ಮಂಡ್ಯ ರಾಜಕೀಯ : ರವೀಂದ್ರ ಶ್ರೀಕಂಠಯ್ಯಗೆ ಆಹ್ವಾನ ನೀಡಿದ ಎಚ್ಡಿಕೆ!
ಮಂಡ್ಯ, ನವೆಂಬರ್ 6 : ಸಿ.ಪಿ.ಯೋಗೇಶ್ವರ ಬಿಜೆಪಿ ಸೇರ್ಪಡೆ ಬಳಿಕ ರಾಮನಗರದ ರಾಜಕೀಯ ರಂಗೇರಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ರವೀಂದ್ರ ಶ್ರೀಕಂಠಯ್ಯ ಅವರನ್ನು ಪಕ್ಷಕ್ಕೆ ಆಹ್ವಾನಿಸಿಸುವ ಮೂಲಕ ಮಂಡ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಭಾನುವಾರ ಎಚ್.ಡಿ.ಕುಮಾರಸ್ವಾಮಿ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆಯಲ್ಲಿರುವ ರವೀಂದ್ರ ಶ್ರೀಕಂಠಯ್ಯ ಅವರ ಮನೆಗೆ ಭೇಟಿ ನೀಡಿದ್ದರು. ರವೀಂದ್ರ ಶ್ರೀಕಂಠಯ್ಯ ಅವರನ್ನು ಪಕ್ಷ ಸೇರುವಂತೆ ಆಹ್ವಾನಿಸಿದರು. ಈ ಮೂಲಕ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕಿ ಪಕ್ಷದಿಂದ ಅಮಾನಾತುಗೊಂಡಿರುವ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ಮಂಡ್ಯ : ರವೀಂದ್ರ ಶ್ರೀಕಂಠಯ್ಯ ಜೆಡಿಎಸ್ ಸೇರ್ಪಡೆ?
ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಸಹ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದವರು. ಆದರೆ, ಕುಮಾರಸ್ವಾಮಿ ರವೀಂದ್ರ ಶ್ರೀಕಂಠಯ್ಯ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ರವೀಂದ್ರ ಶ್ರೀಕಂಠಯ್ಯ ಅವರ ನೂರಾರು ಬೆಂಬಲಿಗರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು.
ಶ್ರೀರಂಗ ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ರಾಜಿನಾಮೆ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬೆಂಬಲಿಗರಾದ ರವೀಂದ್ರ ಶ್ರೀಕಂಠಯ್ಯ ಅವರು ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಶ್ರೀರಂಗಪಟ್ಟಣ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವರು ಜೆಡಿಎಸ್ ಸೇರಿದರೆ ಮಂಡ್ಯ ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಲಿದೆ...
ಶೀಘ್ರದಲ್ಲೇ ಜೆಡಿಎಸ್ ಸೇರುತ್ತೇನೆ : ಎ.ಎಸ್.ಪಾಟೀಲ ನಡಹಳ್ಳಿ
ಈಗ ಕಾಲ ಕೂಡಿಬಂದಿದೆ : ಎಚ್ಡಿಕೆ
ರವೀಂದ್ರ ಶ್ರೀಕಂಠಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, 'ಹಿಂದೆಯೇ ರವೀಂದ್ರ ಅವರನ್ನು ಪಕ್ಷಕ್ಕೆ ಆಹ್ವಾನಿಸಬೇಕಿತ್ತು. ಆರೋಗ್ಯ ಸಮಸ್ಯೆ ಹಿನ್ನಲೆಯಲ್ಲಿ ಸಾಧ್ಯವಾಗಲಿಲ್ಲ. ಈಗ ಕಾಲ ಕೂಡಿಬಂದಿದೆ' ಎಂದು ಹೇಳಿದರು.
2018ರ ಚುನಾವಣೆಗೆ ಸ್ಪರ್ಧೆ
ಕಾಂಗ್ರೆಸ್ ತೊರೆದಿರುವ ರವೀಂದ್ರ ಶ್ರೀಕಂಠಯ್ಯ ಅವರು ಜೆಡಿಎಸ್ ಸೇರಿದರೆ 2018ರ ಚುನಾವಣೆಯಲ್ಲಿ ಅವರಿಗೆ ಶ್ರೀರಂಗಪಟ್ಟಣ ಕ್ಷೇತ್ರದಿಂದ ಟಿಕೆಟ್ ನೀಡಲಾಗುತ್ತದೆ ಎಂಬುದು ಸದಸ್ಯದ ಸುದ್ದಿ. ರವೀಂದ್ರ ಶ್ರೀಕಂಠಯ್ಯ ಅವರು ಪಕ್ಷ ಸೇರುವ ಕುರಿತು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಬಂಡಾಯ ಶಾಸಕರಿಗೆ ಬಿಸಿ ಮುಟ್ಟಿಸಿದ ಎಚ್ಡಿಕೆ
ಶ್ರೀರಂಗಪಟ್ಟಣ ಕ್ಷೇತ್ರದ ಸದ್ಯ ಜೆಡಿಎಸ್ ವಶದಲ್ಲಿಯೇ ಇದೆ. ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು. ಆದ್ದರಿಂದ, ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ರವೀಂದ್ರ ಅವರನ್ನು ಕಣಕ್ಕಿಳಿಸುವ ಮೂಲಕ ಎಚ್ಡಿಕೆ ಬಂಡಾಯ ಶಾಸಕರಿಗೆ ಬಿಸಿ ಮುಟ್ಟಿಸಲಿದ್ದಾರೆ.
ನಾಗಮಂಗಲದಲ್ಲೂ ಇದೇ ತಂತ್ರ
ಈಗಾಗಲೇ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಕೆ.ಸುರೇಶ್ ಗೌಡ ಅವರು ಜೆಡಿಎಸ್ ಸೇರಿದ್ದಾರೆ. ಕ್ಷೇತ್ರದ ಬಂಡಾಯ ಶಾಸಕ ಚೆಲುವರಾಯ ಸ್ವಾಮಿ ಅವರಿಗೆ ದೊಡ್ಡ ಗೌಡರು ಟಾಂಗ್ ಕೊಟ್ಟಿದ್ದಾರೆ. ಈಗ ಅದೇ ತಂತ್ರವನ್ನು ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಅನುಸರಿಸಲಾಗುತ್ತಿದೆ.
ಜೆಡಿಎಸ್ ಭದ್ರಕೋಟೆ ಮಂಡ್ಯ
ಕಾಂಗ್ರೆಸ್ ಪಕ್ಷದಲ್ಲಿದ್ದ ಕೆ.ಸುರೇಶ್ ಗೌಡ, ಎಲ್.ಆರ್.ಶಿವರಾಮೇಗೌಡ ಅವರು ಈಗಾಗಲೇ ಜೆಡಿಸ್ ಸೇರಿದ್ದಾರೆ. ಇನ್ನು ಮಂಡ್ಯ ಕ್ಷೇತ್ರದ ಸಂಸದರು ಜೆಡಿಎಸ್ನ ಸಿ.ಎಸ್.ಪುಟ್ಟರಾಜು. ರವೀಂದ್ರ ಶ್ರೀಕಂಠಯ್ಯ ಅವರು ಪಕ್ಷ ಸೇರಿದರೆ ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠವಾಗಲಿದೆ.