ಮತ್ತೆ ರಾಜಕೀಯ ನಿವೃತ್ತಿಯ ಮಾತನ್ನಾಡಿದ ಕುಮಾರಸ್ವಾಮಿ
ಮಂಡ್ಯ, ಅಕ್ಟೋಬರ್ 14: 'ಬಡವರಿಗೆ, ಒಳ್ಳೆಯವರಿಗೆ ಸ್ಪಂದಿಸುವವರಿಗೆ ಇದು ಒಳ್ಳೆಯಕಾಲ ಅಲ್ಲ. ರಾಜಕೀಯವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದವನು ನಾನು. ರಾಜಕಾರಣದಲ್ಲಿ ಮುಂದುವರಿಯಬೇಕು ಎಂಬು ಹುಚ್ಚಿಲ್ಲ. ಏಕೆಂದರೆ ನನ್ನನ್ನು ಪ್ರೀತಿಸುವವರು ನನ್ನಿಂದ ದೂರ ಹೋಗುತ್ತಿದ್ದಾರೆ ಎಂಬ ಭಾವನೆ ಮೂಡಿದೆ' ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಮಂಡ್ಯ ಜಿಲ್ಲೆಯ ಪಾಂಡವಪುರದ ಮಹದೇಶ್ವರಪುರ ಗ್ರಾಮದಲ್ಲಿ ಸೋಮವಾರ ಮಹದೇಶ್ವರ ಸ್ವಾಮಿ ದೇವಸ್ಥಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ನಾನು ಅಧಿಕಾರಕ್ಕೆ ಅಂಟಿಕೊಂಡಿರುವವನಲ್ಲ. ಅಧಿಕಾರದ ಆಸೆಯೂ ಇಲ್ಲ' ಎಂದು ಹೇಳಿದರು.
ದೇಶದಲ್ಲೇ ಕುಮಾರಸ್ವಾಮಿಯಂತಹಾ ಇನ್ನೊಬ್ಬ ರಾಜಕಾರಣಿ ಇಲ್ಲ: ದೇವೇಗೌಡ
ಈ ಹಿಂದೆ ಕೂಡ ಕುಮಾರಸ್ವಾಮಿ ಅವರು ಹಲವು ಬಾರಿ ರಾಜಕೀಯ ನಿವೃತ್ತಿಯ ಮಾತನ್ನಾಡಿದ್ದರು. ರಾಜಕಾರಣದಿಂದ ದೂರ ಉಳಿಯಬೇಕು ಎಂದೆನಿಸುತ್ತದೆ. ಯಾರನ್ನು ನಂಬಬೇಕು ಎಂಬುದು ಗೊತ್ತಾಗದ ಮಟ್ಟಕ್ಕೆ ರಾಜಕಾರಣ ಹೋಗಿದೆ ಎಂದ ಅವರು, ರಾಜಕೀಯದಿಂದ ಬೇಸರ ಉಂಟಾಗಿದ್ದರೂ ಅದರಲ್ಲಿ ಮುಂದುವರಿದಿರುವುದಕ್ಕೆ ಕಾರಣವನ್ನೂ ನೀಡಿದರು.
ಜನರಿಗಾಗಿ ರಾಜಕೀಯದಲ್ಲಿ
'ನಾನು ಮುಖ್ಯಮಂತ್ರಿಯಾಗುವ ವಿಚಾರದಲ್ಲಿ ಮಂಡ್ಯ ಜನರ ಮೇಲೆ ಋಣ ಹೆಚ್ಚಿದೆ. ಏಳೂ ಕ್ಷೇತ್ರಗಳಲ್ಲಿ ಮಂಡ್ಯದ ಜನರು ಗೆಲ್ಲಿಸಿಕೊಟ್ಟಿದ್ದರು. ಮಂಡ್ಯದ ಜನರು ನನ್ನನ್ನು ಮನೆಯ ಮಗನಂತೆ ಇಷ್ಟಪಡುತ್ತಾರೆ. ನಾನು ಸಿಎಂ ಆಗಿದ್ದಾಗ ಬೆಳಗಾವಿಯ ರೈತರ ಸಾಲಗಳನ್ನು ಮನ್ನಾಮಾಡಿದ್ದೆ. ಅಲ್ಲಿನ ಜನರು ಜೆಡಿಎಸ್ಗೆ ಮತ ಹಾಕುವುದಿಲ್ಲ ಎಂದು ಆಗ ಯೋಚನೆ ಮಾಡಲಿಲ್ಲ. ನನ್ನ ಆತ್ಮೀಯರು ದೂರವಾಗುತ್ತಿದ್ದಾರೆ ಎಂಬ ಕಾರಣಕ್ಕೆ ರಾಜಕೀಯ ನಿವೃತ್ತಿಗೆ ಯೋಚನೆ ಮಾಡುತ್ತಿದ್ದೆ. ಆದರೆ ನನ್ನನ್ನು ನಂಬಿರುವ ಜನರಿಗಾಗಿ ರಾಜಕೀಯದಲ್ಲಿ ಉಳಿದುಕೊಂಡಿದ್ದೇನೆ' ಎಂದು ಹೇಳಿದರು.
ಹಲವು ವರ್ಷಗಳೇ ಬೇಕು
ಯಾರೂ ಊಹೆ ಮಾಡದ ರೀತಿಯಲ್ಲಿ ನಾಡಿನಲ್ಲಿ ಅನಾಹುತ ಸಂಭವಿಸಿವೆ. ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ರೈತರ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಇದರಿಂದ ಜನರು ಚೇತರಿಸಿಕೊಳ್ಳಲು ಹಲವಾರು ವರ್ಷಗಳೇ ಬೇಕು. ಅವರ ಬಾಳು ಸರಿದಾರಿಗೆ ಬರಲು ದೇವರ ಅನುಗ್ರಹ ಬೇಕಾಗಿದೆ ಎಂದರು.
ಬಿಎಸ್ವೈ ಕಾಲ್ಗುಣ ಸ್ವಲ್ಪ ಜಾಸ್ತಿಯಾಯಿತು: ಸದನದಲ್ಲಿ ಎಚ್ಡಿಕೆ ಕಾಮಿಡಿ ಪಂಚ್
ಐಟಿ ದಾಳಿ ಅನುಮಾನ ಮೂಡಿಸಿದೆ
ಆದಾಯ ತೆರಿಗೆ ಇಲಾಖೆಯು ಕೇಂದ್ರ ಸರ್ಕಾರದ ಅಧೀನದಲ್ಲಿ ಇದೆ. ಅವರಿಗೆ ಬಂದ ಮಾಹಿತಿ ಆಧಾರದಲ್ಲಿ ದಾಖಲೆಗಳ ಪರಿಶೀಲನೆ ನಡೆಸುವುದು ಸಹಜ. ಆದರೆ ಐಟಿ ಇಲಾಖೆಯವರು ಆಯ್ದ ವ್ಯಕ್ತಿಗಳ ಮೇಲೆ ದಾಳಿ ನಡೆಸುತ್ತಿರುವುದು ಅನುಮಾನ ಮೂಡಿಸಿದೆ. ರಾಜಕೀಯ ವಿರೋಧಿಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಮೀನಮೇಷ ಎಣಿಸುತ್ತಿದೆ
ನಾನು ಮುಖ್ಯಮಂತ್ರಿಯಾಗಿದ್ದಾಗ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದೇನೆ. ಕೇವಲ 14 ತಿಂಗಳಲ್ಲಿ ಲಕ್ಷಾಂತರ ಕುಟುಂಬಗಳ ಸಾಲ ಮನ್ನಾ ಮಾಡಿದ್ದೇನೆ. ಇದು ಜನತೆಗೆ ತಲುಪುವ ಕೆಲಸ ಆಗಲಿಲ್ಲ. ಪ್ರಚಾರ ಕೂಡ ಸಿಗಲಿಲ್ಲ. ನೆರೆ ಸಂತ್ರಸ್ತರಿಗೆ ಕೇಂದ್ರ ಪರಿಹಾರದ ಕುರಿತು ಮಾತನಾಡುವುದಿಲ್ಲ. ಜನರು ಕಟ್ಟುವ ತೆರಿಗೆ ಹಣದಲ್ಲಿ ಪರಿಹಾರ ನೀಡಬಹುದು. ಅದರೆ ರಾಜ್ಯ ಸರ್ಕಾರ ಅದಕ್ಕೆ ಮೀನಮೇಷ ಎಣಿಸುತ್ತಿದೆ ಎಂದು ಟೀಕಿಸಿದರು.
ಮೋದಿ, ಬಿಎಸ್ವೈ ಭಿನ್ನಾಭಿಪ್ರಾಯದ ಬಗ್ಗೆ ಹೊಸ ಹುಳ ಬಿಟ್ಟ ಕುಮಾರಸ್ವಾಮಿ