಜನೆಯನ್ನು ರೂಪಿಸಬೇಕೆಂದು ಈಗಾಗಲೇ ಹಲವಾರು ಬಾರಿ ಸಿ.ಎಂ ಸಭೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿ ತಂತ್ರಜ್ಞರೊಂದಿಗೆ ಮತ್ತೊಮ್ಮೆ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ ಎಂದರು.