ಮೈದುಂಬಿದ ಕಾವೇರಿಗೆ ಜುಲೈ 20ರಂದು ಎಚ್ಡಿಕೆ ದಂಪತಿ ಬಾಗಿನ
Recommended Video
ಮೈಸೂರು, ಜುಲೈ 14 : ಮಂಡ್ಯದಲ್ಲಿ ರೈತರ ಹರುಷ ಮುಗಿಲು ಮುಟ್ಟಿದೆ. ತಾಯಿ ಕಾವೇರಿ ಭೋರ್ಗರೆಯುತ್ತಿದ್ದಾಳೆ, ಹಲವು ವರುಷಗಳ ನಂತರ ಕೃಷ್ಣ ರಾಜ ಸಾಗರದ ಮಡಿಲನ್ನು ಸಂಪೂರ್ಣವಾಗಿ ತುಂಬಿದ್ದಾಳೆ.
ಕಳೆದ ವರ್ಷ ಈ ಸಮಯದಲ್ಲಿ ಬರಿದುಬರಿದಾಗಿದ್ದ ಕೆಆರ್ಎಸ್ ಈಗ ಗರಿಷ್ಠಮಟ್ಟ (124.80 ಅಡಿ) ತಲುಪುವ ಹಂತಕ್ಕೆ ಬಂದಿದೆ. ಜುಲೈ 20, ಶುಭ ಶುಕ್ರವಾರದಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಸಹಪತ್ನೀಕರಾಗಿ ಕಾವೇರಿಗೆ ಬಾಗಿನವನ್ನು ಅರ್ಪಿಸಲಿದ್ದಾರೆ.
5 ವರ್ಷದ ಬಳಿಕ ಕೆಆರ್ಎಸ್ ಭರ್ತಿ, ನೀರು ಬಿಡುಗಡೆ, ಪ್ರವಾಹ ಮುನ್ಸೂಚನೆ
ಕೊಡಗು ಜಿಲ್ಲೆಯಲ್ಲಿ ಒಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು, ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟೆಗೆ ಅತ್ಯಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕೆಆರ್ಎಸ್ ರ ಭರ್ತಿಗೆ 3 ಅಡಿಗಳಷ್ಟೇ ಬಾಕಿ ಇವೆ. ಶುಕ್ರವಾರ ಸಂಜೆ 6ರ ವೇಳೆಗೆ ಕೆಆರ್ಎಸ್ನಲ್ಲಿ 121.40 ಅಡಿ ನೀರು ಸಂಗ್ರಹವಾಗಿತ್ತು. 37,950 ಕ್ಯೂಸೆಕ್ಸ್ ಒಳಹರಿವು, 3,916 ಕ್ಯೂಸೆಕ್ಸ್ ಹೊರ ಹರಿವಿತ್ತು. ಒಳ ಹರಿವು ಇದೇ ಪ್ರಮಾಣದಲ್ಲಿದ್ದರೆ ಭಾನುವಾರದೊಳಗೆ ಅಣೆಕಟ್ಟೆ ಭರ್ತಿಯಾಗಲಿದೆ.
ಬಾಗಿನಕ್ಕೆ ಸಿದ್ಧತೆ:
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜು.20ರಂದು ಕೆಆರ್ಎಸ್ ಅಣೆಕಟ್ಟೆಗೆ ಬಾಗಿನ ಅರ್ಪಿಸಲಿದ್ದು, ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲಾಡಳಿತದಿಂದ ಸಿದ್ಧತೆ ನಡೆಸಿದೆ. ಎಲ್ಲ ಕ್ರೆಸ್ಟ್ ಗೇಟುಗಳನ್ನು ಶನಿವಾರ ತೆರೆದಿರುವುದರಿಂದ ಕಾವೇರಿ ಧುಮ್ಮಿಕ್ಕಿ ಸಾಗುತ್ತಿದ್ದಾಳೆ. ನದಿಪಾತ್ರದ ತಗ್ಗು ಪದೇಶಗಳಲ್ಲಿ ಪ್ರವಾಹ ಸ್ಥಿತಿ ಆಗುವ ಸಾಧ್ಯತೆ ಇರುವುದರಿಂದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಮಳೆಯಿಂದಾಗಿ ಮೈಸೂರು ಜಿಲ್ಲೆ ಗ್ರಾಮೀಣ ಪ್ರದೇಶದಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕೆರೆಕಟ್ಟೆಗಳೂ ಭರ್ತಿಯಾಗುತ್ತಿವೆ. ಆದರೆ, ಎಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಕೊಯ್ಲಿಗೆ ಸಿದ್ಧವಾಗಿದ್ದ ಭತ್ತದ ಗದ್ದೆಗಳಲ್ಲಿ ನೀರು ನಿಂತ ಪರಿಣಾಮ ಹಲವು ರೈತರಿಗೆ ನಷ್ಟವಾಗಿದೆ. ಭತ್ತ ಕಟಾವು ಮಾಡಿಸುವುದೂ ಕಷ್ಟವಾಗಿದೆ.
ಕೃಷ್ಣರಾಜಸಾಗರ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಬರುತ್ತಿದ್ದು, ಜಲಾಶಯದಿಂದ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡಲಾಗಿದೆ. ಆದ್ದರಿಂದ ಕಾವೇರಿ ನದಿಯ ಎರಡೂ ದಂಡೆಗಳಲ್ಲಿ ಸಾರ್ವಜನಿಕರು ತಮ್ಮ ಆಸ್ತಿಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ಹೋಗಲು ಅಧಿಕಾರಿಗಳು ತಿಳಿಸಿದ್ದಾರೆ.