ಪ್ರಾಣಿ ಪಕ್ಷಿಗಳಿಗೆ ನೀರು-ಮೇವಿಡುವುದರಲ್ಲಿ ತೃಪ್ತಿ ಕಾಣುವ ಹಲಗೂರಿನ ಪಿಡಿಒ
ಮಂಡ್ಯ, ಮಾರ್ಚ್ 23: ಸರ್ಕಾರಿ ಕೆಲಸವಿದೆ, ಅದನ್ನೇ ಮಾಡಿಕೊಂಡು ಹೋದರಾಯಿತು. ನಮಗ್ಯಾಕೆ ಊರ ಉಸಾಬರಿ ಎಂದು ಅಂದುಕೊಳ್ಳುವವರ ನಡುವೆ ಸದಾ ಒತ್ತಡದ ಕೆಲಸವಿದ್ದರೂ ಒಂದಷ್ಟು ಸಮಯವನ್ನು ಮೀಸಲಿಟ್ಟು ಪ್ರಾಣಿಪಕ್ಷಿಗಳ ಬಗ್ಗೆ ಕಾಳಜಿ ವಹಿಸುತ್ತಿರುವ ವ್ಯಕ್ತಿಯೊಬ್ಬರಿದ್ದಾರೆ. ಅವರೇ ಪಿಡಿಒ ಎ.ಬಿ.ಶಶಿಧರ್.
ಜಿಲ್ಲೆಯ ಹಲಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಶಶಿಧರ್ ಪ್ರಾಣಿಪಕ್ಷಿ ಪ್ರಿಯರು. ಬೇಸಿಗೆ ಬರುತ್ತಿದ್ದಂತೆ ಎಲ್ಲೆಲ್ಲೂ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಬೇಸಿಗೆಯ ದಿನಗಳಲ್ಲಿ ಪ್ರಾಣಿಪಕ್ಷಿಗಳ ಪಾಡು ಕೇಳುವವರಿಲ್ಲ. ಹೀಗಾಗೇ ಶಶಿಧರ್ ತಮ್ಮ ಕೈಲಾದ ಮಟ್ಟಿಗೆ ಪ್ರಾಣಿ ಪಕ್ಷಿಗಳಿಗೆ ಮೇವು, ನೀರು ನೀಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಬಗ್ಗೆ ಇನ್ನೊಂದಿಷ್ಟು ವಿವರ ಇಲ್ಲಿದೆ...
ಬೇಸಿಗೆಯಲ್ಲಿ ಮೇವಿಲ್ಲದೇ ಪರದಾಡುವ ಪ್ರಾಣಿ ಪಕ್ಷಿಗಳು
ಸಾಮಾನ್ಯವಾಗಿ ಬೇಸಿಗೆ ದಿನಗಳು ಬರುತ್ತಿದ್ದಂತೆಯೇ ಎಲ್ಲ ಕಡೆಗಳ ಅರಣ್ಯ ಮತ್ತು ಅರಣ್ಯದಂಚಿನಲ್ಲಿರುವ ಪ್ರಾಣಿ ಪಕ್ಷಿಗಳು ಕುಡಿಯಲು ನೀರು ಮತ್ತು ತಿನ್ನಲು ಮೇವಿಲ್ಲದೆ ಪರದಾಡುತ್ತವೆ. ದೊಡ್ಡ ಪ್ರಾಣಿಗಳು ಎಲ್ಲೋ ಓಡಾಡಿ ಆಹಾರ ಹುಡುಕಿಕೊಂಡರೆ, ಅಳಿಲು, ಇನ್ನಿತರ ಪಕ್ಷಿಗಳು ತಿನ್ನಲು ಆಹಾರಕ್ಕೆ ಪರದಾಡುತ್ತವೆ. ಹೀಗಿರುವಾಗ ಅವುಗಳಿಗೆ ಆಹಾರ ನೀರು ಒದಗಿಸುವ ಮೂಲಕ ಅವುಗಳ ಉಳಿವಿಗೆ ಶ್ರಮ ಪಡುತ್ತಿದ್ದಾರೆ ಶಶಿಧರ್.
ಹವಾಮಾನ ವೈಪರಿತ್ಯದಿಂದ ಆಹಾರದ ಕೊರತೆ: ಒಂದನ್ನೊಂದು ಕೊಂದು ತಿನ್ನುತ್ತಿವೆ ಹಿಮಕರಡಿಗಳು
ಚಾಚೂ ತಪ್ಪದೇ ಮೇವಿಡುವ ಅಧಿಕಾರಿ
ತಾವು ಕೆಲಸ ಮಾಡುತ್ತಿರುವ ಹಲಗೂರು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವುದರಿಂದ ಇಲ್ಲಿ ಪ್ರಾಣಿ, ಪಕ್ಷಿಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವುಗಳಿಗೆ ಸಮರ್ಪಕವಾಗಿ ನೀರು ಮತ್ತು ಆಹಾರ ಸಿಗದೆ ಪ್ರಾಣಕ್ಕೂ ಸಂಚಕಾರ ಬಂದು ಜೀವ ಸಂಕುಲ ಅಳಿದು ಹೋಗುವ ಭಯವೂ ಇಲ್ಲದಿಲ್ಲ. ಹೀಗಾಗಿಯೇ ನೀರು ಹಾಗೂ ಮೇವಿಡುವ ಕೆಲಸವನ್ನು ಚಾಚೂ ತಪ್ಪದೆ ಶಶಿಧರ್ ಮಾಡುತ್ತಿದ್ದಾರೆ.
ಬಿಸಾಡುವ ಬಾಟಲಿಗಳಲ್ಲಿ ನೀರು, ಮೇವು
ಹಲಗೂರಿನ ಹೋಟೆಲ್, ರೆಸ್ಟೊರೆಂಟ್ ಗಳಲ್ಲಿ ನೀರು ಕುಡಿದು ಬಿಸಾಡಿದ ಬಾಟಲಿಗಳನ್ನು ಸಂಗ್ರಹಿಸಿ ತಂದು ಸಣ್ಣ ಡಬ್ಬಿಗಳಾಗಿ ಕತ್ತರಿಸಿ ಗಿಡ, ಮರಗಳಿಗೆ ಕಟ್ಟಿ ಅವುಗಳಲ್ಲಿ ತಮ್ಮ ಮನೆಯಿಂದ ತಂದ ಅಕ್ಕಿ, ಹುರುಳಿ, ರಾಗಿ, ಕಾಳುಗಳನ್ನು ಹಾಕಿಡುತ್ತಿದ್ದಾರೆ. ಇದು ಖಾಲಿಯಾಗುತ್ತಿದ್ದಂತೆ ಮತ್ತೆ ಹಾಕುವುದು ಮತ್ತು ನೀರಿಡುವ ಕಾರ್ಯವನ್ನು ಮಾಡುತ್ತಲೇ ಬರುತ್ತಿದ್ದಾರೆ. ಇದಕ್ಕೆಲ್ಲ ತಗಲುವ ಖರ್ಚನ್ನು ತಾವೇ ಭರಿಸುತ್ತಿದ್ದಾರೆ.
ಚಿಂವ್ ಚಿಂವ್ ಗುಬ್ಬಚ್ಚಿ ಕಣ್ಣಿಗೇಕೋ ಕಾಣದಮ್ಮ...
ಇತರರಿಗೂ ಮಾದರಿ ಇವರ ಕೆಲಸ
ಸಣ್ಣ ಪುಟ್ಟ ಪಕ್ಷಿಗಳು ಬಿಸಿಲಿನ ತಾಪಕ್ಕೆ ಆಹಾರ ನೀರು ಸಿಗದೆ ಜೀವ ಕಳೆದುಕೊಳ್ಳಬಹುದು. ಇಂತಹ ಜೀವ ಸಂಕುಲಗಳಿಗೆ ಒಂದಷ್ಟು ಖರ್ಚು ಮಾಡಿ ನೀರು ಆಹಾರ ಒದಗಿಸುವುದರಿಂದ ನಾವೇನು ಕಳೆದುಕೊಳ್ಳುವುದಿಲ್ಲ. ಬದಲಿಗೆ ಒಂದು ದಿನದಲ್ಲಿ ಹತ್ತಿಪ್ಪತ್ತು ನಿಮಿಷವನ್ನು ಈ ಜೀವಿಗಳಿಗೆ ಮೀಸಲಿಟ್ಟರೆ ಮಾನಸಿಕ ನೆಮ್ಮದಿ ಸಿಗುತ್ತದೆ. ಜತೆಗೆ ಪರಿಸರದ ಜೊತೆ ಭಾವನಾತ್ಮಕ ಸಂಬಂಧವೂ ಬೆಳೆಯುತ್ತದೆ. ನಾವು ಮನುಷ್ಯರಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎನ್ನುತ್ತಾರೆ ಶಶಿಧರ್. ಶಶಿಧರ್ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಅಷ್ಟೇ ಅಲ್ಲ, ಇತರರಿಗೆ ಮಾದರಿ.